PSI Scam: ಮತ್ತೆ ಎಂಟು ಜನ ಅಭ್ಯರ್ಥಿಗಳು ಅರೆಸ್ಟ್: ಬಂಧಿತರಲ್ಲಿ ಹಲವರು ಸರಕಾರಿ ನೌಕರರು

Published : Aug 05, 2022, 04:28 PM IST
PSI Scam: ಮತ್ತೆ ಎಂಟು ಜನ ಅಭ್ಯರ್ಥಿಗಳು ಅರೆಸ್ಟ್: ಬಂಧಿತರಲ್ಲಿ ಹಲವರು ಸರಕಾರಿ ನೌಕರರು

ಸಾರಾಂಶ

ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಅಕ್ರಮವಾಗಿ ಪಾಸಾದ ಎಂಟು ಜನ ಅಭ್ಯರ್ಥಿಗಳನ್ನ ಒಮ್ಮೆ ಬಂಧಿಸುವ ಮೂಲಕ ಭರ್ಜರಿ ಬೇಟೆಯಾಡಿದೆ.

ವರದಿ: ಶರಣಯ್ಯ ಹಿರೇಮಠ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಲಬುರಗಿ

ಕಲಬುರಗಿ (ಆ.05): ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಅಕ್ರಮವಾಗಿ ಪಾಸಾದ ಎಂಟು ಜನ ಅಭ್ಯರ್ಥಿಗಳನ್ನ ಒಮ್ಮೆ ಬಂಧಿಸುವ ಮೂಲಕ ಭರ್ಜರಿ ಬೇಟೆಯಾಡಿದೆ. ರವಿರಾಜ್, ಪೀರಪ್ಪ, ಶ್ರೀಶೈಲ್, ಭಗವಂತ, ಸಿದ್ದು ಪಾಟೀಲ್, ಸೋಮನಾಥ, ಕಲ್ಲಪ್ಪ, ವಿಜಯಕುಮಾರ್ ಎನ್ನುವವರೇ ಅಕ್ರಮದ ಮೂಲಕ ಪಿಎಸ್ಐ ಆಗಲು ಹವಣಿಸಿ ಬಂಧನಕ್ಕೊಳಗಾಗಿರುವ ಅಭ್ಯರ್ಥಿಗಳು.‌ 

ಬಂಧಿತರಲ್ಲಿ ಹಲವರು ಸರಕಾರಿ ನೌಕರರು: ಬಂಧಿತರ ಪೈಕಿ ಹಲವರು ಈಗಾಗಲೇ ಸರ್ಕಾರಿ ಹುದ್ದೆಯಲ್ಲಿ ಇದ್ದಾರೆ. ಅದಾಗಿಯೂ ಪಿಎಸ್ಐ ಆಗುವ ಹವಣಿಕೆಯಿಂದ ಅಕ್ರಮದ ಹಾದಿ ತುಳಿದಿದ್ದಕ್ಕಾಗಿ ಇದೀಗ ಜೈಲು ಪಾಲಾಗಿದ್ದಾರೆ. ಬಂಧಿತ ಆರೋಪಿ ಸಿದ್ದು ಪಾಟೀಲ್, ಈಗಾಗಲೇ ಎಫ್‌ಡಿಎ ಆಗಿ ಸರ್ಕಾರಿ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ. ಇನ್ನೂ ಬಂಧಿತ ಕಲ್ಲಪ್ಪ  ಪೊಲೀಸ್ ಪೇದೆಯಾಗಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ. ಪೀರಪ್ಪ ಎನ್ನುವ ಇನ್ನೊಬ್ಬ ಬಂಧಿ ಆರೋಪಿ ಹಾಸ್ಟೆಲ್‌ನಲ್ಲಿ ಕುಕ್ ಆಗಿ ಕೆಲಸ ಮಾಡುವವನು. 

PSI Scam; ಅಮೃತ್‌ಪಾಲ್‌ ಸ್ನೇಹಿತರ ಮೇಲೆ ಸಿಐಡಿ ದಾಳಿ, ಮಹತ್ವದ ದಾಖಲೆ ವಶ

ದುರಾಸೆ ತಂದ ದುರ್ಗತಿ: ಇವರೆಲ್ಲಾ ಬ್ಲೂಟೂತ್ ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಅಕ್ರಮವಾಗಿ ಪಿ.ಎಸೈ ಪರೀಕ್ಷೆ ಬರೆದವರು. ಈ ಎಂಟೂ ಜನ ಅಭ್ಯರ್ಥಿಗಳು ಕಲ್ಯಾಣ ಕರ್ನಾಟಕ ಕೋಟಾದಲ್ಲಿ ಆಯ್ಕೆಯಾಗಿದ್ದರು. ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಎಂಟು ಅಭ್ಯರ್ಥಿಗಳ ಹೆಸರು ಇತ್ತು. 

ಎಸ್.ಬಿ.ಆರ್ ಪರೀಕ್ಷಾ ಕೇಂದ್ರದಲ್ಲೂ ಅಕ್ರಮ: ಕಲಬುರಗಿ ನಗರದ ಪ್ರತಿಷ್ಠಿತ ಶರಣಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಎಸ್‌ಬಿಆರ್ ಪರೀಕ್ಷಾ ಕೇಂದ್ರದಲ್ಲೂ ಅಕ್ರಮ ನಡೆದಿರುವುದು ಈ ಮೂಲಕ ಬಯಲಾಗಿದೆ. ಬಂಧಿತ ಎಂಟೂ ಜನರು ಕಲ್ಬುರ್ಗಿಯ ಎಸ್‌ಬಿಆರ್ ಮತ್ತು ಸರ್ಕಾರಿ ಪದವಿ ಕಾಲೇಜಿನಲ್ಲಿ ಪರೀಕ್ಷೆ ಬರೆದವರಾಗಿದ್ದಾರೆ. 

ಅಫಜಲಪೂರ ಮತ್ತು ಜೇವರ್ಗಿ ತಾಲೂಕಿನವರು: ಪಿಎಸ್ಐ ಪರೀಕ್ಷೆ ಅಕ್ರಮ ಮಾಡಿ ಸಿಕ್ಕಿ ಬಿದ್ದಿರುವ ಎಂಟು ಜನ ಅಭ್ಯರ್ಥಿಗಳು ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕು ಮತ್ತು ಅಫಜಲಪೂರ ತಾಲೂಕಿನ ನಿವಾಸಿಗಳಾಗಿದ್ದಾರೆ. ಆಫ್ಜಲ್ಪುರ್ ತಾಲೂಕಿನ ಮಲ್ಲಾಬಾದ್ ಗ್ರಾಮದ ರವಿರಾಜ್ ಅಖಂಡೆ, ಶಿದ್ನಾಳ್ ಗ್ರಾಮದ ಬೀರಪ್ಪ, ಜೇವರ್ಗಿ ತಾಲೂಕಿನ ಕೋಣಸಿರಸಗಿ ಗ್ರಾಮದ ಶ್ರೀಶೈಲ್, ಜೇರಟಗಿ ಗ್ರಾಮದ ಭಗವಂತರಾಯ ಯಾತನೂರ್, ಜೇವರ್ಗಿ ತಾಲೂಕಿನ ಬದನಿಹಾಳ ಗ್ರಾಮದ ಸೋಮನಾಥ್, ಅಫ್ಜಲ್ ಪುರ ತಾಲೂಕಿನ ಕರ್ಜಗಿ ರೋಡ್ ರಾಮನಗರದ ಕಲ್ಲಪ್ಪ ಅಲ್ಲಾಪುರ್, ಜೇವರ್ಗಿ ತಾಲೂಕಿನ ಗುಡೂರ್ ಎಸ್ ಗ್ರಾಮದ ವಿಜಯಕುಮಾರ್ ಎನ್ನುವವರೇ ಬಂಧಿತ ಆರೋಪಿಗಳು. 

ಆರ್.ಡಿ ಪಾಟೀಲ್ ಕ್ಯಾಂಡಿಡೇಟ್ಸ್: ಈ ಎಲ್ಲಾ ಎಂಟು ಜನರನ್ನ ಅಕ್ರಮವಾಗಿ ಪಿಎಸ್ಐ ಮಾಡಲು ಆಸೆ ತೋರಿಸಿದ್ದೆ ಕಿಂಗ್‌ಪಿನ್ ಆರ್ ಡಿ ಪಾಟೀಲ್. ಈ ಎಲ್ಲಾ ಎಂಟು ಜನ ಅಭ್ಯರ್ಥಿಗಳು ಆರ್ ಡಿ ಪಾಟೀಲ್ ಜೊತೆ ಡೀಲ್ ಮಾಡಿಕೊಂಡವರು ಎನ್ನುವುದು ಗೊತ್ತಾಗಿದೆ. ಪ್ರಕರಣದ ಪ್ರಮುಖ ಕಿಂಗ್‌ಪಿನ್ ಆರ್ ಡಿ ಪಾಟೀಲ್, ಈ ಎಲ್ಲಾ ಅಭ್ಯರ್ಥಿಗಳ ಜೊತೆ ಹಣಕಾಸಿನ ಡೀಲ್ ಮಾಡಿಕೊಂಡಿದ್ದಲ್ಲದೇ ಎಲ್ಲರಿಗೂ ಬ್ಲ್ಯೂಟೂತ್ ಡಿವೈಸ್ ಸಪ್ಲೈ ಮಾಡಿದ್ದ. 

ಬಂಧಿತರ ಸಂಖ್ಯೆ 52 ಕ್ಕೆ ಏರಿಕೆ: ಪಿಎಸ್ಐ ನೇಮಕಾತಿಯ ಅಕ್ರಮ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ, ಬಗೆದಷ್ಟು ಬಯಲಾಗುತ್ತಲೇ ಇದೆ. ಈಗಾಗಲೇ ಈ ಪ್ರಕರಣದಲ್ಲಿ ಸಿಐಡಿ 44 ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ. ಈಗ ಒಮ್ಮೆಲೆ ಎಂಟು ಜನ ಅಭ್ಯರ್ಥಿಗಳ ಬಂಧನದ ಮೂಲಕ ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಇದುವರೆಗೆ ಬಂಧಿತರ ಸಂಖ್ಯೆ 52ಕ್ಕೆ ಏರಿಕೆಯಾದಂತಾಗಿದೆ

PSI Recruitment Scam; ರಾಜ್ಯಕ್ಕೆ ಟಾಪರ್‌ ಆಗಿದ್ದಾತ ಕೊಟ್ಟಿದ್ದು 40 ಲಕ್ಷ ಲಂಚ!

ಇನ್ನಷ್ಟು ಕುಳಗಳ ಬಂಧನ ಸಾಧ್ಯತೆ: ಜ್ಞಾನ ಜ್ಯೋತಿ ಪರೀಕ್ಷಾ ಕೇಂದ್ರ, ಎಂಎಸ್ ಇರಾನಿ ಪರೀಕ್ಷಾ ಕೇಂದ್ರಕ್ಕೆ ಸೀಮಿತವಾಗಿದ್ದ ಪಿಎಸ್ಐ ನೇಮಕಾತಿ ಅಕ್ರಮ, ಇದೀಗ ಎಸ್‌ಬಿಆರ್ ಮತ್ತು ಸರ್ಕಾರಿ ಪದವಿ ಕಾಲೇಜಿಗೂ ವ್ಯಾಪಿಸಿದ್ದು, ಇದು ಇನ್ನಷ್ಟು ಪರೀಕ್ಷಾ ಕೇಂದ್ರಗಳಿಗೆ ವಿಸ್ತರಿಸುವ ಸಾಧ್ಯತೆ ಹೆಚ್ಚಳವಾಗಿದೆ. ಎಸ್‌ಬಿಆರ್ ಮತ್ತು ಸರ್ಕಾರಿ ಪದವಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ನಡೆದ ಅಕ್ರಮ ಬಯಲಾಗಿರುವ ಹಿನ್ನೆಲೆಯಲ್ಲಿ ಈ ಅಕ್ರಮಕ್ಕೆ ಸಾತ್ ನೀಡಿರುವ ಇನ್ನಷ್ಟು ಜನ ಪೊಲೀಸ್ ಅಧಿಕಾರಿಗಳು , ಪರೀಕ್ಷಾ ಮೇಲ್ವಿಚಾರಕರು ಹಾಗೂ ಬೇರೆಬೇರೆ ರೀತಿಯಲ್ಲಿ ಸಹಕಾರ ನೀಡಿರುವವರೂ ಬಂಧನಕ್ಕೊಳಗಾಗುವ ಆತಂಕ ಎದುರಿಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!