
ಬೆಂಗಳೂರು (ನ.07): ತಮ್ಮ ಮನೆಯಲ್ಲಿ ಅಲಂಕಾರಿಕವಾಗಿ ಗಾಂಜಾ ಗಿಡ ಬೆಳೆಸಿದ್ದನ್ನು ರೀಲ್ಸ್ ಮಾಡಿದ್ದ ಫಾಸ್ಟ್ ಫುಡ್ ಹೋಟೆಲ್ವೊಂದರ ಮಾಲೀಕರೂ ಆಗಿರುವ ಸಿಕ್ಕಿಂ ಮೂಲದ ದಂಪತಿಯನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದ್ದಾರೆ. ಎಂಎಸ್ಆರ್ ನಗರ ನಿವಾಸಿಗಳಾದ ಊರ್ಮಿಳಾ ಕುಮಾರಿ ಮತ್ತು ಸಾಗರ್ ಗುರುಂಗ್ ಸಂಕಷ್ಟಕ್ಕೆ ತುತ್ತಾಗಿದ್ದು, ಈ ದಂಪತಿಗೆ ಠಾಣಾ ಜಾಮೀನು ಮೇರೆಗೆ ಪೊಲೀಸರು ಬಂಧಮುಕ್ತಗೊಳಿಸಿದ್ದಾರೆ. ಈ ದಂಪತಿ ಬೆಳೆದಿದ್ದ 54 ಗ್ರಾಂ ತೂಕದ ಗಾಂಜಾ ಗಿಡವನ್ನು ಜಪ್ತಿ ಮಾಡಲಾಗಿದೆ.
ಕೆಲ ದಿನಗಳ ಹಿಂದೆ ತಮ್ಮ ಮನೆಯ ಬಾಲ್ಕನಿಯಲ್ಲಿ ನಿಂತು ರೀಲ್ಸ್ ಮಾಡಿ ಇನ್ಸ್ಟಾಗ್ರಾಂನಲ್ಲಿ ಊರ್ಮಿಳಾ ಅಪ್ಲೋಡ್ ಮಾಡಿದ್ದರು. ಈ ರೀಲ್ಸ್ನಲ್ಲಿ ಗಾಂಜಾ ಗಿಡಗಳಿರುವುದನ್ನು ನೋಡಿ ಪೊಲೀಸರಿಗೆ ಸ್ಥಳೀಯ ಕೆಲ ಯುವಕರು ವಿಷಯ ತಿಳಿಸಿದರು. ಈ ಮಾಹಿತಿ ಹಿನ್ನೆಲೆಯಲ್ಲಿ ಮನೆ ಪರಿಶೀಲನೆಗೆ ತೆರಳಿದಾಗ ಹೂವಿನಕುಂಡದಲ್ಲಿದ್ದ ಗಾಂಜಾ ಗಿಡ ಕಿತ್ತು ದಂಪತಿ ಬಿಸಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಹಲವು ದಿನಗಳಿಂದ ಎಂ.ಎಸ್.ಆರ್.ನಗರದಲ್ಲಿ ಫಾಸ್ಟ್ ಫುಡ್ ಹೋಟೆಲನ್ನು ಊರ್ಮಿಳಾ ದಂಪತಿ ನಡೆಸುತ್ತಿದ್ದು, ಆ ಹೋಟೆಲ್ನ ಮಹಡಿಯಲ್ಲಿ ದಂಪತಿ ನೆಲೆಸಿದ್ದಾರೆ.
ಮನೆಯ ಬಾಲ್ಕನಿಯಲ್ಲಿ 20 ವಿವಿಧ ಹೂವಿನ ಗಿಡಗಳ ಜತೆ ಅಕ್ರಮವಾಗಿ ಅವರು ಗಾಂಜಾ ಬೆಳೆಸಿದ್ದರು. ಆದರೆ ದಂಪತಿ ಗಾಂಜಾ ವ್ಯಸನಿಗಳಲ್ಲ. ಅಲಂಕಾರಿಕವಾಗಿ ಗಾಂಜಾ ಬೆಳೆಸಿ ಸಂಕಷ್ಟಕ್ಕೆ ತುತ್ತಾಗಿರುವುದು ತನಿಖೆಯಲ್ಲಿ ಗೊತ್ತಾಯಿತು. ಹೀಗಾಗಿ ಮತ್ತೆ ಗಾಂಜಾ ಬೇಸಾಯ ಮಾಡದಂತೆ ಎಚ್ಚರಿಕೆ ಕೊಟ್ಟು ಠಾಣಾ ಜಾಮೀನಿನ ಮೇರೆಗೆ ಬಿಡುಗಡೆಗೊಳಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಡಾ ಹಗರಣ ರಾಜ್ಯಕ್ಕೆ, ಕಾಂಗ್ರೆಸ್ ಪಕ್ಷಕ್ಕೆ ಕಪ್ಪು ಚುಕ್ಕೆ: ಕೆ.ಎಸ್.ಈಶ್ವರಪ್ಪ
ಗಾಂಜಾ ಬೆಳೆದಿರುವ ಮಾಹಿತಿ ಪಡೆದು ಊರ್ಮಿಳಾ ಮನೆಗೆ ಪರಿಶೀಲಿಸಲು ಪೊಲೀಸರು ತೆರಳಿದ್ದರು. ಆಗ ಮೊದಲ ಅಂತಸ್ತಿನಲ್ಲಿದ್ದ ಮನೆಗೆ ಹೋಗುವ ವೇಳೆಗೆ ಊರ್ಮಿಳಾಗೆ ಕೆಳ ಹಂತದ ಹೋಟೆಲ್ನಲ್ಲಿದ್ದ ಆಕೆಯ ತಂಗಿ ಪೊಲೀಸರು ಬಂದಿರುವ ಬಗ್ಗೆ ಮಾಹಿತಿ ಕೊಟ್ಟಿದ್ದರು. ಆಗ ಮನೆಯಲ್ಲಿದ್ದ ಊರ್ಮಿಳಾ ಕೂಡಲೇ ಗಾಂಜಾ ಗಿಡಗಳನ್ನು ಕಿತ್ತು ಕಸದ ಬುಟ್ಟಿಗೆ ಬಿಸಾಕಿದ್ದರು. ಮನೆ ತಪಾಸಣೆ ನಡೆಸಿದಾಗ ಕಸದ ಬುಟ್ಟಿಯಲ್ಲಿ ಗಿಡಗಳು ಪತ್ತೆಯಾದವು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ