
ಬೆಂಗಳೂರು (ಫೆ.24): ಪ್ರೀತಿಸಿ ನಿರಾಕರಿಸಿದಳು ಎಂಬ ಕಾರಣಕ್ಕೆ ರೊಚ್ಚಿಗೆದ್ದ ಕುಖ್ಯಾತ ರೌಡಿ ಶೀಟರ್ ಯುವತಿ ಮನೆ ಬಳಿ ತೆರಳಿ ಮೂರು ಕಾರುಗಳು ಹಾಗೂ ಒಂದು ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ನಡೆದಿದೆ.
ಹನುಮಂತನಗರ ಠಾಣೆ ರೌಡಿ ಶೀಟರ್ ರಾಹುಲ್ ಅಲಿಯಾಸ್ ಸ್ಟಾರ್ ರಾಹುಲ್ (26) ಈ ಕೃತ್ಯ ಎಸಗಿದ್ದಾನೆ. ಕತ್ರಿಗುಪ್ಪೆ ಸಮೀಪದ ಬನಗಿರಿನಗರದಲ್ಲಿ ಶನಿವಾರ ತಡರಾತ್ರಿ ಮತ್ತು ಸುಬ್ರಹ್ಮಣ್ಯಪುರ ಸಮೀಪದ ಅರೇಹಳ್ಳಿಯಲ್ಲಿ ಭಾನುವಾರ ಮುಂಜಾನೆ ಈ ಘಟನೆ ನಡೆದಿದೆ.
ಪ್ರಕರಣದ ವಿವರ:
ರೌಡಿ ಶೀಟರ್ ರಾಹುಲ್ ಕಳೆದ ಐದು ವರ್ಷಗಳಿಂದ ರಕ್ಷಿತಾ (ಹೆಸರು ಬದಲಿಸಲಾಗಿದೆ) ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಇತ್ತೀಚೆಗೆ ಪ್ರೇಮ ನಿವೇದನೆ ಮಾಡಿದಾಗ ಯುವತಿ ನಿರಾಕರಿಸಿ, ಆತನಿಂದ ಅಂತರ ಕಾಯ್ದುಕೊಂಡಿದ್ದಳು. ಕೋಪಗೊಂಡಿದ್ದ ರಾಹುಲ್ ತನ್ನ ಸಹಚರರೊಂದಿಗೆ ಶನಿವಾರ ತಡರಾತ್ರಿ ಸುಮಾರು 12.30ಕ್ಕೆ ರಕ್ಷಿತಾ ತಂದೆ ಮತ್ತು ಸಹೋದರ ನೆಲೆಸಿರುವ ಬನಗಿರಿನಗರದ ಮನೆ ಬಳಿ ಗಲಾಟೆ ಮಾಡಿದ್ದಾನೆ. ಈ ವೇಳೆ ಮನೆಯಲ್ಲಿ ರಕ್ಷಿತಾ ಇಲ್ಲದಿರುವ ವಿಚಾರ ತಿಳಿದು ಮನೆ ಎದುರು ನಿಲ್ಲಿಸಿದ್ದ ರಕ್ಷಿತಾಳ ತಂದೆಯ ಕಾರು ಮತ್ತು ಸಹೋದರನ ಬೈಕಿಗೆ ಬೆಂಕಿ ಹಚ್ಚಿ ಪರಾರಿಯಾಗಿನೆ.
ಭಾನುವಾರ ಮುಂಜಾನೆ ಸುಮಾರು 2ಕ್ಕೆ ರಕ್ಷಿತಾ ಮತ್ತು ಅವರ ತಾಯಿ ನೆಲೆಸಿರುವ ಅರೇಹಳ್ಳಿಯ ಅಪಾರ್ಟ್ಮೆಂಟ್ ಬಳಿ ಬಂದು ಗಲಾಟೆ ಮಾಡಿರುವ ರಾಹುಲ್ ಹಾಗೂ ಆತನ ಸಹಚರರು, ನೆಲಮಹಡಿಯಲ್ಲಿ ನಿಲುಗಡೆ ಮಾಡಿದ್ದ ರಕ್ಷಿತಾ ಅವರ ತಾಯಿಯ ಕಾರಿಗೆ ಬೆಂಕಿ ಹಚ್ಚಿಸಿದ್ದಾನೆ. ಇದನ್ನು ತಡೆಯಲು ಬಂದ ಸೆಕ್ಯೂರಿಟಿ ಗಾರ್ಡ್ಗೆ ಮಾರಕಾಸ್ತ್ರ ತೋರಿಸಿ ಬೆದರಿಸಿದ್ದಾನೆ. ರಕ್ಷಿತಾ ಅವರ ತಾಯಿಯ ಕಾರಿಗೆ ಹಚ್ಚಿದ ಬೆಂಕಿ ಪಕ್ಕದಲ್ಲೇ ನಿಂತಿದ್ದ ಮತ್ತೊಂದು ಕಾರಿಗೆ ವ್ಯಾಪಿಸಿದ್ದು, ಬಹುತೇಕ ಈ ಎರಡೂ ಕಾರುಗಳು ಸುಟ್ಟು ಹೋಗಿವೆ.
ಇದನ್ನೂ ಓದಿ: ಲೋಕಾಯುಕ್ತ ಡಿವೈಎಸ್ಪಿ ಹೆಸರಿನಲ್ಲಿ ಬ್ಲ್ಯಾಕ್ಮೇಲ್ ಮಾಡಿದ್ದು ವಜಾಗೊಂಡಿರೋ ರಿಸರ್ವ್ ಪೊಲೀಸ್! ಸಿಕ್ಕಿಬಿದ್ದಿದ್ದು ಹೇಗೆ?
ತಪ್ಪಿದ ಭಾರೀ ಅನಾಹುತ:
ನೆಲಮಹಡಿಯ ಇತರೆ ವಾಹನಗಳಿಗೂ ಬೆಂಕಿ ವ್ಯಾಪಿಸುವ ಸಾಧ್ಯತೆ ಇದುದ್ದರಿಂದ ಅಪಾರ್ಟ್ಮೆಂಟ್ ನಿವಾಸಿಗಳು ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಭಾರೀ ಅನಾಹುತ ತಪ್ಪಿಸಿದ್ದಾರೆ. ಈ ಎರಡೂ ಘಟನೆ ಸಂಬಂಧ ಚನ್ನಮ್ಮನಕೆರೆ ಅಚ್ಚುಕಟ್ಟು ಮತ್ತು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾನು ಕೊಡಿಸಿದ್ದ ಕಾರಿಗೂ ಬೆಂಕಿ?
ರೌಡಿ ರಾಹುಲ್ ಪ್ರೇಮದ ಸಂಕೇತವಾಗಿ ರಕ್ಷಿತಾಗೆ ಇತ್ತೀಚೆಗೆ ಕಾರೊಂದನ್ನು ಗಿಫ್ಟ್ ನೀಡಿದ್ದ ಎನ್ನಲಾಗಿದೆ. ಅಪಾರ್ಟ್ಮೆಂಟ್ನ ನೆಲಮಹಡಿಯಲ್ಲಿ ರಕ್ಷಿತಾ ನಿಲುಗಡೆ ಮಾಡಿದ್ದ ಆ ಕಾರಿಗೂ ರಾಹುಲ್ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಘಟನೆ ಬಳಿಕ ರಕ್ಷಿತಾ ಹಾಗೂ ಆಕೆಯ ಪೋಷಕರು ಭಯಗೊಂಡು ಬೆಂಗಳೂರು ತೊರೆದಿದ್ದಾರೆ.
ಇದನ್ನೂ ಓದಿ: ಆನ್ಲೈನ್ ಟ್ರೇಡಿಂಗ್ ಹೆಸರಲ್ಲಿ ಮಹಿಳೆಗೆ ₹4 ಕೋಟಿ ವಂಚಿಸಿದ ಪ್ರಕರಣ: ಆರೋಪಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್
ಈ ಹಿಂದೆ ಗುಂಡು ಹಾರಿಸಿ ಬಂಧನ
ರಾಹುಲ್ ಅಲಿಯಾಸ್ ಸ್ಟಾರ್ ಹನುಮಂತನಗರ ಠಾಣೆ ರೌಡಿ ಶೀಟರ್ ಆಗಿದ್ದಾನೆ. ಈತನ ವಿರುದ್ಧ 18 ಕೇಸ್ಗಳಿವೆ. 2022ರಲ್ಲಿ ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡಿದ್ದ ರಾಹುಲ್, ಪೊಲೀಸರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ತಾಕತ್ ಇದ್ದರೆ ನನ್ನನ್ನು ಬಂಧಿಸಿ ಎಂದು ಸವಾಲು ಹಾಕಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದ. ಇದರ ಬೆನ್ನಲ್ಲೇ ಹನುಮಂತನಗರ ಪೊಲೀಸರು ಬಂಧನಕ್ಕೆ ಮುಂದಾಗಿದ್ದರು. ಈ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ರಾಹುಲ್ ಕಾಲಿಗೆ ಪಿಎಸ್ಐ ಬಸವರಾಜ್ ಪಾಟೀಲ್ ಗುಂಡು ಹಾರಿಸಿ ಬಂಧಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ