ಹುಬ್ಬಳ್ಳಿ: ಶಾಲಾ ಮಕ್ಕಳನ್ನಿಟ್ಟುಕೊಂಡು ಮೀಟರ್‌ ಬಡ್ಡಿ ವ್ಯವಹಾರ..!

By Kannadaprabha NewsFirst Published Aug 23, 2024, 12:39 PM IST
Highlights

ಮೀಟರ್‌ ಬಡ್ಡಿ ನಡೆಸುತ್ತಿರುವವರ ಮೇಲೆ ಈಗಾಗಲೇ ನಿಗಾ ವಹಿಸಲಾಗಿದೆ. ಕಮೀಷನರೇಟ್‌ ವ್ಯಾಪ್ತಿಯಲ್ಲಿನ ಎಲ್ಲ ಠಾಣೆಗಳಲ್ಲೂ ಇಂತಹ ಪ್ರಕರಣ ದಾಖಲಾಗಿದ್ದರೆ ಅವುಗಳ ಮಾಹಿತಿ ಪಡೆದು ತನಿಖೆ ನಡೆಸಿ ಆರೋಪಿಗಳ ಬಂಧಿಸಿ ಸೂಕ್ತ ಕ್ರಮಕ್ಕೆ ಸೂಚನೆ ನೀಡಿದ್ದೇನೆ:  ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ  

ಹುಬ್ಬಳ್ಳಿ(ಆ.23):  ಮೀಟರ್‌ ಬಡ್ಡಿ ವ್ಯವಹಾರದಿಂದ ಶಾಲಾ ವಿದ್ಯಾರ್ಥಿಗೆ ಚೂರಿ ಇರಿತದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೆ 10 ಜನರನ್ನು ಹುಬ್ಬಳ್ಳಿ-ಧಾರವಾಡ ಕಮಿಷನರೇಟ್‌ ಬಂಧಿಸಿದೆ. ಈ ಹಿಂದೆಯೇ 4 ಜನ ಅಪ್ರಾಪ್ತರು ಸೇರಿದಂತೆ 6 ಜನರನ್ನು ವಶಕ್ಕೆ ಪಡೆಯಲಾಗಿತ್ತು. ಈಗ ಬಂಧಿತರಾದವರೇ ಮಕ್ಕಳನ್ನು ಬಳಸಿ ಬಡ್ಡಿ ವ್ಯವಹಾರ ನಡೆಸುತ್ತಿದ್ದರು. ಈ ವಿಷಯವನ್ನು ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ ಮಾಧ್ಯಮಗಳಿಗೆ ವಿವರಿಸಿದರು.

ಇಲ್ಲಿನ ವೀರಾಪುರ ಓಣಿಯ ಆದಿತ್ಯ ಸಣ್ಣತಂಗಿ, ಮಯೂರ ಚಾಕಲಬ್ಬಿ, ಮಹಾಂತೇಶ ಹೊಸಮನಿ, ಅಭಿಷೇಕ ಪಗಲಾಪೂರ, ಅರ್ಜುನ ಗಾಯಕವಾಡ, ಕೈಬೂಸಾಬ ಮುಲ್ಲಾ, ಅಜಯ ಸಿಂಗನಹಳ್ಳಿ, ಆನಂದ ಗೋಕಾಕ, ಮಂಜುನಾಥ ಕೊರವರ, ಕಿರಣ್ ಕೊರವರ, ಕಿರಣ್ ದಾಮೋದರ್ ಹಾಗೂ ಗಣೇಶ್ ಹೀಗೆ ಒಟ್ಟು 12 ಜನರನ್ನು ಬಂಧಿಸಲಾಗಿದೆ.

Latest Videos

ಹುಬ್ಬಳ್ಳಿ ಶಾಲೇಲಿ ಮಕ್ಕಳಿಂದ ಮೀಟರ್‌ ಬಡ್ಡಿ ವ್ಯವಹಾರ: ದುಡ್ಡು ಕೊಡದದ್ದಕ್ಕೆ ಚಾಕುವಿನಿಂದ ಇರಿದ ಬಾಲಕ..!

ಇವರಲ್ಲಿ ಇಬ್ಬರನ್ನು 3 ದಿನದ ಹಿಂದೆಯೇ ಬಂಧಿಸಲಾಗಿತ್ತು. ಬಂಧಿತರಿಂದ 10 ವಿವಿಧ ಕಂಪನಿಯ ಮೊಬೈಲ್, 8 ಬೈಕ್‌, 2 ಹರಿತವಾದ ಆಯುಧಗಳು ಸೇರಿದಂತೆ ಸಾಲದ ವ್ಯವಹಾರಕ್ಕೆ ನಮೂದಿಸುವ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೋಲಾರ: ಜಿಲ್ಲೆಯಲ್ಲಿ ಮತ್ತೆ ತಲೆ ಎತ್ತಿದ ಮೀಟರ್‌ ಬಡ್ಡಿ ದಂಧೆ

ಇವರ ಪಾತ್ರವೇನು?

ಕಳೆದ 3 ದಿನದ ಹಿಂದೆ ಸಾಲ ಪಡೆದಿದ್ದ 10ನೇ ತರಗತಿ ವಿದ್ಯಾರ್ಥಿಯೊಬ್ಬ ವಸೂಲಾತಿಗೆ ಬಂದಿದ್ದ 9ನೇ ತರಗತಿಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದ. ಈ ಘಟನೆಯಿಂದಲೇ ಹುಬ್ಬಳ್ಳಿಯಲ್ಲಿ ಬಡ್ಡಿ ವ್ಯವಹಾರಕ್ಕೆ ಮಕ್ಕಳು ಬಳಕೆಯಾಗುತ್ತಿರುವುದು ಬೆಳಕಿಗೆ ಬಂದಿತ್ತು. ಆಗ ನಾಲ್ವರು ಅಪ್ರಾಪ್ತರು ಸೇರಿದಂತೆ 6 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆಗ ಬಂಧಿತರಾದವರ ಪೈಕಿ ಇಬ್ಬರು ವಯಸ್ಕರಾಗಿದ್ದರು. ಅವರು ಕೂಡ ಬಡ್ಡಿ ಕುಳಗಳೇ. ಅವರನ್ನು ವಿಚಾರಣೆಗೊಳಪಡಿಸಿದಾಗ ತಾವಿಬ್ಬರು ಸೇರಿದಂತೆ 12 ಜನರು ಸಾಲ ನೀಡಲು ಹಾಗೂ ವಸೂಲಾತಿಗೆ ಮಕ್ಕಳನ್ನು ಬಳಸಿಕೊಳ್ಳುತ್ತಿದ್ದನ್ನು ಒಪ್ಪಿಕೊಂಡಿದ್ದರು. ಯಾರ್‍ಯಾರು ಮಕ್ಕಳನ್ನು ಬಳಸಿಕೊಳ್ಳುತ್ತಿದ್ದರು. ಚಾಕು ಇರಿದ ಬಾಲಕನಿಗೆ 10 ಜನರಲ್ಲಿ ಯಾರು ಸಾಲ ಕೊಟ್ಟಿದ್ದರು. ಯಾರ ಮೂಲಕ ಸಾಲ ಕೊಟ್ಟಿದ್ದರು. ವಸೂಲಾತಿ ಹೇಗೆ ಮಾಡುತ್ತಿದ್ದರು ಎಂಬುದನ್ನೆಲ್ಲ ಬಿಚ್ಚಿಟ್ಟಿದ್ದರು. ಆರೋಪಿಗಳು ತಿಳಿಸಿದ ಮಾಹಿತಿ ಮೇರೆಗೆ ಮಕ್ಕಳನ್ನು ಬಳಸಿಕೊಂಡು ಬಡ್ಡಿ ವ್ಯವಹಾರ ನಡೆಸುತ್ತಿದ್ದ 12 ಬಡ್ಡಿ ವ್ಯವಹಾರ ನಡೆಸುತ್ತಿದ್ದವರನ್ನು ಬಂಧಿಸಲಾಗಿದೆ ಎಂದು ಕಮಿಷನರ್‌ ವಿವರಿಸಿದರು. ಈ ನಡುವೆ ಚಾಕು ಇರಿತದಿಂದ ಗಾಯಗೊಂಡಿರುವ 9ನೇ ತರಗತಿ ವಿದ್ಯಾರ್ಥಿ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಮೀಟರ್‌ ಬಡ್ಡಿ ನಡೆಸುತ್ತಿರುವವರ ಮೇಲೆ ಈಗಾಗಲೇ ನಿಗಾ ವಹಿಸಲಾಗಿದೆ. ಕಮೀಷನರೇಟ್‌ ವ್ಯಾಪ್ತಿಯಲ್ಲಿನ ಎಲ್ಲ ಠಾಣೆಗಳಲ್ಲೂ ಇಂತಹ ಪ್ರಕರಣ ದಾಖಲಾಗಿದ್ದರೆ ಅವುಗಳ ಮಾಹಿತಿ ಪಡೆದು ತನಿಖೆ ನಡೆಸಿ ಆರೋಪಿಗಳ ಬಂಧಿಸಿ ಸೂಕ್ತ ಕ್ರಮಕ್ಕೆ ಸೂಚನೆ ನೀಡಿದ್ದೇನೆ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ ಹೇಳಿದರು.

click me!