
ಕೋಲ್ಕತಾ(ನ.12): ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಕ್ರಿಕೆಟ್ ಟೂರ್ನಿ ಶನಿವಾರ ಆರಂಭವಾಗಿದ್ದು, 5ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಕರ್ನಾಟಕ ತಂಡ ಎಲೈಟ್ ‘ಬಿ’ ಗುಂಪಿನ ಆರಂಭಿಕ ಪಂದ್ಯದಲ್ಲಿ ಮೇಘಾಲಯ ಸವಾಲನ್ನು ಎದುರಿಸುತ್ತಿದೆ. ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ.
2019-20ರಲ್ಲಿ ಕೊನೆ ಬಾರಿ ಚಾಂಪಿಯನ್ ಆಗಿರುವ ರಾಜ್ಯ ತಂಡವನ್ನು ಈ ಬಾರಿ ಮಯಾಂಕ್ ಅಗರ್ವಾಲ್ ಮುನ್ನಡೆಸುತ್ತಿದ್ದಾರೆ. 2020ರಲ್ಲಿ ಸೆಮಿಫೈನಲ್ನಲ್ಲಿ ಸೋತಿದ್ದ ರಾಜ್ಯ ತಂಡ, ಕಳೆದ ಆವೃತ್ತಿಯಲ್ಲಿ ಕ್ವಾರ್ಟರ್ಫೈನಲ್ನಲ್ಲಿ ಅಭಿಯಾನ ಕೊನೆಗೊಳಿಸಿತ್ತು. ತಂಡದಲ್ಲಿ ಈ ಬಾರಿ ಗಾಯಾಳು ದೇವದತ್ ಪಡಿಕ್ಕಲ್, ವಿಜಯ್ಕುಮಾರ್ ವೈಶಾಕ್ ಸ್ಥಾನ ಪಡೆದಿಲ್ಲ. ಅನುಭವಿ ಮನೀಶ್ ಪಾಂಡೆ, ಕೆ.ಗೌತಮ್, ಸಮರ್ಥ್, ಸುಚಿತ್, ಕಾವೇರಪ್ಪ ತಂಡದಲ್ಲಿದ್ದು, ಕರ್ನಾಟಕವನ್ನು ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೇರಿಸಲು ಎದುರು ನೋಡುತ್ತಿದ್ದಾರೆ.
ಕರ್ನಾಟಕ ತಂಡ ದಿಟ್ಟ ಆರಂಭ: ಇಲ್ಲಿನ ಕೋಲ್ಕತಾ ಕ್ರಿಕೆಟ್& ಫುಟ್ಬಾಲ್ ಸ್ಟೇಡಿಯಂನಲ್ಲಿ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿರುವ ಕರ್ನಾಟಕ ತಂಡವು ಉತ್ತಮ ಆರಂಭವನ್ನೇ ಪಡೆದಿದೆ. ಮೊದಲ ವಿಕೆಟ್ಗೆ ಕರ್ನಾಟಕದ ಆರಂಭಿಕ ಬ್ಯಾಟರ್ಗಳಾದ ರವಿಕುಮಾರ್ ಸಮರ್ಥ್ ಹಾಗೂ ಮಯಾಂಕ್ ಅಗರ್ವಾಲ್ ಜೋಡಿ ಮೊದಲ 5 ಓವರ್ ಅಂತ್ಯದ ವೇಳೆಗೆ 30 ರನ್ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟಿದೆ. ಮಯಾಂಕ್ ಅಗರ್ವಾಲ್ ಹಾಗೂ ರವಿಕುಮಾರ್ ಸಮರ್ಥ್ ತಲಾ 14 ರನ್ ಬಾರಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.
ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ತಂಡವು 'ಬಿ' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಇದೇ ಗುಂಪಿನಲ್ಲಿ ಮೇಘಾಲಯ, ಡೆಲ್ಲಿ, ವಿದರ್ಭ, ಜಾರ್ಖಂಡ್, ಅಸ್ಸಾಂ, ರಾಜಸ್ಥಾನ ಮತ್ತು ಸಿಕ್ಕಿಂ ತಂಡಗಳು ಸ್ಥಾನ ಪಡೆದಿವೆ. ಮಯಾಂಕ್ ಅಗರ್ವಾಲ್ ನೇತೃತ್ವದ ಕರ್ನಾಟಕ ತಂಡವು ಮೊದಲ ಪಂದ್ಯದಲ್ಲಿ ಮೇಘಾಲಯ ತಂಡವನ್ನು ಎದುರಿಸಲಿದೆ.
ಕರ್ನಾಟಕದ ವೇಳಾಪಟ್ಟಿ ಹೀಗಿದೆ ನೋಡಿ
ನವೆಂಬರ್ 12: ಕರ್ನಾಟಕ-ಮೇಘಾಲಯ
ನವೆಂಬರ್ 13: ಕರ್ನಾಟಕ-ವಿದರ್ಭ
ನವೆಂಬರ್ 15: ಕರ್ನಾಟಕ-ಜಾರ್ಖಂಡ್
ನವೆಂಬರ್ 17: ಕರ್ನಾಟಕ-ಡೆಲ್ಲಿ
ನವೆಂಬರ್ 19: ಕರ್ನಾಟಕ-ಅಸ್ಸಾಂ
ನವೆಂಬರ್ 21: ಕರ್ನಾಟಕ-ಸಿಕ್ಕಿಂ
ನವೆಂಬರ್ 23: ಕರ್ನಾಟಕ-ರಾಜಸ್ಥಾನ
ತಂಡಗಳು ಹೀಗಿವೆ ನೋಡಿ
ಕರ್ನಾಟಕ: ಮಯಾಂಕ್ ಅಗರ್ವಾಲ್(ನಾಯಕ), ರವಿಕುಮಾರ್ ಸಮರ್ಥ್, ಮನೀಶ್ ಪಾಂಡೆ, ಶರತ್ ಬಿ ಆರ್(ವಿಕೆಟ್ ಕೀಪರ್), ನಿಕಿನ್ ಜೋಶ್, ಕೃಷ್ಣಪ್ಪ ಗೌತಮ್, ಮನೋಜ್ ಭಂಡಾಜೆ, ವಾಸುಕಿ ಕೌಶಿಕ್, ಶ್ರೇಯಸ್ ಗೋಪಾಲ್, ರೋನಿತ್ ಮೋರೆ, ವಿದ್ವತ್ ಕಾವೇರಪ್ಪ.
ಮೇಘಾಲಯ: ಚಿರಾಗ ಕುರಾನ, ಪುನಿತ್ ಬಿಶ್ತ್(ವಿಕೆಟ್ ಕೀಪರ್), ಅಭಿಷೇಕ್ ಕುಮಾರ್, ಚೆಂಗ್ಕಮ್ ಸಂಗ್ಮಾ, ದಿಪ್ಪು ಸಂಗ್ಮಾ, ಲಾರಿ ಸಂಗ್ಮಾ, ಸೂರ್ಯ ರೈ, ಪ್ರಿಂಗ್ಸ್ಯಾಂಗ್ ಸಂಗ್ಮಾ, ರಾಜೇಶ್ ಬಿಷ್ಣೋಯಿ ಜೂನಿಯರ್, ಯೋಗೇಶ್ ತಿವಾರಿ, ವಾನ್ಲಾಂಬೊಕ್ ನೋಂಗ್ಕಲ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.