WTC FInal: ಟೀಂ ಇಂಡಿಯಾದ ಆಯ್ಕೆಯಲ್ಲಿ ತಪ್ಪಾಯಿತು: ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ

Published : Jun 17, 2023, 09:04 AM IST
WTC FInal: ಟೀಂ ಇಂಡಿಯಾದ ಆಯ್ಕೆಯಲ್ಲಿ ತಪ್ಪಾಯಿತು: ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ

ಸಾರಾಂಶ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಆದ ಪ್ರಮಾದ ಒಪ್ಪಿಕೊಂಡ ಬಿಸಿಸಿಐ ಅಧ್ಯಕ್ಷ ನಮ್ಮ ತಂಡದ ಆಯ್ಕೆಯಲ್ಲಿ ಎಡವಿದೆವು ಎಂದ ರೋಜರ್ ಬಿನ್ನಿ ಟೆಸ್ಟ್‌ ವಿಶ್ವ​ಕಪ್‌ ಫೈನಲ್‌ನ ಮೊದಲ ದಿನ ಭಾರತ ತಂಡ ಸರಿಯಾಗಿ ಆಡಲಿಲ್ಲ

ಚಾಮರಾಜನಗರ(ಜೂ.17): ಇತ್ತೀ​ಚೆಗೆ ನಡೆದ ವಿಶ್ವ ಟೆಸ್ಟ್‌ ಚಾಂಪಿ​ಯ​ನ್‌​ಶಿ​ಪ್‌​ನ ಫೈನಲ್‌ನಲ್ಲಿ ತಂಡದ ಆಯ್ಕೆಯಲ್ಲಿ ನಾವು ಎಡವಿದೆವು ಎಂದು ಬಿಸಿಸಿಐ ಅಧ್ಯಕ್ಷ ರೋಜರ್‌ ಬಿನ್ನಿ ಹೇಳಿದ್ದಾರೆ. ಬಂಡೀಪುರ ಬಳಿ ಕೃಷಿ ಮಾಡುತ್ತಿರುವ ಬಿನ್ನಿ, ಶುಕ್ರವಾರ ಇಲ್ಲಿ ಟ್ರ್ಯಾಕ್ಟರ್‌ ಖರೀದಿಗೆ ಆಗಮಿಸಿದ್ದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದರು. 

‘ವಿಭಿನ್ನ ವಾತಾವರಣದಲ್ಲಿ ಕ್ರಿಕೆಟ್‌ ಆಡುವಾಗ ಪಿಚ್‌ ಹೇಗೆ ವರ್ತಿಸಲಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಅಸ್ಪ್ರೇಲಿ​ಯಾ ವಿರುದ್ಧದ ಟೆಸ್ಟ್‌ ವಿಶ್ವ​ಕಪ್‌ ಫೈನಲ್‌ನ ಮೊದಲ ದಿನ ಭಾರತ ತಂಡ ಸರಿಯಾಗಿ ಆಡಲಿಲ್ಲ. ತಂಡದ ಆಯ್ಕೆಯಲ್ಲೂ ಕೆಲ ಎಡವಟ್ಟುಗಳು ಆದವು. ಹೀಗಾಗಿ ಸೋಲನುಭವಿಸಬೇಕಾಯಿತು’ ಎಂದರು. 

ಇದೇ ವೇಳೆ ಐಪಿಎಲ್‌ನಿಂದಾಗಿ ಟೆಸ್ಟ್‌ ಕ್ರಿಕೆಟ್‌ನತ್ತ ಆಟಗಾರರು ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ ಎನ್ನುವ ಕೆಲ ಮಾಜಿ ಕ್ರಿಕೆಟಿಗರ ಅಭಿಪ್ರಾಯ ಸರಿಯಲ್ಲ. ಐಪಿಎಲ್‌ಗೂ ಟೆಸ್ಟ್‌ ಪ್ರದರ್ಶನಕ್ಕೂ ಸಂಬಂಧವಿಲ್ಲ ಎಂದು ಬಿನ್ನಿ ಹೇಳಿದರು.

ಟೆಸ್ಟ್‌ ಫೈನಲ್‌ಗೆ ಆಯ್ಕೆ ಮಾಡದ್ದಕ್ಕೆ ಅಶ್ವಿನ್‌ ಬೇಸರ!

ನವ​ದೆ​ಹ​ಲಿ: ವಿಶ್ವದ ನಂ.1 ಟೆಸ್ಟ್‌ ಬೌಲರ್‌ ಆಗಿದ್ದರೂ ತಂಡ​ದಲ್ಲಿ ಪದೇ ಪದೇ ನಿರ್ಲ​ಕ್ಷ್ಯಕ್ಕೆ ಒಳ​ಗಾ​ಗು​ತ್ತಿ​ರುವುದ​ಕ್ಕೆ ಹಾಗೂ ಇತ್ತೀ​ಚೆಗೆ ನಡೆದ ವಿಶ್ವ ಟೆಸ್ಟ್‌ ಚಾಂಪಿ​ಯ​ನ್‌​ಶಿಪ್‌ ಫೈನ​ಲ್‌ಗೆ ತಮ್ಮ​ನ್ನು ಆಯ್ಕೆ ಮಾಡ​ದ್ದಕ್ಕೆ ಭಾರ​ತದ ಆರ್‌.​ಅ​ಶ್ವಿನ್‌ ಪರೋಕ್ಷವಾಗಿ ಬೇಸರ ವ್ಯಕ್ತ​ಪ​ಡಿ​ಸಿ​ದ್ದಾ​ರೆ. ಅಲ್ಲದೇ ಬೌಲರ್‌ ಆಗಿ​ರು​ವು​ದಕ್ಕೆ ತಮಗೆ ವಿಷಾದವಿದೆ ಎಂದಿ​ದ್ದಾ​ರೆ.

ಈ ಬಗ್ಗೆ ಸಂದ​ರ್ಶ​ನ​ವೊಂದ​ರಲ್ಲಿ ಮುಕ್ತ​ವಾಗಿ ಮಾತ​ನಾ​ಡಿ​ರುವ ಅವರು, ‘ಟೆಸ್ಟ್‌ ವಿಶ್ವ​ಕಪ್‌ ಫೈನ​ಲ್‌​ನಲ್ಲಿ ಆಡುವ ಬಯ​ಕೆ​ಯಿತ್ತು. ತಂಡ​ ಫೈನ​ಲ್‌ ತಲು​ಪಿ​ಸಲು ನನ್ನ ಕೊಡು​ಗೆಯೂ ಇದೆ. ಕಳೆದ ಆವೃತ್ತಿ ಫೈನ​ಲ್‌​ನಲ್ಲೂ 4 ವಿಕೆಟ್‌ ತೆಗೆ​ದಿದ್ದೆ. 2018-19ರಿಂದಲೂ ವಿದೇಶಿ ಪಿಚ್‌​ಗ​ಳಲ್ಲಿ ಉತ್ತಮ ಪ್ರದ​ರ್ಶನ ತೋರು​ತ್ತಿದ್ದೇ​ನೆ ಮತ್ತು ಹಲವು ಪಂದ್ಯ​ಗ​ಳಲ್ಲಿ ಗೆಲ್ಲಿ​ಸಿ​​ದ್ದೇನೆ. ತಂಡದ ನಾಯಕ, ಕೋಚ್‌ ಯಾವ ಸಂಯೋಜನೆಯೊಂದಿಗೆ ಆಡಿದರೆ ಸೂಕ್ತ ಎನ್ನುವುದನ್ನು ನಿರ್ಧರಿಸುತ್ತಾರೆ. ಈ ಮೊದಲು ಅವಕಾಶ ಸಿಗದಿದ್ದಾಗ ಆಘಾತಕ್ಕೊಳಗಾಗುತ್ತಿದೆ. ಆದರೆ ಈಗ ಅಭ್ಯಾಸವಾಗಿದೆ. ಟೆಸ್ಟ್‌ ಫೈನ​ಲ್‌​ನಲ್ಲಿ ನಾನು ಆಡು​ವು​ದಿಲ್ಲ ಎಂದು ನನಗೆ 48 ಗಂಟೆ ಮೊದಲೇ ಗೊತ್ತಿ​ತ್ತು’ ಎಂದಿ​ದ್ದಾರೆ.

CBSE ಟಾಪರ್‌, ಐಎಎಫ್‌ ಕೆಲಸ, ಎಲ್ಲವನ್ನೂ ಬಿಟ್ಟು ಈಕೆ ಆಯ್ಕೆ ಮಾಡಿಕೊಂಡಿದ್ದು ಕ್ರಿಕೆಟ್‌!

ಇದೇ ವೇಳೆ ಬೌಲರ್‌ ಆಗಿದ್ದರ ಬಗ್ಗೆ ಮಾತನಾಡಿರುವ ಅಶ್ವಿನ್‌, ‘ನಾನು ಚಿಕ್ಕವನಿದ್ದಾಗ ಕ್ರಿಕೆಟ್‌ ನೋಡುತ್ತಿದ್ದೆ. ಆಗ ಸಚಿನ್‌ ತೆಂಡು​ಲ್ಕ​ರ್‌ ಹೋರಾಡಿ ತಂಡಕ್ಕೆ ರನ್‌ ಕಲೆಹಾಕುತ್ತಿದ್ದರು. ಆದರೆ ಬೌಲರ್‌ಗಳು ಸುಲಭವಾಗಿ ಎದುರಾಳಿಗೆ ರನ್‌ ಬಿಟ್ಟುಕೊಡುತ್ತಿದ್ದರಿಂದ ನಾವು ಪಂದ್ಯ ಸೋಲುತ್ತಿದ್ದೆವು. ಅದನ್ನು ನೋಡಿ ನಾನು ಒಬ್ಬ ಬೌಲರ್‌ ಆಗಬೇಕು. ಎಲ್ಲರಿಗಿಂತ ಉತ್ತಮವಾಗಿ ಬೌಲ್‌ ಮಾಡಬೇಕು ಎಂದು ನಿರ್ಧರಿಸಿದ್ದೆ. ಆದರೆ ನಿವೃತ್ತಿ ವೇಳೆ ನನ​ಗೆ ಬ್ಯಾಟರ್‌ ಆಗದೇ ಇರುವು​ದಕ್ಕೆ ವಿಷಾದ ಉಂಟಾಗಬ​ಹು​ದು. ನಾನು ಬೌಲರ್‌ ಆಗಲೇ ಬಾರದಿತ್ತು ಅನಿಸುತ್ತದೆ’ ಎಂದಿದ್ದಾರೆ.

ಸಹ ಆಟಗಾರರ ನಡುವಿನ ಸಂಬಂಧದ ಬಗ್ಗೆಯೂ ಬೇಸರದಿಂದಲೇ ಮಾತನಾಡಿರುವ ಅಶ್ವಿನ್‌, ‘ಈ ಹಿಂದೆ ಸಹ ಆಟಗಾರರು ಸ್ನೇಹಿತರಾಗಿದ್ದರು. ಈಗ ಸಹೋದ್ಯೋಗಿಗಳಾಗಿದ್ದಾರೆ. ಈಗ ಎಲ್ಲರೂ ಮತ್ತೊಬ್ಬರನ್ನು ಹಿಂದಿಕ್ಕಿ ಮುನ್ನುಗ್ಗುವುದರಲ್ಲೇ ಬ್ಯುಸಿಯಾಗಿದ್ದಾರೆ. ಒಬ್ಬರನ್ನೊಬ್ಬರು ಹೇಗಿದ್ದೀರಾ ಎಂದು ಕೇಳುವಷ್ಟೂ ಯಾರಿಗೂ ಸಮಯವಿಲ್ಲ’ ಎಂದಿದ್ದಾರೆ.

ಲಂಡನ್‌ನ ದಿ ಓವಲ್‌ ಮೈದಾನದಲ್ಲಿ ನಡೆದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 209 ರನ್‌ಗಳ ಹೀನಾಯ ಸೋಲು ಅನುಭವಿಸಿತು. ಈ ಮೂಲಕ ಸತತ ಎರಡನೇ ಬಾರಿಗೆ ಟೆಸ್ಟ್ ವಿಶ್ವಕಪ್‌ ಫೈನಲ್‌ನಲ್ಲಿ ಭಾರತ ಕ್ರಿಕೆಟ್ ತಂಡವು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

T20I ನೂರು ಸಿಕ್ಸರ್ ಕ್ಲಬ್ ಸೇರಿದ ಹಾರ್ದಿಕ್ ಪಾಂಡ್ಯ; ರೋಹಿತ್ ರೆಕಾರ್ಡ್ ಮುರಿತಾರಾ ಈ ಆಲ್ರೌಂಡರ್?
ಅಂತಾರಾಷ್ಟ್ರೀಯ ಟಿ20ಯಲ್ಲಿ ಆಲ್ರೌಂಡರ್ ಆಗಿ ಅಪರೂಪದಲ್ಲೇ ಅಪರೂಪದ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ!