
ವರದಿ: ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್, ದಾವಣಗೆರೆ
ದಾವಣಗೆರೆ (ನ.18): ವೈದ್ಯರ ನಿರ್ಲಕ್ಷ್ಯದಿಂದ ಹೊಟ್ಟೆ ನೋವಿನಿಂದಾಗಿ ಆಸ್ಪತ್ರೆ ಸೇರಿದ್ದ ಮಹಿಳೆ ಸಾವನ್ನಪ್ಪಿದ್ದು, ಆಕೆಯ ಸಾವಿಗೆ ಕಾರಣರಾದ ವೈದ್ಯರು, ರೋಗಿಯ ಕುಟುಂಬದ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲು ನೊಂದ ಕುಟುಂಬ ಆಗ್ರಹಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭೋವಿ ಸಮಾಜದ ಮುಖಂಡ, ಹುಚ್ಚಂಗಿಪುರ ಗ್ರಾಮಸ್ಥ ಯು.ಸಿ.ರವಿ, ಜಗಳೂರು ತಾಲೂಕಿನ ಉಚ್ಚಂಗಿಪುರ ಗ್ರಾಮದ ನಾಗರತ್ನಮ್ಮ ಎಂಬ ಕೂಲಿ ಮಾಡುವ ಮಹಿಳೆ ನ.7ರಂದು ಹೊಟ್ಟೆ ನೋವಿನಿಂದಾಗಿ ದಾವಣಗೆರೆಯ ನಿಜಲಿಂಗಪ್ಪ ಬಡಾವಣೆಯ ಹಳೆ ಸಂಜೀವಿನಿ ಆಸ್ಪತ್ರೆಗೆ ದಾಖಲಾಗಿದ್ದು, ಆಕೆ ಶಸ್ತ್ರ ಚಿಕಿತ್ಸೆ ನಂತರ ಸಾವನ್ನಪ್ಪಿದ್ದ ಕಾರಣಕ್ಕೆ ನೊಂದ ಕುಟುಂಬ ಆಕ್ರೋಶ ವ್ಯಕ್ತಪಡಿಸಿದೆ.
ಈ ವೇಳೆ ಪೊಲೀಸರನ್ನು ಸ್ಥಳಕ್ಕೆ ಕರೆಯಿಸುವ ಮೂಲಕ ರೋಗಿಗಳ ಸಂಬಂಧಿಕರ ಮೇಲೆ ಪೋಲಿಸ್ ಅಧಿಕಾರಿ, ಸಿಬ್ಬಂದಿಗಳು ದೌರ್ಜನ್ಯ ಎಸಗಿದ್ದಾರೆ ಎಂದು ದೂರಿದರು. ನಾಗರತ್ನಮ್ಮಗೆ ತಪಾಸಣೆ ಮಾಡಿದ ಆಸ್ಪತ್ರೆ ವೈದ್ಯರು ಆಕೆ ಹೊಟ್ಟೆಯಲ್ಲಿ ಅರಣಿ ಗಡ್ಡೆ ಇದೆ. ಅದನ್ನು ಶಸಚಿಕಿತ್ಸೆ ಮಾಡಬೇಕೆಂದು ಹೇಳಿ, ಬಿಪಿ, ಶುಗರ್, ಇಸಿಜಿ, ಬ್ಲಡ್ ಚೆಕಪ್ ಮಾಡಿ, ಶಸಚಿಕಿತ್ಸೆ ಮಾಡಬಹುದು ಎಂದಿದ್ದರು. ನಂತರ ನ.8ರಂದು ನಾಗರತ್ನಮ್ಮಗೆ ಶಸಚಿಕಿತ್ಸೆ ಮಾಡಿ, ಯಶಸ್ವಿಯಾಗಿದೆಯೆಂದು ವೈದ್ಯರು ಹೇಳಿದರು. ಆದರೆ, ನ.10ರಂದು ಬೆಳಿಗ್ಗೆ 7.30ರ ವೇಳೆ ನಾಗರತ್ನಮ್ಮ ಹೊಟ್ಟೆಯಲ್ಲಿ ತೀವ್ರ ಉರಿ, ಸಂಕಟ, ಹಿಂಸೆ ಆಗುತ್ತಿದೆ ಎಂದು ಹೇಳುತ್ತಾ ಸಾವನ್ನಪ್ಪಿದರು.
ದಾವಣಗೆರೆ ದಕ್ಷಿಣದಿಂದ ಸ್ಪರ್ಧಿಸಲು ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ ಶಾಮನೂರು ಶಿವಶಂಕರಪ್ಪ
ವಿಷಯ ತಿಳಿದ ಆಸ್ಪತ್ರೆಯವರು ತಕ್ಷಣವೇ ಪೊಲೀಸರನ್ನು ಕರೆಸಿಕೊಂಡು ರೋಗಿಗಳ ಸಂಬಂಧಿಗಳ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ದೂರಿದರು. ಈ ವೇಳೆ ಮೃತಳ ಸಂಬಂಧಿಗಳಿಗೆ ಈವರೆಗಿನ ಆಸ್ಪತ್ರೆ ವೆಚ್ಚ ಭರಿಸುವುದು ಬೇಡ. ಶವವನ್ನು ಕೊಂಡೊಯ್ಯಲು ತಾವೇ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡುತ್ತೇವೆ. ಬೇಗನೆ ಶವ ಕೊಂಡೊಯ್ಯಿರಿ ಎಂಬುದಾಗಿ ಆಸ್ಪತ್ರೆಯವರು ಒತ್ತಡ ಹೇರಿದ್ದಾರೆ. ಅಂತಹ ವರ್ತನೆ ಗಮನಿಸಿದ ಕುಟುಂಬಸ್ಥರು, ಗ್ರಾಮಸ್ಥರು ಬಡಾವಣೆಗೆ ಪೊಲೀಸ್ ಠಾಣೆಗೆ ತೆರಳಿ, ದೂರು ದಾಖಲಿಸಿದರು. ನಾಗರತ್ನಮ್ಮ ಶವದ ಮರಣೋತ್ತರ ಪರೀಕ್ಷೆ ಮಾಡಿಸುವಂತೆ ಮನವಿ ಮಾಡಿದ್ದರು ಎಂದು ತಿಳಿಸಿದರು.
ಹೆದ್ದಾರಿಯುದ್ದಕ್ಕೂ ಆಟೋ ನಂಬರ್ ಪ್ಲೇಟ್ ರಿಕಗ್ನೇಶನ್ ಕ್ಯಾಮೆರಾ: ಎಸ್ಪಿ ರಿಷ್ಯಂತ್
ಈ ವೇಳೆ ಅಲ್ಲೇ ಇದ್ದ ವೃತ್ತ ನಿರೀಕ್ಷಕರು ಆಸ್ಪತ್ರೆ ವೈದ್ಯರೊಂದಿಗೆ ಏನೋ ಮಾತನಾಡಿಕೊಂಡು, ನಾಗರತ್ನಮ್ಮನ ಕುಟುಂಬಸ್ಥರು, ಗ್ರಾಮಸ್ಥರು ಸಾವಿನ ಬಗ್ಗೆ ಪ್ರಶ್ನಿಸಿದಾಗ ಇಲ್ಲಸಲ್ಲದ ಆರೋಪ ಹೊರಿಸಿ, ಏಕವಚನದಲ್ಲಿ ನಿಂದಿಸಿ, ವೆಂಕಟೇಶ್ ಎಂಬುವರ ಮೇಲೆ ಸಾರ್ವಜನಿಕ ಸ್ಥಳ ಹಾಗೂ ಸಂಬಂಧಿಗಳ ಸಮ್ಮುಖದಲ್ಲೇ ಕೊರಳ ಪಟ್ಟಿ ಹಿಡಿದು, ಅವಾಚ್ಯವಾಗಿ ನಿಂದಿಸಿ, ದೌರ್ಜನ್ಯ, ದಬ್ಬಾಳಿಕೆ ಮಾಡಿದ್ದಾರೆ. ಅಲ್ಲದೇ, ಮಹಿಳೆಯರ ಮೇಲೂ ಹಲ್ಲೆಗೆ ಯತ್ನಿಸಿ, ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು. ಸಿಪಿಐ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ನಾಗರತ್ನಮ್ಮ ಸಾವಿನ ಪ್ರಕರಣದ ತನಿಖೆ ಜವಾಬ್ಧಾರಿಯನ್ನು ಬೇರೊಬ್ಬ ಅಧಿಕಾರಿಗೆ ನೀಡಬೇಕು. ನೊಂದಿರುವ ನಾಗರತ್ನಮ್ಮ ಕುಟುಂಬ, ಗ್ರಾಮಸ್ಥರಿಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಲಕ್ಷ್ಮಣ್ ರಮಾವತ್, ಶಶಿ, ಸಂದೇಶ್, ವಿನಯ್,ನವೀನ್, ವರಲಕ್ಷ್ಮೀ, ರಮೇಶ್, ಗಂಗಮ್ಮ ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ