
ವಿಜಯಪುರ(ಮೇ.20): ಮೈಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿ ಮಹಿಳೆಯೊಬ್ಬಳನ್ನು ಅಮಾನುಷವಾಗಿ ಕೊಲೆ ಮಾಡಿದ ಆರೋಪಿಗೆ ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಸಿಂದಗಿ ತಾಲೂಕಿನ ಕೊಕಟನೂರ ಗ್ರಾಮದ ಅಕ್ಬರ್ ಉರ್ಫ್ ಅಕ್ಬರಬಾಶಾ ಗಾಲೀಬಸಾಬ್ ಬಾಗವಾನ ಗಲ್ಲು ಶಿಕ್ಷೆಗೀಡಾದ ವ್ಯಕ್ತಿ.
ಅಕ್ಬರ್ ಅದೇ ಗ್ರಾಮದ ಶಮಶಾದ್ ಎಂಬ ಮಹಿಳೆಯನ್ನು ಇಷ್ಟ ಪಡುತ್ತಿದ್ದ. ರಾತ್ರಿ ವೇಳೆ ಶಮಶಾದ್ ಮೂತ್ರ ವಿಸರ್ಜನೆ ಮಾಡುತ್ತಿದ್ದುದನ್ನು ಆರೋಪಿ ನಿಂತು ನೋಡುತ್ತಿದ್ದ. ಇದರಿಂದಾಗಿ ಸಿಟ್ಟಾದ ಶಮಶಾದ್ ಆತನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಳು.
ತೀರ್ಥಹಳ್ಳಿಯಲ್ಲಿ ಡಬ್ಬಲ್ ಮರ್ಡರ್: ಹಣಕ್ಕಾಗಿ ಕೂಲಿ ಕಾರ್ಮಿಕರ ಬರ್ಬರ ಕೊಲೆ!
ಆಗ ಕೋಪೋದ್ರಿಕ್ತನಾದ ಆರೋಪಿ ಅಕ್ಬರ್ ನನ್ನ 4 ಎಕರೆ ಜಮೀನು ಹೋಗಲಿ ನಿನ್ನನ್ನು ಬಿಡಲ್ಲ. ಇಲ್ಲವಾದಲ್ಲಿ ನಿನ್ನನ್ನು ಸುಟ್ಟು ಖಲಾಸ್ ಮಾಡುವುದಾಗಿ ಜೀವದ ಬೆದರಿಕೆ ಹಾಕಿದ್ದ. 2018ರ ಜನವರಿ 27 ರಂದು ಮಹಿಳೆಯು ತನ್ನ ಮನೆಯ ಮುಂದೆ ಮಕ್ಕಳೊಂದಿಗೆ ಕುಳಿತಿದ್ದಾಗ ಏಕಾಏಕಿ ಪೆಟ್ರೋಲ್ ತುಂಬಿದ 2 ಪ್ಲಾಸ್ಟಿಕ್ ಬಾಟಲಿ ಹಾಗೂ ಕಡ್ಡಿ ಡಬ್ಬಿ ಸಮೇತ ಬಂದು ಪೆಟ್ರೋಲ್ ಮೈಮೇಲೆ ಎರಚಿ ಕಡ್ಡಿ ಗೀರಿ ಬೆಂಕಿ ಹಚ್ಚಿ ಪರಾರಿಯಾಗಿದ್ದ.
ಗಂಭೀರ ಗಾಯಗೊಂಡ ಮಹಿಳೆಯನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮಹಿಳೆ 2018ರ ಫೆ. 15 ರಂದು ಅಸುನೀಗಿದ್ದಳು. ಆಗಿನ ಸಿಂದಗಿ ಸಿಪಿಐ ಎಂ.ಕೆ.ದಾಮಣ್ಣವರ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ವಿಚ್ಛೇದನಕ್ಕೆ 1 ಕೋಟಿ ಕೇಳಿದ ಪತ್ನಿ, ಸುಪಾರಿ ಕಿಲ್ಲರ್ಗೆ ಕೊಲೆ ಡೀಲ್ ಒಪ್ಪಿಸಿದ 71ರ ಅಜ್ಜ!
ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸತೀಶ ಎಲ್.ಪಿ. ಅವರು, ಅಭಿಯೋಗದ ಪರ ಹಾಜರುಪಡಿಸಲಾದ ಪುರಾವೆಗಳನ್ನು ಪರಿಶೀಲಿಸಿ, ಆರೋಪಿ ಅಕ್ಬರಬಾಶಾ ಮೇಲಿನ ಆಪಾದನೆ ರುಜುವಾತು ಆಗಿದೆ ಎಂದು ತೀರ್ಮಾನಿಸಿ, ಆತನಿಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಇದೇ ವೇಳೆ ಮೃತಳ ಕುಟುಂಬದವರಿಗೆ ಆರೋಪಿ . 5 ಲಕ್ಷ ಪರಿಹಾರ ರೂಪದಲ್ಲಿ ನೀಡಬೇಕೆಂದು ತೀರ್ಪಿನಲ್ಲಿ ತಿಳಿಸಿದ್ದಾರೆ. ಸರಕಾರದ ಪರವಾಗಿ 1ನೇ ಹೆಚ್ಚುವರಿ ಸರ್ಕಾರಿ ಅಭಿಯೋಜಕಿ ವಿ.ಎಸ್.ಇಟಗಿ ವಾದ ಮಂಡಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ