
ರಾಜಸ್ಥಾನ: ಮದುವೆಗೆ ಮುನ್ನ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ರಾಜಸ್ಥಾನದ ಧೌಲ್ಪುರ ಜಿಲ್ಲೆಯ ಸರಾನಿಖೇಡ ಗ್ರಾಮದಲ್ಲಿ ನಡೆದಿದೆ. .ವರದಕ್ಷಿಣೆಯಾಗಿ 180 ಸಿಸಿ ಪಲ್ಸರ್ ಬೈಕ್ ಕೊಡಬೇಕೆಂದು ವರ ಕೇಳಿದ್ದ ಎನ್ನಲಾಗಿದೆ. ಬೈಕ್ ಕೊಡದಿದ್ದರೆ ಮದುವೆಯಾಗುವುದಿಲ್ಲ ಎಂದು ವರ ಹಠ ಹಿಡಿದಿದ್ದ. ಇದರಿಂದ ಮಾನಸಿಕ ಒತ್ತಡಕ್ಕೆ ಒಳಗಾದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಘಟನೆ ಹಿನ್ನೆಲೆ:
ಮಾಧ್ಯಮ ವರದಿಗಳ ಪ್ರಕಾರ, ರಘುವೀರ್ ಸಿಂಗ್ ಜಾಟವ್ ಅವರ 20 ವರ್ಷದ ಮಗಳು ರೂಬಿಗೆ ಧೌಲ್ಪುರ ಜಿಲ್ಲೆಯ ಪಿಪೆಹರ ಗ್ರಾಮದ ನಿವಾಸಿ ರವಿ ಜೊತೆ ನಿಶ್ಚಿತಾರ್ಥವಾಗಿತ್ತು. ಮಾರ್ಚ್ 1 ರಂದು ಇವರಿಬ್ಬರ ಮದುವೆ ನಿಗದಿಯಾಗಿತ್ತು. ಕುಟುಂಬಸ್ಥರು ಸಂಭ್ರಮದಿಂದ ಮದುವೆಯ ತಯಾರಿ ನಡೆಸುತ್ತಿದ್ದರು. ಗುರುವಾರ ರೂಬಿ ಕುಟುಂಬಸ್ಥರು ಮದುವೆ ಸಾಮಗ್ರಿ ಖರೀದಿಸಲು ಮಾರುಕಟ್ಟೆಗೆ ಹೋಗಿದ್ದರು. ಈ ವೇಳೆ ರವಿ, ರೂಬಿ ತಂದೆಯಿಂದ 180 ಸಿಸಿ ಪಲ್ಸರ್ ಬೈಕ್ ಕೇಳಿದ್ದ. ರೂಬಿ ತಂದೆ ಮಾರುಕಟ್ಟೆಯಲ್ಲಿ ಬೈಕ್ ಬಗ್ಗೆ ವಿಚಾರಿಸಿದಾಗ ಆ ಬೈಕ್ ಮಾರುಕಟ್ಟೆಯಲ್ಲಿ ಲಭ್ಯವಿರಲಿಲ್ಲ. ಬೈಕ್ ಸಿಗದಿದ್ದರೆ ಮದುವೆಯಾಗುವುದಿಲ್ಲ ಎಂದು ರವಿ ಹಠ ಹಿಡಿದ. ಕುಟುಂಬಸ್ಥರು ಮಾರುಕಟ್ಟೆಯಿಂದ ವಾಪಸ್ ಬಂದಾಗ ರೂಬಿ ನೇಣು ಬಿಗಿದುಕೊಂಡಿರುವುದನ್ನು ಕಂಡು ದಿಗ್ಭ್ರಮೆಗೊಂಡರು.
ಇದನ್ನೂ ಓದಿ: Viral News: ಮದುಮಗನ ಸಿಬಿಲ್ ಸ್ಕೋರ್ ಕಡಿಮೆ ಎಂದು ಮದುವೆಯನ್ನೇ ಕ್ಯಾನ್ಸಲ್ ಮಾಡಿದ ವಧುವಿನ ಕುಟುಂಬ!
ಪೊಲೀಸರಿಂದ ತನಿಖೆ
ಘಟನೆಯ ಮಾಹಿತಿ ತಿಳಿದ ಪಚಗಾಂವ್ ಚೌಕಿ ಉಸ್ತುವಾರಿ ಅರುಣ್ ಶರ್ಮಾ ತಮ್ಮ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ವಶಕ್ಕೆ ಪಡೆದರು. ಶುಕ್ರವಾರ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಪೊಲೀಸರು ರವಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವರದಕ್ಷಿಣೆ ಕಿರುಕುಳ, ಆತ್ಮಹತ್ಯೆ ಪ್ರಕರಣ ಗಂಭೀರ ಪ್ರಕರಣವಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ