
ಚಿಕ್ಕಮಗಳೂರು(ಡಿ.4): ಅನೈತಿಕ ಸಂಬಂಧ ವಿಚಾರಕ್ಕೆ ಅತ್ತೆ ಮಗನಿಂದಲೇ ಮಹಿಳೆಯೋರ್ವಳು ಭೀಕರ ಹತ್ಯೆಗೀಡಾದ ಘಟನೆ ಚಿಕ್ಕಮಗಳೂರು ತಾಲೂಕಿನ ಅರೆನೂರು ಗ್ರಾಮದಲ್ಲಿ ನಡೆದಿದ್ದು, ಕೃತ್ಯ ಎಸಗಿ ಪರಾರಿಯಾಗಿದ್ದ ಆರೋಪಿ ಜನಾರ್ಧನನನ್ನು ಆಲ್ದೂರು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಕಳೆದೆರೆಡು ದಿನದ ಹಿಂದೆ ಅರೆನೂರು ಗ್ರಾಮದ ಸಂಧ್ಯಾ ಎಂಬ ಯುವತಿ ಹತ್ಯೆಯಾಗಿದ್ದು, ಆಕೆಯ ಕೊಲೆಗೆ ಆಕೆಯ ಅತ್ತೆ ಮಗನಾದ ಜನಾರ್ಧನನೇ ಕಾರಣ ಎಂದು ತಿಳಿದುಬಂದಿದೆ.
ಸಂಧ್ಯಾ ಸುಮಾರು ನಾಲ್ಕು ವರ್ಷಗಳ ಹಿಂದೆ ತನ್ನ ಗಂಡನನ್ನು ಬಿಟ್ಟು ಅರೆನೂರು ಗ್ರಾಮದಲ್ಲಿರುವ ತವರು ಮನೆಗೆ ಬಂದು ಪೋಷಕರೊಂದಿಗೆ ವಾಸವಾಗಿದ್ದರು. ಇದೇ ಸಮಯದಲ್ಲಿ, ಸಂಧ್ಯಾ ಮತ್ತು ಆಕೆಯ ಅತ್ತೆ ಮಗನಾದ ಜನಾರ್ಧನನ ನಡುವೆ ಅನೈತಿಕ ಸಂಬಂಧ ಬೆಳೆದಿತ್ತು. ಇತ್ತೀಚೆಗೆ ಈ ಸಂಬಂಧದಲ್ಲಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ನಿರಂತರವಾಗಿ ಕಿರಿಕ್ ನಡೆಯುತ್ತಿತ್ತು ಎನ್ನಲಾಗಿದೆ.
ಹತ್ಯೆಗೂ ಮುನ್ನ ಸಂಧ್ಯಾ ಅರೆನೂರಿನ ಮನೆಯಿಂದ ಕಾಣೆಯಾಗಿದ್ದರು. ಆಕೆಯ ನಾಪತ್ತೆ ಬಗ್ಗೆ ಪೋಷಕರು ದೂರು ಕೂಡ ದಾಖಲಿಸಿದ್ದರು. ನಾಪತ್ತೆಯಾಗಿದ್ದ ಸಂಧ್ಯಾ ಮನೆಗೆ ಹಿಂದಿರುಗಿದ್ದರು. ಆದರೆ, ಆಕೆ ಮನೆಗೆ ಬಂದ ಮಾರನೇ ದಿನವೇ ಏಕಾಏಕಿ ಎಂಟ್ರಿ ಕೊಟ್ಟ ಆರೋಪಿ ಜನಾರ್ಧನ ಹಳೆಯ ಮನಸ್ತಾಪದ ಹಿನ್ನೆಲೆಯಲ್ಲಿ ಆಕೆಯ ಮೇಲೆ ದಾಳಿ ಮಾಡಿ ಚಾಕುವಿನಿಂದ ಮನಬಂದಂತೆ ಇರಿದು ಕತ್ತು ಕುಯ್ದು ಪರಾರಿಯಾಗಿದ್ದ ಹಂತಕ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಂಧ್ಯಾ ಕೆಲಕಾಲ ಜೀವನ್ಮರಣ ಹೋರಾಟ ನಡೆಸಿದರೂ, ಚಾಕು ಇರಿತದಿಂದಾದ ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಮೃತಪಟ್ಟಿದ್ದರು.
ಆರೋಪಿ ಬಂಧನ
ಈ ಕೊಲೆ ಕೃತ್ಯ ಎಸಗಿ ಎಸ್ಕೇಪ್ ಆಗಿದ್ದ ಆರೋಪಿ ಜನಾರ್ಧನನನ್ನು ಆಲ್ದೂರು ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದು, ಘಟನೆಯ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ