
ಬೆಂಗಳೂರು(ಜ.14): ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದ ಚಾಮರಾಜಪೇಟೆಯ ಮೂರು ಸೀಮೆ ಹಸುಗಳ ಕೆಚ್ಚಲು ಕೊಯ್ದು ಕ್ರೌರ್ಯ ಮೆರೆದಿದ್ದ ಪ್ರಕರಣ ಸಂಬಂಧ ಬಿಹಾರ ಮೂಲದ ಆರೋಪಿಯನ್ನು ಕಾಟನ್ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗೆ ಜ.240 ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಈತ ಮದ್ಯದ ಅಮಲಲ್ಲಿ ಈ ಕೃತ್ಯ ಎಸಗಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ.
ಬಿಹಾರದ ಚಂಪಾರಣ್ಯ ಮೂಲದ ಶೇಖ್ ನಸ್ರು (30) ಬಂಧಿತ ಆರೋಪಿ. ಭಾನುವಾರ ಮುಂಜಾನೆ ಚಾಮರಾಜಪೇಟೆಯ ವಿನಾಯಕ ನಗರದ ಕರ್ಣ ಎಂಬವರ ಮನೆ ಬಳಿ ಶೆಡ್ನಲ್ಲಿ ಕಟ್ಟಲಾಗಿದ್ದ 3 ಸೀಮೆ ಹಸುವಿನ ಕೆಚ್ಚಲು ಕತ್ತರಿಸಲಾಗಿತ್ತು. ಈ ಕುರಿತು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಕ್ಷಿಪ್ರ ಕಾರಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೆಚ್ಚಲು ಕೊಯ್ದು ಹಸುಗಳ ಮೇಲೆ ಕ್ರೌರ್ಯ, ಬಿಗ್ಬಾಸ್ ಚೈತ್ರಾ ಕುಂದಾಪುರ ತೀವ್ರ ಖಂಡನೆ
ಮದ್ಯದ ಅಮಲಲ್ಲಿ ಕೃತ್ಯ:
ಆರೋಪಿ ಶೇಕ್ ನಸ್ರು ವಿನಾಯಕನಗರದ ಘಟನಾ ಸ್ಥಳದ ಸುಮಾರು 50 ಮೀ. ದೂರದಲ್ಲಿರುವ ಪ್ಲಾಸ್ಟಿಕ್ ಮತ್ತು ಬಟ್ಟೆ ಬ್ಯಾಗ್ ಹೊಲಿಯುವ ಅಂಗಡಿಯಲ್ಲಿ ನಾಲೈದು ವರ್ಷಗಳಿಂದ ಸಹಾಯಕನಾಗಿ ಕೆಲಸ ಮಾಡಿಕೊಂಡಿದ್ದ. ಈತ ಶನಿವಾರ ರಾತ್ರಿ ಮದ್ಯ ಸೇವಿಸಿದ್ದ. ಮದ್ಯದ ಅಮಲಿನಲ್ಲೇ ಭಾನುವಾರ ಮುಂಜಾನೆ ಸುಮಾರು 3 ಗಂಟೆಗೆ ಕರ್ಣ ಅವರ ಮನೆ ಬಳಿಗೆ ಬಂದಿದ್ದು, ಶೆಡ್ನಲ್ಲಿ ಕಟ್ಟಲಾಗಿದ್ದ ಮೂರು ಸೀಮೆ ಹಸುಗಳನ್ನು ಕಂಡು ಅದರ ಕೆಚ್ಚಲನ್ನು ಬ್ಲಡ್ನಲ್ಲಿ ಕುಯ್ದು ಪರಾರಿಯಾಗಿದ್ದ ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಬಂಧಿತ ಶೇಕ್ ನಸ್ರು ನನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿರುವ ಕಾಟನ್ ಪೇಟೆ ಠಾಣೆ ಪೊಲೀಸರು, ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಧೀಶರು ಆರೋಪಿಯನ್ನು ಜ.24ರವರೆಗೆನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
ಚಾಮರಾಜಪೇಟೆ ವಿನಾಯಕನಗರನಿವಾಸಿಕರ್ಣ ಅವರು ತಮ್ಮ ಮನೆ ಸಮೀಪದ ಶೆಡ್ನಲ್ಲಿ ಕಟ್ಟಿದ್ದ ಮೂರು ಸೀಮೆ ಹಸುಗಳ ಕೆಚ್ಚಲನ್ನು ಭಾನುವಾರ ಮುಂಜಾನೆ ಕತ್ತರಿಸಲಾಗಿತ್ತು. ಸುಮಾರು 4.30ರ ಸುಮಾರಿಗೆ ಪಕ್ಕದ ಮನೆಯವರು ರಕ್ತ ಸೋರುತ್ತಿರುವುದನ್ನು ಕಂಡು ಕರ್ಣಗೆ ಮಾಹಿತಿ ನೀಡಿದ್ದರು. ಬಳಿಕ ಕರ್ಣ ಪಶು ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಿದ್ದರು. ಈ ಸಂಬಂಧ ಕಾಟನ್ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹಸುಗಳ ಕೆಚ್ಚಲು ಕುಯ್ದ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಸಂಸದ ಪಿ.ಸಿ.ಮೋಹನ್, ಸ್ಥಳೀಯ ಶಾಸಕ ಹಾಗೂ ಸಚಿವ ಜಮೀರ್ ಅಹಮ್ಮದ್ ಖಾನ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು.
ಮೂಕಪ್ರಾಣಿಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿದ್ದರು. ಈ ವೇಳೆ ಆರ್.ಅಶೋಕ್ ಅವರು ಹಸುಗಳ ಮಾಲೀಕ ಕರ್ಣನಿಗೆ ವೈಯಕ್ತಿಕವಾಗಿ 1 ಲಕ್ಷ ರು. ನೀಡುವುದಾಗಿ ಘೋಷಿಸಿದ್ದರು. ಸಚಿವ ಜಮೀರ್ ಅಹಮ್ಮದ್ ಖಾನ್ ಕರ್ಣನಿಗೆ ಮೂರು ಹಸುಗಳನ್ನು ವೈಯಕ್ತಿಕವಾಗಿ ಕೊಡಿಸುವುದಾಗಿ ಭರವಸೆ ನೀಡಿದ್ದರು. ಈ ರಾಕ್ಷಸಿ ಕೃತ್ಯ ಖಂಡಿಸಿ ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಘಟನಾ ಸ್ಥಳದಲ್ಲಿ ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಆಗಬಿಗುವಿನವಾತಾವರಣ ನಿರ್ಮಾಣವಾಗಿತ್ತು.
ಯಾರದ್ದೋ ಕೈವಾಡ ಇದೆ: ಹಸು ಮಾಲೀಕ
ಪೊಲೀಸರು ಬಂಧಿಸಿರುವ ಆರೋಪಿ ಮಾನಸಿಕ ಅಸ್ವಸ್ಥ ಅಲ್ಲ, ಮುಂಜಾನೆ ಮೂರೂವರೆ ಗಂಟೆಗೆ ಯಾವ ಬಾರ್ ತೆರೆದಿರುತ್ತೆ ? ಹಸುಗಳ ಕೆಚ್ಚಲು ಕತ್ತರಿಸಿದ ಘಟನೆ ಹಿಂದೆ ಬೇರೆಯವರ ಕೈವಾಡ ಇರುವಂತಿದೆ. ಯಾರೋ ಹೇಳಿಕೊಟ್ಟು ಈ ಕೆಲಸ ಮಾಡಿಸಿರಬಹುದು. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಪೊಲೀಸರು ತನಿಖೆ ನಡೆಸಿ ಪತ್ತೆಹಚ್ಚಬೇಕು. ಯಾರೇ ಇದ್ದರೂ ಬಂಧಿಸಬೇಕು. ಹೆತ್ತ ತಾಯಿಯ ಹಾಲು ಕುಡಿದವರು ಈ ಕೆಲಸ ಮಾಡುವುದಿಲ್ಲ. ಇದರಲ್ಲಿ ಯಾವುದೇ ರಾಜಕೀಯ ಬೇಡ. ನನಗೆ ನ್ಯಾಯಬೇಕು ಎಂದು ಹಸುಗಳ ಮಾಲೀಕ ಕರ್ಣ ಆಗ್ರಹಿಸಿದ್ದಾರೆ
ಹಸು ಮಾಲೀಕನ ಮನೆಯಲ್ಲಿ ಇಂದು ಬಿಜೆಪಿಗರ ಪೂಜೆ
ಬೆಂಗಳೂರು: ಚಾಮರಾಜಪೇಟೆಯಲ್ಲಿ ಕೆಚ್ಚಲು ಕತ್ತರಿಸಲಾದ ಹಸುವಿನ ಮಾಲೀ ಕರ ಮನೆಗೆ ವಿಜಯೇಂದ್ರ ನೇತೃತ್ವದಲ್ಲಿ ಮಂಗಳವಾರ ಬಿಜೆಪಿ ನಾಯಕರು ತೆರಳಿ ಸಂಕ್ರಾಂತಿ ಪ್ರಯುಕ್ತ ಗೋಪೂಜೆ ನೆರವೇರಿಸಲಿದ್ದಾರೆ.
ಉಪವಾಸ ಕೂರಬೇಕಾದೀತು ನಮ್ಮ ಭಾವನೆ, ಶ್ರದ್ಧೆಗಳಿಗೆ ಕೊಡಲಿ ಏಟು ಕೊಡುವ ದುಷ್ಟ ಪ್ರವೃತ್ತಿಗಳನ್ನು ಇನ್ನೂ ಎಷ್ಟು ಸಹಿಸಬೇಕು? ಸರ್ಕಾರ ಕುಂಟು ನೆಪ ಹೇಳದೇ ಅಪರಾಧಿಗಳಿಗೆ ಘೋರ ಶಿಕ್ಷೆ ಕೊಡಿಸಲಿ. ಇಲ್ಲದಿದ್ದರೆ ಆಮರಣ ಉಪವಾಸ ಕುಳಿತಾದರೂ ಸರಿ, ಹೋರಾಟ ಮಾಡಬೇಕಾದೀತು ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ