ಬಾಗಲಕೋಟೆ: ಚಿಲ್ಲರೆ ಕೇಳುವ ನೆಪದಲ್ಲಿ 50 ಸಾವಿರ ದೋಚಿ ಪರಾರಿ

By Kannadaprabha NewsFirst Published Mar 4, 2021, 3:08 PM IST
Highlights

ಜನಧನ ಸೌಹಾರ್ದ ಸಂಘದಲ್ಲಿನ ಸಿಸಿ ಟಿವಿಯಲ್ಲಿ ಕಳ್ಳರ ಕೈಚಳಕ ಸೆರೆ| ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯಲ್ಲಿ ನಡೆದ ಘಟನೆ| ಈ ಸಂಬಂಧ ಬನಹಟ್ಟಿ ಪೊಲೀಸ್‌ ಠಾಣೆಯಲ್ಲಿ ಮೋಸದ ಪ್ರಕರಣ ದಾಖಲು| 

ರಬಕವಿ-ಬನಹಟ್ಟಿ(ಮಾ.04): ಚಿಲ್ಲರೆ ಕೇಳುವ ನೆಪದಲ್ಲಿ ಬಂದು 50 ಸಾವಿರ ನಗದು ದೋಚಿ ಪರಾರಿಯಾದ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.

500 ಹಿಡಿದುಕೊಂಡು ಸಹಕಾರಿ ಸಂಘವೊಂದಕ್ಕೆ ನುಗ್ಗಿದ ಇಬ್ಬರು ಅನಾಮಿಕ ವ್ಯಕ್ತಿಗಳು, ಚಿಲ್ಲರೆ ನೀಡುವಂತೆ ಸಂಘದಲ್ಲಿದ್ದ ಮಹಿಳಾ ಸಿಬ್ಬಂದಿಯನ್ನು ಕೇಳುವ ನೆಪದಲ್ಲಿ ಡ್ರಾದಲ್ಲಿದ್ದ 50 ಸಾವಿರಗಳನ್ನು ಕ್ಷಣಾರ್ಧದಲ್ಲಿ ದೋಚಿ ಪರಾರಿಯಾಗಿದ್ದಾರೆ.

ಹೆತ್ತ ಮಗಳ ತಲೆ ಕಡಿದು ಪೊಲೀಸ್ ಸ್ಟೇಷನ್ಗೆ ಬಂದ

ಬನಹಟ್ಟಿಯ ಸೋಮವಾರ ಪೇಟೆಯಲ್ಲಿರುವ ಜನಧನ ಸೌಹಾರ್ದ ಸಂಘದಲ್ಲಿ ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಇಬ್ಬರು ಅನಾಮಿಕ ವ್ಯಕ್ತಿಗಳು ಬೈಕ್‌ ಮೇಲೆ ಬಂದು ಸಂಘದಲ್ಲಿ ಮಹಿಳಾ ಸಿಬ್ಬಂದಿಯೊಬ್ಬರು ಮಾತ್ರ ಇದ್ದದ್ದನ್ನು ಗಮನಿಸಿ ಚಿಲ್ಲರೆ ಕೇಳುವ ನೆಪದಲ್ಲಿ ಗೊಂದಲಗೊಳಿಸಿದ್ದಾರೆ. 

ಸಂಘದ ಸಿಬ್ಬಂದಿ ಚಿಲ್ಲರೆ ಇಲ್ಲವೆಂದು ಸ್ಪಷ್ಟವಾಗಿ ತಿಳಿಸಿದರೂ ಕೊನೆಗೆ 100 ಗಳದ್ದಾದರೂ ನೀಡಿ ಎಂದು ಪೀಡಿಸಿದ್ದಾರೆ. ಓರ್ವ ತಿಳಿಯದಂತೆ ಅನ್ಯ ಭಾಷೆ ಮಾತನಾಡುತ್ತ ಗೊಂದಲ ಸೃಷ್ಟಿಸಿದ್ದಾನೆ. ಮತ್ತೋರ್ವ ಸಿಬ್ಬಂದಿಯೊಂದಿಗೆ ಮಾತಿಗಿಳಿದಿದ್ದಾನೆ. ಏಕಾಏಕಿ ಡ್ರಾದಲ್ಲಿದ್ದ 500 ಕಂತೆಯಿರುವ ಬಂಡಲ್‌ವೊಂದನ್ನು ಕ್ಷಣಾರ್ಧದಲ್ಲಿ ಎತ್ತಿಕೊಂಡು ಇಬ್ಬರೂ ಬೈಕ್‌ ಏರಿ ಪರಾರಿಯಾದ ಘಟನೆ ನಡೆದಿದೆ. ಕಳ್ಳರ ಕೈಚಳಕ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಬನಹಟ್ಟಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಈ ಕುರಿತು ಬನಹಟ್ಟಿ ಪೊಲೀಸ್‌ ಠಾಣೆಯಲ್ಲಿ ಮೋಸದ ಪ್ರಕರಣ ದಾಖಲಾಗಿದೆ.
 

click me!