
ದಾಬಸ್ಪೇಟೆ (ನ.15) : ತ್ಯಾಮಗೊಂಡ್ಲು ಹೋಬಳಿ ತಡಸಿಘಟ್ಟಗ್ರಾಮದ ಕುಟುಂಬವೊಂದು ಪಿತ್ರಾರ್ಜಿತ ಆಸ್ತಿಯನ್ನ ಕಳೆದುಕೊಂಡು ಮನನೊಂದು ಕುಟುಂಬದ ಎಲ್ಲಾ ಸದಸ್ಯರು ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ದಯಾಮರಣದ ಮನವಿ ಪತ್ರ ಸಲ್ಲಿಸಿದ್ದಾರೆ.
ಏನಿದು ಘಟನೆ: ತಡಸಿಘಟ್ಟದ ಗಂಗಹನುಮಕ್ಕ ಕುಟುಂಬದ 26 ಸದಸ್ಯರು ನೆಲಮಂಗಲ ತಹಶೀಲ್ದಾರ್ ಕಚೇರಿ ಮುಂದೆ ನಿಂತು ದಯಾಮರಣದ ಪತ್ರಬರೆದು ಎಲ್ಲರು ಸಹಿ ಹಾಕಿ ನಮಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದಾರೆ. ತಡಸೀಘಟ್ಟಗ್ರಾಮದಲ್ಲಿನ ಸರ್ವೆ ನಂ. 73ರಲ್ಲಿ ತಮ್ಮ 3. 22 ಎಕರೆ ಜಮೀನು ಇದೇ ಗ್ರಾಮದ ನಿವಾಸಿ ರಾಜಗೋಪಾಲಯ್ಯ ಎಂಬ ವ್ಯಕ್ತಿಗೆ ಗಂಗಹನುಮಕ್ಕನ ತಂದೆ ದಿವಂಗತ ಭೈರಣ್ಣ 10-06-1981ರಂದು 3500 ರೂ.ಗಳಿಗೆ ವಾಯಿದೆ ಕ್ರಯಕ್ಕೆ ಕೊಟ್ಟಿದ್ದರು. ಆದರೆ ರಾಜಗೋಪಾಲಯ್ಯ ನಕಲಿ ದಾಖಲೆಗಳನ್ನ ಸೃಷ್ಟಿಸಿ ವಾಯಿದೆ ಕ್ರಯಕ್ಕೆ ಕೊಟ್ಟಿದ್ದ ಜಮೀನನ್ನು ತನ್ನ ರಾಜಕೀಯ ಪ್ರಭಾವ ಬಳಸಿ ಶುದ್ಧ ಕ್ರಯ ಮಾಡಿಕೊಂಡು ದೋಖಾ ಮಾಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಅತ್ತೆ ಮಾವನನ್ನು ನೋಡಿಕೊಳ್ಳುವ ವಿಚಾರಕ್ಕೆ ಗಲಾಟೆ, ಸೊಸೆ ಕಾಟಕ್ಕೆ ತಾಯಿ ಮಗ ಆತ್ಮಹತ್ಯೆ!
ಕುಟುಂಬದ ಹಿರಿಯರಾದ ನಾರಾಯಣಪ್ಪ ಪ್ರತಿಕ್ರಿಯಿಸಿ, ನಮ್ಮ ತಂದೆ ಕಾಲವಾದ ನಂತರ ಜಮೀನು ವಾಪಸ್ ಪಡೆಯಲು ತೆರಳಿದಾಗ ಇವತ್ತು, ನಾಳೆ ಅಂತ ಕಾಲಹರಣ ಮಾಡಿಕೊಂಡು 2012ರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ಸಲ್ಲಿಸಿ ಈ ದಾವೆ ವಜಾಗೊಳಿಸಿ ಅವನ ಹೆಸರಿಗೆ ಮಾಡಿಕೊಂಡಿದ್ದಾನೆ. ನಂತರ ಈ ಬಗ್ಗೆ ಕೋರ್ಚ್ ಮೆಟ್ಟಿಲು ಹತ್ತಿದರೂ ನ್ಯಾಯ ಸಿಗುತ್ತಿಲ್ಲ. ತ್ಯಾಮಗೊಂಡ್ಲು ಠಾಣೆಗೆ ರಾಜಗೋಪಾಲಯ್ಯನ ಬಳಿ ಇರುವ ಶುದ್ಧ ಕ್ರಯ ಪತ್ರದ ಮೇಲೆ ಇರುವ ಸಹಿ ಅಸಲಿ ಅಥವಾ ನಕಲಿ ಎಂದು ತಿಳಿಯಬೇಕಾದರೆ ಆ ಸಹಿಗಳ ಎಫ್ಎಸ್ಎಲ್ ಪರೀಕ್ಷೆಯಾಗುವಂತೆ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಬದಲು ಕಡೆಯ ಬಾರಿ ಪ್ರಯತ್ನ ಅಂತ ರಾಷ್ಟ್ರಪತಿಗಳಿಗೆ ದಯಾಮರಣ ಕೋರಿ ನೆಲಮಂಗಲ ತಹಶೀಲ್ದಾರ್ ಮುಖಾಂತರ ಅರ್ಜಿ ಸಲ್ಲಿಸಿದ್ದೇವೆ. ಅರ್ಜಿ ಸ್ವೀಕರಿಸಿರುವ ತಹಸೀಲ್ದಾರ್ ಮಂಜುನಾಥ್ ಸಮಸ್ಯೆ ಈಡೇರಿಸುವ ಭರವಸೆ ನೀಡಿದ್ದಾರೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ