
ವರದಿ: ಭರತ್ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್
ಉತ್ತರ ಕನ್ನಡ (ಏ.28): ನವಜಾತ ಹೆಣ್ಣು ಶಿಶುವನ್ನು ಅಕ್ರಮವಾಗಿ ಅನ್ಯ ಕೋಮಿನ ದಂಪತಿಗಳಿಗೆ ಮಾರಾಟ ಮಾಡಿ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ತಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯ ಗೌಳಿವಾಡಾ ಗ್ರಾಮದಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಭಾಗಿಯಾದ ಐದು ಮಂದಿ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಿಡಿಪಿಓ ಡಾ.ಲಕ್ಷ್ಮೀದೇವಿ ಎಸ್. ಅವರು ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದ್ದಾರೆ. ಆರು ದಿನಗಳ ಹಿಂದೆ ಜನಿಸಿದ ನವಜಾತ ಶಿಶುವಿನ ಲಾಲನೆ ಪಾಲನೆ ಮಾಡಲು ನನ್ನ ಕೈಯಿಂದ ಸಾಧ್ಯವಿಲ್ಲ ಎಂದು ತಾಯಿಯೇ 25 ಸಾವಿರ ರೂಪಾಯಿಗಳಿಗೆ ಮಾರಾಟ ಮಾಡಿದ್ದಾಳೆ ಎಂದು ತಿಳಿದು ಬಂದಿದೆ.
ಗೌಳಿವಾಡಾ ಗ್ರಾಮದ ನಿವಾಸಿಯಾಗಿರುವ ಶಿಶುವಿನ ತಾಯಿ ಸಾವಿತ್ರಿ ದೊಂಡು ಡೊಯಿಪುಡೆ (26) ಎಂಬ ಮಹಿಳೆಯು ಹತ್ತು ವರ್ಷಗಳ ಹಿಂದೆ ಗಂಡನನ್ನು ತೊರೆದು ತಾಯಿಯ ಮನೆಯಲ್ಲಿ ವಾಸವಾಗಿದ್ದಳು. ನಂತರ ಅನೈತಿಕ ಸಂಬಂಧದಿಂದ ಮಹಿಳೆಯು ಗರ್ಭಿಣಿಯಾಗಿದ್ದು, ಏಪ್ರಿಲ್ 20ರಂದು ಹಳಿಯಾಳದ ತಾಲೂಕು ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮನೀಡಿದ್ದಾಳೆ. ಇದಾದ ನಂತರ ಏಪ್ರಿಲ್ 22ರಂದು ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿ ಗ್ರಾಮಕ್ಕೆ ಮರಳುತ್ತಿರುವ ಸಂದರ್ಭದಲ್ಲಿ ತಾಲೂಕಿನ ಕೆಸರೊಳ್ಳಿ ಕ್ರಾಸ್ ಬಳಿ 25 ಸಾವಿರ ರೂಪಾಯಿಗಳಿಗೆ ಪಕ್ಕದ ಯಲ್ಲಾಪುರ ತಾಲೂಕಿನ ಕಿರುವತ್ತಿ ಗ್ರಾಮದ ರಾಹತ ಪಟೇಲ್ ಹಾಗೂ ಅಬ್ದುಲ್ ರಹಿಮಾನ್ ಪಟೇಲ್ ಎಂಬ ದಂಪತಿಗೆ ಮಾರಾಟ ಮಾಡಿ ಸ್ವಗ್ರಾಮಕ್ಕೆ ತೆರಳಿದ್ದಾಳೆ.
Uttara Kannada: ಮಂಗನ ಕಾಟಕ್ಕೆ ಬೆದರಿದ ಅಂಕೋಲಾದ ಬೊಬ್ರುವಾಡದ ಮಂದಿ: ಹಲವರ ಮೇಲೆ ದಾಳಿ
ಮಗುವಿನ ಕುರಿತು ಮೇಲ್ವಿಚಾರಣೆ ಮಾಡಲೆಂದು ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರು ಆಕೆಯ ಮನೆಗೆ ತೆರಳಿದ ನಂತರ ಈ ವಿಚಾರ ಹೊರಬಿದ್ದಿದೆ. ತಕ್ಷಣವೇ ಆಶಾ ಕಾರ್ಯಕರ್ತೆಯರು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಘಟನೆ ಕುರಿತು ಮಾಹಿತಿ ನೀಡಿದ್ದು, ನಂತರ ಘಟನಾ ಸ್ಥಳಕ್ಕೆ ಸಿಡಿಪಿಓ ಡಾ.ಲಕ್ಷ್ಮೀದೇವಿ, ಪಿಎಸೈ ಶಿವಾನಂದ ನಾವದಗಿ, ಪಿಡಿಓ ಮಹಾಂತೇಶ ಹುರಕಡ್ಡಿ, ವಲಯ ಮೇಲ್ವಿಚಾರಕಿ ರಾಜೇಶ್ವರಿ ಕಟ್ಟಿಮನಿ, ಮಹಿಳಾ ಪೇದೆ ರಮ್ಯಾ ಅವರು ತೆರಳಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮಗು ಮಾರಾಟವಾದ ವಿಷಯ ತಿಳಿದುಬಂದಿದೆ.
Monkey Fever: ಮಂಗನ ಕಾಯಿಲೆಗೆ ಸಿದ್ದಾಪುರ ಮೂಲದ ವೃದ್ಧೆ ಬಲಿ: 7 ಸೋಕಿಂತರು ಪತ್ತೆ
ಘಟನೆ ಕುರಿತು ಮಾಹಿತಿ ಪಡೆದ ಸ್ಥಳೀಯ ಅಧಿಕಾರಿಗಳು ಜಿಲ್ಲಾ ಮಕ್ಕಳ ರಕ್ಷಣಾ ಘಟಕದವರಿಗೆ ಮಾಹಿತಿ ನೀಡಿ ನಂತರ ಯಲ್ಲಾಪುರಕ್ಕೆ ತೆರಳಿ ನವಜಾತ ಶಿಶುವನ್ನು ರಕ್ಷಿಸಿದ್ದಾರೆ. ಮಗುವನ್ನು ಅಕ್ರಮ ಹಾಗೂ ಅನೈತಿಕವಾಗಿ ಸಾಗಾಣಿಕೆ ಮಾಡಲು ಸಂತ್ರಸ್ತೆಯ ಅಣ್ಣನಾದ ಭಯ್ಯಾಜಾನು ಪಟಕಾರೆ ಹಾಗೂ ಅಗಸಲಕಟ್ಟಾ ಗ್ರಾಮದ ಆಶಾ ಕಾರ್ಯಕರ್ತೆ ರೋಜಿ ಲೂಯಿಸ್ ದಬಾಲಿ, ಸಹಕರಿಸಿದ ಮಮತಾಜ್ ಸರ್ದಾರ್ ಹಳಬ ಹಾಗೂ ಮಾರಾಟದ ಮೂಲಕ ಶಿಶುವನ್ನು ಪಡೆದ ರಾಹತ್ ಪಟೇಲ್ ಹಾಗೂ ಅಬ್ದುಲ್ ರಹಿಮಾನ್ ಪಟೇಲ್ ದಂಪತಿಗಳ ವಿರುದ್ಧಸೂಕ್ತ ಕ್ರಮ ಕೈಗೊಳ್ಳುವಂತೆ ಡಾ.ಲಕ್ಷ್ಮೀದೇವಿ ಯವರು ಹಳಿಯಾಳ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ಕುರಿತಂತೆ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ