ಬಿಟ್‌ ಕಾಯಿನ್ ಹಗರಣದ ಬಂಧಿತ ಪೊಲೀಸ್‌ ಅಧಿಕಾರಿಗೆ ಕೋರ್ಟ್‌ನಿಂದ ಛೀಮಾರಿ, ಜಾಮೀನು ನಿರಾಕರಣೆ

By Suvarna NewsFirst Published Feb 25, 2024, 5:20 PM IST
Highlights

ಬಿಟ್‌ ಕಾಯಿನ್ ಹಗರಣ ಪ್ರಕರಣದಲ್ಲಿ ಬಂಧಿತವಾಗಿರುವ  ಮಾಜಿ ಅಪರಾಧ ವಿಭಾಗದ ಇನ್ಸ್‌ಪೆಕ್ಟರ್‌ ಶ್ರೀಧರ್ ಪೂಜಾರ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

ಬೆಂಗಳೂರು (ಫೆ.25): ಬಿಟ್‌ ಕಾಯಿನ್ ಹಗರಣ ಸಂಬಂಧದಲ್ಲಿ ತನಿಖೆ ನಡೆಸಿದ ವಿಶೇಷ ತನಿಖಾ ದಳ (ಎಸ್‌ಐಟಿ), ಜನವರಿಯ ಕೊನೆ ವಾರದಲ್ಲಿ ಸಿಸಿಬಿ ಇನ್ಸ್‌ಪೆಕ್ಟರ್ ಸೇರಿದಂತೆ ಇಬ್ಬರನ್ನು ಬಂಧಿಸಿತ್ತು. ಇದೀಗ ಬಂಧಿತ ಪೊಲೀಸ್‌ ಅಧಿಕಾರಿಗಳಿಗೆ ವಿಶೇಷ ನ್ಯಾಯಾಲಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಛೀಮಾರಿ ಹಾಕಿದೆ.

2020ರ ನವೆಂಬರ್‌ನಲ್ಲಿ ಬೆಂಗಳೂರು ಅಪರಾಧ ವಿಭಾಗದ ಪೊಲೀಸರು ಹ್ಯಾಕರ್‌ ಶ್ರೀಕೃಷ್ಣ ರಮೇಶ್‌ ಅಲಿಯಾಸ್‌ ಶ್ರೀಕಿ (29) ಅವರನ್ನು ಬಂಧಿಸಿದ ನಂತರ ಪ್ರಕರಣಗಳ ತನಿಖೆಯ ಸಂದರ್ಭದಲ್ಲಿ ಕೆಲವು ಪೊಲೀಸ್‌ ಅಧಿಕಾರಿಗಳು ವಹಿಸಿದ ಪಾತ್ರವು ಬೇಲಿಯೇ ಎದ್ದು ಹೊಲ ಮೇಯ್ದಂತೆ ತೋರುತ್ತಿದೆ ಎಂದು ವಿಶೇಷ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಮಾತ್ರವಲ್ಲ ಮಾಜಿ ಅಪರಾಧ ವಿಭಾಗದ ಇನ್ಸ್‌ಪೆಕ್ಟರ್‌ನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

ವೆಬ್‌ಸೈಟ್‌ಗಳು, ಗೇಮಿಂಗ್ ಆ್ಯಪ್‌ಗಳು ಇತ್ಯಾದಿಗಳನ್ನು ಅಕ್ರಮವಾಗಿ ಗಳಿಸಲು ತಮ್ಮ ತನಿಖಾ ಅಧಿಕಾರವನ್ನು ಬಳಸಿಕೊಂಡು ಹಿಂದಿನ ಪ್ರಕರಣದಲ್ಲಿ ಆರೋಪಿಗಳನ್ನು ಅಕ್ರಮವಾಗಿ ಬಂಧಿಸುವುದು ಮತ್ತು ಕ್ರಿಪ್ಟೋ ವ್ಯಾಲೆಟ್‌ಗಳನ್ನು ಹ್ಯಾಕ್ ಮಾಡುವಂತಹ ಕಾನೂನುಬಾಹಿರ ಕೃತ್ಯಗಳನ್ನು ಮಾಡಿದ್ದಾರೆ.  ಎಂದು ವಿಶೇಷ ನ್ಯಾಯಾಲಯವು ಶುಕ್ರವಾರದ ಆದೇಶದಲ್ಲಿ ಮಾಜಿ ಅಪರಾಧ ವಿಭಾಗದ ಇನ್ಸ್‌ಪೆಕ್ಟರ್ ಶ್ರೀಧರ್ ಪೂಜಾರ್ ಅವರ ನಿರೀಕ್ಷಣಾ ಜಾಮೀನನ್ನು ತಿರಸ್ಕರಿಸಿತು.

ಈಗ ಪೊಲೀಸ್ ಉಪ ಅಧೀಕ್ಷಕರಾಗಿರುವ ಪೂಜಾರ್ ಮತ್ತು ಅವರ ಮೂವರು ಮಾಜಿ ಕ್ರೈಂ ಬ್ರಾಂಚ್ ಸಹೋದ್ಯೋಗಿಗಳು ಕರ್ನಾಟಕದಲ್ಲಿ ಸಿಐಡಿ ಎಸ್‌ಐಟಿ ಹೆಸರಿಸಿರುವ ನಾಲ್ವರು ಪೊಲೀಸ್ ಅಧಿಕಾರಿಗಳ ಜೊತೆಗೆ ಸೈಬರ್ ತಜ್ಞರೊಂದಿಗೆ ಅಕ್ರಮ ಬಂಧನ, ಸಾರ್ವಜನಿಕ ನೌಕರನ ನಂಬಿಕೆ ಉಲ್ಲಂಘನೆ ಆರೋಪ  ಎಫ್‌ಐಆರ್‌ನಲ್ಲಿ ಸೇರಿಸಲಾಗಿದೆ.

ಎಸ್‌ಐಟಿ ಎಫ್‌ಐಆರ್‌ನಲ್ಲಿ ಆರೋಪಿಯಾಗಿರುವ ನಾಲ್ವರು ಮಾಜಿ ಅಪರಾಧ ವಿಭಾಗದ ಅಧಿಕಾರಿಗಳೆಂದರೆ ಪೂಜಾರ್, ಇನ್ಸ್‌ಪೆಕ್ಟರ್‌ಗಳಾದ ಪ್ರಶಾಂತ್ ಬಾಬು, ಚಂದ್ರಧರ್ ಎಸ್ ಆರ್ ಮತ್ತು ಲಕ್ಷ್ಮೀಕಾಂತಯ್ಯ ಮತ್ತು 2020 ರಲ್ಲಿ ತನಿಖೆಗೆ ಸಹಾಯ ಮಾಡಿದ ಖಾಸಗಿ ಸೈಬರ್ ತಜ್ಞ ಕೆ ಎಸ್ ಸಂತೋಷ್ ಕುಮಾರ್.

ಶುಕ್ರವಾರ, ವಿಶೇಷ ಸಿಐಡಿ ನ್ಯಾಯಾಲಯವು ಜನವರಿ 24 ರಂದು ಬಂಧನಕ್ಕೊಳಗಾದ ಬಾಬು ಮತ್ತು ಕುಮಾರ್ ಅವರ ಜಾಮೀನು ಅರ್ಜಿಗಳನ್ನು ಅಂಗೀಕರಿಸಿತು.  ಆದರೆ ಇನ್ಸ್‌ಪೆಕ್ಟರ್ ಶ್ರೀಧರ್ ಪೂಜಾರ್ ಅವರ ನಿರೀಕ್ಷಣಾ ಜಾಮೀನನ್ನು ತಿರಸ್ಕರಿಸಿತು. ಪೂಜಾರ್ ಪ್ರಕರಣದಲ್ಲಿ ತನಿಖೆಗೆ ಸಹಕರಿಸದ ಕಾರಣ ಅವರ ಕಸ್ಟಡಿ ವಿಚಾರಣೆ ಅಗತ್ಯವಾಗಬಹುದು ಎಂದು ನ್ಯಾಯಾಲಯ ಹೇಳಿದೆ.

2020ರಲ್ಲಿ ಕೆಂಪೇಗೌಡ ನಗರ ಠಾಣೆಯಲ್ಲಿ ದಾಖಲಾಗಿದ್ದ ಡ್ರಗ್ಸ್ ಪ್ರಕರಣದ ಅಂದಿನ ತನಿಖಾಧಿಕಾರಿ ಸಿಸಿಬಿ ಇನ್ಸ್‌ಪೆಕ್ಟರ್‌ (ಹಾಲಿ ಡಿವೈಎಸ್ಪಿ) ಶ್ರೀಧರ್ ಪೂಜಾರ್ ಅವರು ಆರೋಪಿ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಹಾಗೂ ರಾಬಿನ್ ಖಂಡೇವಾಲ್‌ನನ್ನು ಮೈಸೂರು ರಸ್ತೆಯ ಸಿಎಆರ್ ಕೇಂದ್ರದ ಅತಿಥಿ ಗೃಹ ಮತ್ತು ಸಿಸಿಬಿ ಕಚೇರಿಯಲ್ಲಿ ಹದಿನೈದು ದಿನಗಳು ಅಕ್ರಮ ಬಂಧನದಲ್ಲಿಟ್ಟಿದ್ದರು. ನಂತರ ಬಿಟ್ ಕಾಯಿನ್ ಹಾಗೂ ಡ್ರಗ್ಸ್ ಪ್ರಕರಣಗಳಲ್ಲಿ ಆ ಇಬ್ಬರನ್ನು ಬಂಧನಕ್ಕೊಳಪಡಿಸಿ ಪಿಐಗಳಾದ ಲಕ್ಷ್ಮೀಕಾಂತಯ್ಯ ಹಾಗೂ ಪೂಜಾರ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ಸಂದರ್ಭದಲ್ಲಿ ಆರೋಪಿತ ಅಧಿಕಾರಿಗಳು ಅಕ್ರಮ ನಡೆಸಿದ್ದಾರೆ ಎಂದು ಎಸ್‌ಐಟಿ ವರದಿ ಒಪ್ಪಿಸಿದೆ.

click me!