
ಕಾರಟಗಿ(ಜು.16): ಮಹಿಳೆಯೊಂದಿಗೆ ಪ್ರಣಯದಾಟ, ಮನೆಪಾಠದ ನೆಪದಲ್ಲಿ ಮಕ್ಕಳೊಂದಿಗೆ ವಿಕೃತಿ ಮೆರೆದಿದ್ದ ಸರ್ಕಾರಿ ಶಾಲೆಯ ಶಿಕ್ಷಕ ಮಹ್ಮದ ಅಜರುದ್ದೀನ್ ವಿರುದ್ಧ ಕೊನೆಗೂ ಫೋಕ್ಸೊ ಕಾಯ್ದೆಯಡಿ ಶುಕ್ರವಾರ ಸಂಜೆ ಪ್ರಕರಣ ದಾಖಲಾಗಿದೆ. ಬಾಧಿತ ಮಹಿಳೆ ಈಗಾಗಲೇ ದೂರು ನೀಡಿದ್ದು, ಶಿಕ್ಷಕ ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾನೆ. ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶಗೌಡ ಪೊಲೀಸರಿಗೆ ಶುಕ್ರವಾರ ದೂರು ನೀಡಿದ್ದು, ಈಗಾಗಲೇ ವೈರಲ್ ಆಗಿರುವ ವಿಡಿಯೋಗಳು ಹಾಗೂ ಮಾಧ್ಯಮಗಳಲ್ಲಿ ವರದಿಯಾಗಿದ್ದರ ಹಿನ್ನೆಲೆ ಶಿಕ್ಷಕ ಈಗ ಮತ್ತು ಹಿಂದೆ ವಾಸಿಸುತ್ತಿದ್ದ ಮನೆಯ ನೆರೆಹೊರೆಯವರೊಂದಿಗೆ ವಿಚಾರಣೆ ನಡೆಸಿದ್ದೇವೆ. ಇದಕ್ಕಾಗಿ ತ್ರಿಸದಸ್ಯರ ತಂಡ ರಚಿಸಿ ಅಲ್ಲಲ್ಲಿ ವಿಚಾರಣೆ ನಡೆಸಿದಾಗ ಗೃಹಪಾಠದ ನೆಪದಲ್ಲಿ ಶಿಕ್ಷಕ ಮಹ್ಮದ ಅಜರುದ್ದೀನ್ ಪಾಠಕ್ಕೆ ಬರುತ್ತಿದ್ದ ಮಕ್ಕಳ ಅಂಗಾಂಗ ಮುಟ್ಟಿ ವಿಕೃತಿ ಮೆರೆಯುತ್ತಿದ್ದ ಎಂಬುದು ಬಯಲಾಗಿದೆ.
ಶಿಕ್ಷಕ ಮಹ್ಮದ ಅಜರುದ್ದೀನ್ ವಿರುದ್ದ ಕಾರಟಗಿ ಪೊಲೀಸ್ ಠಾಣೆಯಲ್ಲಿ 144/2022 ಸೆಕ್ಷನ್ 8, 12 ಫೋಕ್ಸೊ ಕಾಯ್ದೆ 2012ರಡಿ ಪ್ರಕರಣ ದಾಖಲಾಗಿದೆ.
ಕಾಮುಕ ಶಿಕ್ಷಕ ಅರೆಸ್ಟ್, ಅಜುರುದ್ದೀನ್ ಕಾಮಪುರಾಣದ ಹಿಂದೆ ಲವ್ ಜಿಹಾದ್..!
ಕಾಮುಕ ಶಿಕ್ಷನ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ಮಗು ಪತ್ತೆ
ಸರ್ಕಾರಿ ಶಾಲೆ ಶಿಕ್ಷಕನ ಅಂಗಾಂಗ ಚೇಷ್ಟೆಯ ವಿಕೃತಿಯಾಟಕ್ಕೆ ಬಲಿಯಾಗಿದ್ದ ಮಗುವನ್ನ ಕೊನೆಗೂ ಅಧಿಕಾರಿಗಳ ತಂಡ ಕಳೆದ ಬುಧವಾರ ರಾತ್ರಿ ಪತ್ತೆ ಹಚ್ಚಿ ನಿರಾಳವಾಗಿದೆ. ಕೊಪ್ಪಳ- ರಾಯಚೂರು ಜಿಲ್ಲಾದ್ಯಂತ ಸಂಚಲನ ಮೂಡಿಸಿದ್ದ ಸರ್ಕಾರಿ ಶಾಲೆ ಶಿಕ್ಷಕ ಮಹ್ಮದ್ ಅಜರುದ್ದೀನ್ ಕಾಮಚೇಷ್ಟೆಯಾಟಕ್ಕೆ ಬಲಿಯಾಗಿದ್ದ ಮಗುವಿನ ವಿಡಿಯೋ ಹಿಡಿದು ಕಳೆದ ಎರಡ್ಮೂರು ದಿನಗಳಿಂದ ಪಟ್ಟಣದಲ್ಲಿ ಪತ್ತೆ ಕಾರ್ಯಕ್ಕಿಳಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡಕ್ಕೆ ಬುಧವಾರ ರಾತ್ರಿ ಶಿಕ್ಷಕನ ರಾತ್ರಿ ಆಟದ ಜಾಲಕ್ಕೆ ಸಿಲುಕಿದ್ದ ಮಗು ತಾಲೂಕಿನ ಮರ್ಲಾನಹಳ್ಳಿಯಲ್ಲಿ ಪತ್ತೆಯಾಗಿದೆ.
ಮಕ್ಕಳ ಹಕ್ಕುಗಳ ಜಿಲ್ಲಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಶಿವಲೀಲಾ ಹೊನ್ನೂರು ಮತ್ತು ಶಿಕ್ಷಣ ಇಲಾಖೆ ಪ್ರಭಾರಿ ಶಿಕ್ಷಣಾಧಿಕಾರಿ ಸುರೇಶಗೌಡ ಇವರ ನೇತೃತ್ವದ ತನಿಖಾ ತಂಡ ಇಲ್ಲಿನ ಇಂದಿರಾನಗರ, ಅಬ್ದುಲ್ ನಜೀರ್ಸಾಬ್ ಕಾಲನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳ ಶಿಕ್ಷಕರು, ಅಡುಗೆ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಪೊಲೀಸರಿಂದಲೂ ಮಾಹಿತಿ ಪಡೆದರು ಮಗುವಿನ ಸುಳಿವು ಸಿಕ್ಕಿರಲಿಲ್ಲ.
ತನಿಖಾ ತಂಡ ಬೆನ್ನುಬಿಡದೆ ಮಕ್ಕಳನ್ನು ಬಾಯಿ ಬಿಡಿಸಲು ಸಫಲಗೊಂಡರು. ಆ ಮಗು ತಾಲೂಕಿನ ಮರ್ಲಾನಹಳ್ಳಿ ಗ್ರಾಮದಲ್ಲಿ ಇರುವ ಕುರಿತು ಪತ್ತೆ ಹಚ್ಚಿ ಅಲ್ಲಿಗೆ ತೆರಳಿದಾಗ ವಿಡಿಯೋದಲ್ಲಿರುವ ಮಗು ತನ್ನ ಪಾಲಕರೊಂದಿಗೆ ಇರುವಾಗ ಸಿಕ್ಕಿದ್ದಾನೆ.
ಶಿಕ್ಷಕನ ರಾಸಲೀಲೆ ವಿಡಿಯೋ ವೈರಲ್, ಕಾಮುಕನ ಮತ್ತೊಂದು ಅಸಲಿ ಮುಖ ಬಿಚ್ಚಿಟ್ಟ ಗ್ರಾಮಸ್ಥರು
ಇನ್ನು ವಿಚಿತ್ರವೆಂದರೆ ವಿಡಿಯೋದಲ್ಲಿ ವಿಕೃತ ಆಟಕ್ಕೆ ಬಲಿಯಾಗಿದ್ದ ಮಗುವಿನ ಜತೆಗೆ ಇನ್ನೊಂದೆಡೆ ಇದ್ದ ಮಗು ಸಹ ಅಲ್ಲಿಯೇ ದೊರೆಕಿದ್ದು ಇವರಿಬ್ಬರೂ ಸಹೋದರರೆಂದು ತನಿಖಾ ತಂಡಕ್ಕೆ ಅಚ್ಚರಿ ಮೂಡಿಸಿದೆ. ನಂತರ ರಾತ್ರಿಯವರೆಗೂ ತನಿಖಾ ತಂಡ ಈ ಇಬ್ಬರು ಮಕ್ಕಳನ್ನು ಮತ್ತು ಅವರ ಪಾಲಕರನ್ನು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಈ ವಿಶೇಷ ತಂಡ ಜು. 14ರಂದು ತನಿಖೆಯಲ್ಲಿ ಬೆಳಕಿಗೆ ಬಂದ ಎಲ್ಲ ಮಾಹಿತಿ, ಸಂಗತಿ ಗಳ ಸಮಗ್ರ ವರದಿಯನ್ನು ಸಿದ್ಧಪಡಿ ಜು.15ರಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಬೆಂಗಳೂರಿನ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಸಲ್ಲಿಸಲಿದೆ ಎಂದು ಮೂಲಗಳು ತಿಳಿಸಿವೆ.
ಈ ವೇಳೆ ಶಿಕ್ಷಣ ಇಲಾಖೆಯ ರಾಘವೇಂದ್ರ, ಸುಮಂಗಳಮ್ಮ, ಸಿಆರ್ಪಿಗಳಾದ ಭೀಮಣ್ಣ ಕರಡಿ, ತಿಮ್ಮಣ್ಣ ನಾಯಕ, ರಾಘವೇಂದ್ರ ಕಂಠಿ, ಯಶೋದಮ್ಮ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಯಮನಮ್ಮ, ಸಮಾಲೋಚಕ ರವಿ ಬಡಿಗೇರ್ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ