ರಾಯಚೂರು: ಗಡಿಯಲ್ಲಿ ಪೊಲೀಸರ ಮೇಲೆ ಹಲ್ಲೆ; ಆಂಧ್ರದ 8 ಮಂದಿ ವಶ

By Kannadaprabha NewsFirst Published May 30, 2021, 3:26 PM IST
Highlights

* ತಪಾಸಣೆ ನಡೆಸುತ್ತಿದ್ದ ಪೊಲೀಸರ ಮೇಲೆ ಆಂಧ್ರದ ವ್ಯಕ್ತಿಗಳ ಹಲ್ಲೆ 
* 9 ಜನರ ವಿರುದ್ಧ ದೂರು, 8 ಜನರ ಬಂಧನ
* ಪರಾರಿಯಾದ ವ್ಯಕ್ತಿಗೆ ಬಲೆಬೀಸಿದ ಪೊಲೀಸರು
 

ರಾಯಚೂರು(ಮೇ.30): ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರಾಯಚೂರು ತಾಲೂಕಿನ ಆಂಧ್ರ ಗಡಿಭಾಗದ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ನಡೆಸುತ್ತಿದ್ದ ಪೊಲೀಸರ ಮೇಲೆ ಆಂಧ್ರದ ವ್ಯಕ್ತಿಗಳು ಹಲ್ಲೆ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 9 ಜನರ ವಿರುದ್ಧ ದೂರು ದಾಖಲಿಸಿಕೊಂಡಿರುವ ಪೊಲೀಸರು, 8 ಜನರನ್ನು ವಶಕ್ಕೆ ಪಡೆದಿದ್ದಾರೆ.

ಪಕ್ಕದ ಆಂಧ್ರಪ್ರದೇಶ ರಾಜ್ಯದ ಕರ್ನೂಲ್‌ ಜಿಲ್ಲೆ ಮಂತ್ರಾಲಯ ಮಂಡಲಂನ ಚಟ್ನೇಪಲ್ಲಿ ಗ್ರಾಮದ ನಿವಾಸಿಗಳಾದ ವೆಂಕಟರಾಮುಲು, ನರಸಿಂಹಲು, ವೆಂಕಟೇಶ, ವೀರೇಶ್‌, ತಿಕ್ಕಸ್ವಾಮಿ, ಸೀನು, ಮಹಾನಂದ ಹಾಗೂ ಗೋವಿಂದ ಸೇರಿ 8 ಜನರನ್ನು ವಶಕ್ಕೆ ಪಡೆದಿದ್ದು, ಪ್ರಮುಖ ಆರೋಪಿ ಪರಾರಿಯಾಗಿದ್ದಾನೆ. 

ಆಪರೇಷನ್ ಆಡಿಯೋಕ್ಕೆ ಮರುಜೀವ, 'ನ್ಯಾಯ ಸಿಗಲ್ಲ ಗೊತ್ತಾಗಿದೆ'

ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರಾಯಚೂರು ತಾಲೂಕಿನ ಇಡಪನೂರು ಪೊಲೀಸ್‌ ಠಾಣೆಯ ಸಿಬ್ಬಂದಿ ಸಮೀಪದ ಆಂಧ್ರಗಡಿಯಲ್ಲಿ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ನಡೆಸುತ್ತಿದ್ದ ಸಮಯದಲ್ಲಿ ಚಟ್ನೇಪಲ್ಲಿಯ ವ್ಯಕ್ತಿಯೊಬ್ಬರು ಈಕಡೆ ಬರಲು ಪ್ರಯತ್ನಿಸಿದ್ದು ಈ ವೇಳೆ ಪೊಲೀಸ್‌ ಪೇದೆಗಳು ಆತನನ್ನು ತಡೆದು ನಿಲ್ಲಿಸಿ ವಿಚಾರಿಸುತ್ತಿದ್ದ ಸಮಯದಲ್ಲಿ ವ್ಯಕ್ತಿ ಪೊಲೀಸರೊಂದಿಗೆ ಜಗಳವಾಡಿದ್ದಾನೆ. 

ಬಳಿಕ ಮೊಬೈಲ್‌ ಕರೆಯ ಮೂಲಕ ಗೆಳೆಯರನ್ನು ಕರೆಯಿಸಿದ್ದು, ಕುಡಿತ ಮತ್ತಿನಲ್ಲಿದ್ದ ಆರೋಪಿತರು ಸ್ಥಳಕ್ಕೆ ಬಂದು ಕರ್ತವ್ಯದಲ್ಲಿ ನಿರತ ಪೊಲೀಸರೊಂದಿಗೆ ತಗಾದೆ ತೆಗೆದು ವಾಗ್ವಾದ ನಡೆಸಿ ಹಲ್ಲೆಗೆ ಮುಂದಾಗಿದ್ದಾರೆ. ಇದರಿಂದಾಗಿ ಪೊಲೀಸರು ಇಡಪನೂರು ಠಾಣೆಯಲ್ಲಿ ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಸಿಲಿಕೊಂಡು ಬಳಿಕ ಚಟ್ನೇಬಲ್ಲಿ ಗ್ರಾಮಕ್ಕೆ ತೆರಳಿ ಎಂಟು ಜನರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಪರಾರಿಯಲ್ಲಿರುವ ವ್ಯಕ್ತಿಯನ್ನು ಹಿಡಿಯಲು ಬಲೆಬೀಸಿದ್ದಾರೆ.
 

click me!