
ನವದೆಹಲಿ(ಜ.15): ರಾಜಧಾನಿ ನವದೆಹಲಿಯ 400ಕ್ಕೂ ಹೆಚ್ಚು ಶಾಲೆಗಳಿಗೆ ಕಳೆದ ಕೆಲ ತಿಂಗಳಿನಿಂದ ಹುಸಿ ಬಾಂಬ್ ಬೆದರಿಕೆ ಹಾಕಿದ್ದ ಪ್ರಕರಣ ಸಂಬಂಧ ಪಿಯುಸಿ ಓದುತ್ತಿರುವ ಬಾಲಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನ ಪ್ರಾಥಮಿಕ ವಿಚಾರಣೆ ವೇಳೆ, ಬಾಲಕನ ಕುಟುಂಬವು, ಸಂಸತ್ ಮೇಲಿನ ದಾಳಿಯಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದ ಉಗ್ರ ಅಫ್ಜಲ್ ಗುರುವನ್ನು ಬೆಂಬಲಿಸಿದ್ದ ಸರ್ಕಾರೇತರ ಸಂಸ್ಥೆಯೊಂದರ ಜೊತೆ ನಂಟು ಹೊಂದಿರುವ ವಿಷಯ ಬೆಳಕಿಗೆ ಬಂದಿದೆ.
ಜೊತೆಗೆ ಬಾಲಕನ ಕುಟುಂಬ ಕೂಡಾ ಅಫ್ಜಲ್ ಗುರು ಬಗ್ಗೆ ಅನುಕಂಪ ಹೊಂದಿದ್ದು ಕಂಡುಬಂದಿದೆ. ಜೊತೆಗೆ ಕುಟುಂಬದ ನಂಟಿರುವ ಎನ್ಜಿಒ, ಪ್ರಮುಖ ರಾಜಕೀಯ ಪಕ್ಷವೊಂದನ್ನು ಬೆಂಬಲಿಸುತ್ತಿದೆ ಎಂದು ದೆಹಲಿ ಪೊಲೀಸರು ಮಂಗಳವಾರ ಸ್ಫೋಟಕ ಮಾಹಿತಿ ನೀಡಿದ್ದಾರೆ. ಆದರೆ ಬಂಧಿತ ಬಾಲಕ, ಎನ್ಜಿಒ ಮತ್ತು ರಾಜಕೀಯ ಪಕ್ಷದ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ.
ಜಮ್ಮು ಕಾಶ್ಮೀರ ಚುನಾವಣೆ: ಸಂಸತ್ ಮೇಲಿನ ದಾಳಿಕೋರ ಅಫ್ಜಲ್ ಗುರು ಸೋದರನಿಂದ ನಾಮಪತ್ರ
ಆರೋಪಿ ಬಾಲಕ ಕಳೆದ ವಾರ ಕೂಡಾ ಕೆಲವೊಂದು ಶಾಲೆಗಳಿಗೆ ಇ ಮೇಲ್ ಮೂಲಕ ಬೆದರಿಕೆ ಕರೆ ರವಾನಿಸಿದ್ದ. ಈ ಬಗ್ಗೆ ತನಿಖೆ ಆರಂಭಿಸಿದಾಗ ಬಾಲಕನ ಸುಳಿವು ನೀಡಿತ್ತು. ಈ ವೇಳೆ ಆತನ ಲ್ಯಾಪ್ಟಾಪ್ ಪರಿಶೀಲಿಸಿದಾಗ ಕಳೆದೊಂದು ವರ್ಷದಿಂದಲೂ ಆತ ವರ್ಚ್ಯುವಲ್ ಪ್ರೈವೇಟ್ ನೆಟ್ವರ್ಕ್ (ವಿಪಿಎನ್) ಬಳಸಿ ಹುಸಿ ಬಾಂಬ್ ಬೆದರಿಕೆ ಹಾಕಿದ್ದು ಕಂಡುಬಂದಿದೆ. ಹೀಗಾಗಿ ಪ್ರಕರಣವನ್ನು ಬೇಧಿಸುವುದು ಇದುವರೆಗೂ ಸಾಧ್ಯವಾಗಿರಲಿಲ್ಲ.
ವಿಚಾರಣೆ ವೇಳೆ ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಬಾಲಕ ಹುಸಿ ಬಾಂಬ್ ಕರೆ ಮಾಡುತ್ತಿದ್ದ ಎಂದು ಕಂಡುಬಂದಿದೆ. ಆದರೆ ಆತನ ಪೋಷಕರು, ಅಫ್ಜಲ್ ಗುರು ಅನುಕಂಪ ಹೊಂದಿರುವ ಎನ್ಜಿಒ ಜೊತೆ ನಂಟು ಹೊಂದಿರುವ ಕಾರಣ ಇತರೆ ಆಯಾಮಗಳಿಂದಲೂ ಪ್ರಕರಣದ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ