ಅಪಘಾತ ನಾಟಕವಾಡಿ ಚಾಲಕರ ಪರ್ಸ್‌ ಎಗರಿಸುತ್ತಿದ್ದ ಖದೀಮ

By Kannadaprabha NewsFirst Published Mar 10, 2021, 8:58 AM IST
Highlights

ಗಲಾಟೆ ನೋಡಿ ಜನ ಸೇರುತ್ತಿದ್ದಂತೆ ಪರ್ಸ್‌ ಕಳ್ಳತನ ಮಾಡುತ್ತಿದ್ದವನ ಸೆರೆ| ಆರೋಪಿಯಿಂದ 3 ಲಕ್ಷ ಮೌಲ್ಯದ ಬೈಕ್ ಜಪ್ತಿ| ಆರೊಪು ಹರೀಶ್‌ ವೃತ್ತಿಪರ ಕಳ್ಳ| ಜಾಲಹಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದ ಕಿಡಿಗೇಡಿ| 

ಬೆಂಗಳೂರು(ಮಾ.10): ಅಪಘಾತದ ನಾಟಕವಾಡಿ ಲಾರಿ ಚಾಲಕರ ಗಮನ ಬೇರೆಡೆ ಸೆಳೆದು ಪರ್ಸ್‌ ಎಗರಿಸುತ್ತಿದ್ದ ಕಿಡಿಗೇಡಿಯೊಬ್ಬ ಜಾಲಹಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಯಶವಂತಪುರದ ಹರೀಶ್‌ ಬಂಧಿತನಾಗಿದ್ದು, ಆರೋಪಿಯಿಂದ 3 ಲಕ್ಷ ಮೌಲ್ಯದ ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಎಂಇಎಸ್‌ ರಸ್ತೆಯಲ್ಲಿ ಮಾ.6ರಂದು ಸಂಜೆ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದರು. ಆಗ ಅದೇ ಮಾರ್ಗದಲ್ಲಿ ಬಂದ ಹರೀಶ್‌ನನ್ನು ಅಡ್ಡಗಟ್ಟಿ ಪೊಲೀಸರು ದಾಖಲಾತಿಗಳನ್ನು ನೀಡುವಂತೆ ಸೂಚಿಸಿದ್ದಾರೆ. ಆದರೆ ಆತನ ವರ್ತನೆಯಿಂದ ಅನುಮಾನಗೊಂಡ ಪೊಲೀಸರು, ಠಾಣೆಗೆ ಕರೆತಂದು ವಿಚಾರಿಸಿದಾಗ ಕಳ್ಳತನ ಕೃತ್ಯಗಳು ಬೆಳಕಿಗೆ ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹರೀಶ್‌ ವೃತ್ತಿಪರ ಖದೀಮನಾಗಿದ್ದು, 2016ನೇ ಸಾಲಿನ ಕಬ್ಬಿಣ ಕಳ್ಳತನ ಪ್ರಕರಣದಲ್ಲಿ ಆತನ ಬಂಧನವಾಗಿತ್ತು. ಬಳಿಕ ಜಾಮೀನು ಪಡೆದು ಹೊರ ಬಂದು ಮತ್ತೆ ತನ್ನ ಚಾಳಿ ಮುಂದುವರೆಸಿದ್ದ. 2019ರಲ್ಲಿ ಯಶವಂತಪುರ ಠಾಣೆ ವ್ಯಾಪ್ತಿಯಲ್ಲಿ ದರೋಡೆ ಸಂಚು ಪ್ರಕರಣದಲ್ಲಿ ಮತ್ತೆ ಜೈಲು ಸೇರಿದ್ದ. ಮನೆಗೆ ಮುಂದೆ ನಿಲ್ಲಿಸಿರುವ ದ್ವಿಚಕ್ರ ವಾಹನಗಳನ್ನು ರಾತ್ರಿ ವೇಳೆಯಲ್ಲಿ ಕಳ್ಳತನ ಮಾಡುವುದು ಆತನ ಕೃತ್ಯವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಬೆನ್ನು ನೋವಿನ ಬೆಲ್ಟ್‌ನಲ್ಲಿ 1.277 ಕೇಜಿ ಚಿನ್ನ ಸಾಗಾಟ

ಅಪಘಾತ ನೆಪದಲ್ಲಿ ಪರ್ಸ್‌ ಎಗರಿಸಿದ್ದ

ಹೆಬ್ಬಾಳದಿಂದ ಕುವೆಂಪು ಸರ್ಕಲ್‌ ಕಡೆಗೆ ಜ.30 ರಂದು ಕಾಂಕ್ರಿಟ್‌ ಲಾರಿ ತೆರಳುತ್ತಿತ್ತು. ಆಗ ಮಾರ್ಗ ಮಧ್ಯೆ ಹಿಂದಿನಿಂದ ಬಂದು ಅಡ್ಡಗಟ್ಟಿದ್ದ ಹರೀಶ್‌, ಮನಬಂದಂತೆ ಲಾರಿ ಓಡಿಸುತ್ತೀಯಾ. ನನ್ನ ಸ್ಕೂಟರ್‌ ಅಪಘಾತಕ್ಕೀಡಾಗುತ್ತಿತ್ತು. ಇಂಡಿಕೇಟರ್‌ ಯಾಕಿಲ್ಲ ಎಂದು ಜಗಳ ಶುರು ಮಾಡಿದ್ದ. ಈ ಹಂತದಲ್ಲಿ ಲಾರಿ ಚಾಲಕ ಜಯದೇವ ಸರ್ಕಾರ್‌ ಅವರ ಪರ್ಸ್‌ ಎಗರಿಸಿದ ಆತ, ಸಾರ್ವಜನಿಕರು ಗುಂಪುಗೂಡಿದ ಬಳಿಕ ಅಲ್ಲಿಂದ ತೆರಳಿದ್ದ. ಕೆಲ ಹೊತ್ತಿನ ಬಳಿಕ ಪರ್ಸ್‌ ಕಳ್ಳತನ ಚಾಲಕನ ಗಮನಕ್ಕೆ ಬಂದಿದೆ. ಕೂಡಲೇ ಜಾಲಹಳ್ಳಿ ಠಾಣೆಯಲ್ಲಿ ತಮ್ಮ ಮೇಲೆ ಗಲಾಟೆ ಮಾಡಿದ ವ್ಯಕ್ತಿಯೇ ಕದ್ದಿದ್ದಾನೆ ಎಂದು ಶಂಕಿಸಿದ್ದರು. ಈ ದೂರಿನ್ವಯ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಕೊನೆಗೆ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
 

click me!