
ಮಂಗಳೂರು(ಜ.28): ರಾಜ್ಯದ ಅತಿದೊಡ್ಡ ದರೋಡೆ ಪ್ರಕರಣಗಳಲ್ಲಿ ಒಂದಾದ ಉಳ್ಳಾಲದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣ ಸುಖಾಂತ್ಯ ಕಂಡಿದೆ. ದರೋಡೆಕೋರರು ಲೂಟಿ ಮಾಡಿದ್ದ ಒಟ್ಟು 18.670 ಕೇಜಿ ಚಿನ್ನಾಭರಣ ಪೈಕಿ 18.314 ಕೇಜಿ ಚಿನ್ನಾಭರಣ ಸುಮಾರು 800 ಕಿ.ಮೀ. ದೂರದಿಂದ ಪೊಲೀಸರು ಬಿಗಿ ಭದ್ರತೆಯಲ್ಲಿ ವಾಪಸ್ ತಂದಿದ್ದಾರೆ. ಇದರೊಂದಿಗೆ ದರೋಡೆಕೋರರು ಹೊತ್ತೊಯ್ದಿದ್ದ ಬಹುತೇಕ ಚಿನ್ನಾಭರಣ ಮರಳಿದ್ದು, ಬ್ಯಾಂಕಿನ 1600 ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದಾರೆ.
ಲೂಟಿ ಮಾಡಿದ್ದ ₹11,67,044 ನಗದು ಪೈಕಿ 3,80,500 ಜಪ್ತಿ ಮಾಡಲಾಗಿದೆ. ಜೊತೆಗೆ ಕೃತ್ಯಕ್ಕೆ ಬಳಕೆ ಮಾಡಲಾದ 2 ಪಿಸ್ತೂಲ್, 3 ಸಜೀವ ಗುಂಡು, ಫಿಯೆಟ್ ಕಾರು, ಒಂದು ನಕಲಿ ನಂಬರ್ ಪ್ಲೇಟ್ ವಶಪಡಿಸಿಕೊಳ್ಳಲಾಗಿದೆ. ದರೋಡೆ ಮರುಕ್ಷಣವೇ ಆರೋಪಿಗಳ ಸೆರೆಗೆ ಮುಗಿಬಿದ್ದ ಪೊಲೀಸ್ ತಂಡಗಳು ಕೇವಲ 3 ದಿನದಲ್ಲಿ ಬರೋಬ್ಬರಿ 3700 ಕಿ.ಮೀ.ಗೂ ಅಧಿಕ ದೂರ ಪ್ರಯಾಣ ಮಾಡಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿವೆ.
ಮಂಗಳೂರು ಬ್ಯಾಂಕ್ ದರೋಡೆ ಟೀಂ ಕಿಂಗ್ಪಿನ್ಗೆ ಪೊಲೀಸ್ ಗುಂಡೇಟು
ಜ.17ರಂದು ದರೋಡೆ ನಡೆದಿದ್ದು, ಮೂರೇ ದಿನಗಳಲ್ಲಿ ಆರೋಪಿಗಳಾದ ತಮಿಳು ನಾಡಿನ ಅಮ್ಮನ್ಕೋವಿಲ್ ನಿವಾಸಿ ಮುರುಗಂಡಿ ಫೇವರ್ (36), ಮುಂಬೈ ಡೊಂಬಿವಿಲಿಯ ಯೊಸುವಾ ರಾಜೇಂದ್ರನ್ (35), ಮುಂಬೈ ತಿಲಕನಗರದ ಕಣ್ಣನ್ ಮಣಿ (36) ಮತ್ತು ಚಿನ್ನಾಭರಣ ಬಚ್ಚಿಡಲು ಸಹಕರಿಸಿದ ಮುರುಗುಂಡಿ ಥೇವರ್ನ ತಂದೆ ಷಣ್ಮುಗ ಸುಂದರಮ್ನನನ್ನು ಬಂಧಿಸಲಾಗಿದೆ. ಇನ್ನೂ ನಾಲ್ವರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ. ಉಳಿದ 200 ಗ್ರಾಂ ಚಿನ್ನ ಮತ್ತು ಉಳಿಕೆ ನಗದು ಹಣ ಪತ್ತೆ ಹಚ್ಚಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಪ್ರಕರಣ ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಎಸಿಪಿಗಳಾದ ಧನ್ಯಾ ನಾಯಕ್ ಮತ್ತು ಮನೋಜ್ ನೇತೃತ್ವದಲ್ಲಿ ಮಂಗಳೂರು ಪೊಲೀಸರ ಹಲವು ತಂಡಗಳು ತಮಿಳುನಾಡು ಮತ್ತು ಮುಂಬೈನಲ್ಲಿ ದಣಿವರಿಯದೆ ಕೆಲಸ ಮಾಡಿದ್ದು, ಈ ತಂಡಕ್ಕೆ ಶೀಘ್ರ ಸೂಕ್ತ ಬಹುಮಾನ ಘೋಷಿಸಲಾಗುವುದು ಎಂದು ಅನುಪಮ್ ಅಗ್ರವಾಲ್ ಹೇಳಿದರು. ಡಿಸಿಪಿಗಳಾದ ಸಿದ್ದಾರ್ಥ್ ಗೋಯಲ್, ರವಿಶಂಕರ್, ಎಸಿಪಿಗಳಾದ ಧನ್ಯಾ ನಾಯಕ್, ಮನೋಜ್ ಇದ್ದರು.
ಕೋಟೆಕಾರ್ ಬ್ಯಾಂಕ್ ದರೋಡೆಗೆ ಸುಪಾರಿ ಸಂಚು: ಮುಂಬೈ ಗ್ಯಾಂಗ್ ಜತೆ ಲೋಕಲ್ ಗ್ಯಾಂಗ್ ಡೀಲ್?
ಶಿವಮೊಗ್ಗ ಕೆನರಾ ಬ್ಯಾಂಕ್ ದರೋಡೆಗೆ ಯತ್ನ
ಶಿವಮೊಗ್ಗ: ಎಟಿಎಂ ಒಡೆದು ಕಳ್ಳತನಕ್ಕೆ ಯತ್ನಿ ಸಿದ ಘಟನೆ ಭಾನುವಾರ ರಾತ್ರಿ ಶಿವಮೊಗ್ಗ ನಗರದ ನೆಹರು ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂನಲ್ಲಿ ನಡೆದಿದೆ. ಈ ಸಂಬಂಧ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಿಹಾರ ಮೂಲದ ಮಹಮ್ಮದ್ ವಸೀಂ ಬಿನ್ ಅಲೀಮ್ ಹಸನ್ (22) ಬಂಧಿತ ಆರೋಪಿ.
ಕೆನರಾ ಬ್ಯಾಂಕ್ ಕೇಂದ್ರದಲ್ಲಿ 2 ಎಟಿಎಂ ಮಷೀನ್ ಗಳಿದ್ದು, ಮೊಬೈಲ್ನಲ್ಲಿ ಮಾತನಾಡುತ್ತ ಒಳಗೆ ಬಂದ ಆರೋಪಿ, ಮೊದಲು ಒಂದು ಯಂತ್ರ ಪರಿಶೀಲಿಸಿ ಪಕ್ಕದ ಎಟಿಎಂ ಯಂತ್ರವನ್ನು ಪರಿಶೀಲಿಸಿದ್ದಾನೆ. ಅದರ ಲಾಕ್ಗಳನ್ನು ತೆಗೆದು ಹಣ ಕದಿಯಲು ಯತ್ನಿಸಿದ್ದಾನೆ. ಆಗ ಸೈರನ್ ಕೂಗಿದ್ದು, ಕಳ್ಳ ಪರಾರಿಯಾಗಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ