T20 World Cup Squad: ಇಂದು ರಾಷ್ಟ್ರೀಯ ಆಯ್ಕೆ ಸಮಿತಿ ಸಭೆ, ವಿಶ್ವಕಪ್‌ಗೆ ತಂಡ ನಿರ್ಧಾರ!

By Santosh NaikFirst Published Sep 12, 2022, 12:24 PM IST
Highlights

ರಾಷ್ಟ್ರೀಯ ಆಯ್ಕೆ ಸಮಿತಿ ಸೋಮವಾರ ಮಧ್ಯಾಹ್ನ ವರ್ಚುವಲ್‌ ಆಗಿ ಸಭೆ ಸೇರಲಿದ್ದು, ಮುಂದಿನ ತಿಂಗಳು ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ.
 

ಮುಂಬೈ (ಸೆ. 12):  ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬಹು ನಿರೀಕ್ಷಿತ T20 ವಿಶ್ವಕಪ್ 2022 ಗಾಗಿ ತಂಡವನ್ನು ಸೋಮವಾರ ಪ್ರಕಟಿಸುವ ಸಾಧ್ಯತೆಯಿದೆ. ಅಕ್ಟೋಬರ್ 16 ರಂದು ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿರುವ ಮೆಗಾ ಐಸಿಸಿ ಟೂರ್ನಿಗೆ 15 ಸದಸ್ಯರ ಅಂತಿಮ ತಂಡವನ್ನು ಪ್ರಕಟಿಸಬಹುದು ಎನ್ನಲಾಗಿದೆ. ರಾಷ್ಟ್ರೀಯ ಆಯ್ಕೆ ಸಮಿತಿಯು ಮಧ್ಯಾಹ್ನ ವರ್ಚುವಲ್‌ ಆಗಿ ಸಭೆ ಸೇರಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ನಾಯಕನಾಗಿ ರೋಹಿತ್‌ ಶರ್‌ಮ ಹಾಗೂ ಕೋಚ್‌ ಆಗಿ ರಾಹುಲ್‌ ದ್ರಾವಿಡ್‌ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್‌ಗೆ ಸೇರಿದಾಗಿನಿಂದಲೂ, ಭಿನ್ನ ಕ್ರಮಾಂಕಗಳಲ್ಲಿ ಪ್ರತಿಭಾನ್ವಿತ ಆಟಗಾರರನ್ನು ಪರೀಕ್ಷೆ ಮಾಡುತ್ತಿದೆ.  ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ತಂಡದ ಅಂತಿಮ ಗುರಿಯಾಗಿದೆ ಎಂದು ಭಾರತ ತಂಡದ ನಾಯಕ ರೋಹಿತ್‌ ಶರ್ಮ ಪ್ರತಿ ಬಾರಿ ಸುದ್ಧಿಗೋಷ್ಠಿಯ ವೇಳೆ ಹೇಳಿದ್ದಾರೆ. ಹಾಗಾಗಿ ವಿಶ್ವಕಪ್‌ಗೆ ಅಗತ್ಯವಿರುವ ಎಲ್ಲಾ ಆಟಗಾರರನ್ನು ವಿವಿಧ ಕ್ರಮಾಂಕಗಳಲ್ಲಿ ಅವಕಾಶ ನೀಡಿ ಪರೀಕ್ಷೆ ಮಾಡಲಾಗುತ್ತಿದೆ ಎಂದು ಹೇಳಿದ್ದರು. ಈ ನಡುವೆ ಸಾಮಾಜಿಕ ಮಾಧ್ಯಮದಲ್ಲಿ ಕೆಲ ಪತ್ರಕರ್ತರು, ಏಷ್ಯಾ ಕಪ್ 2022ರ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದ ಮೊಹಮ್ಮದ್ ಶಮಿ ಟೀಮ್‌ ಇಂಡಿಯಾಗೆ ಬರುವ ಸಾಧ್ಯತೆ ಇದ್ದು, ಟಿ20 ವಿಶ್ವಕಪ್‌ಗೆ ಅವರನ್ನು ಪರಿಗಣಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಮೂಲ ಆಧರಿಸಿ ಬರೆದುಕೊಂಡಿದ್ದಾರೆ. 

ಇತ್ತೀಚೆಗೆ ದುಬೈನಲ್ಲಿ ನಡೆದ ಏಷ್ಯಾಕಪ್‌ ಟಿ20 ಪಂದ್ಯದಲ್ಲಿ ಭಾರತ ನಿರೀಕ್ಷಿತ ಮಟ್ಟದ ಪ್ರದರ್ಶನ ತೋರಿರಲಿಲ್ಲ. ಸೂಪರ್‌-4 ಹಂತದಲ್ಲಿಯೇ ಭಾರತ ತಂಡ ನಿರ್ಗಮಿಸಿತ್ತು. ಇದರಿಂದಾಗಿ ಮುಂದಿನ ಟಿ20 ವಿಶ್ವಕಪ್‌ಗೆ 15 ಸದಸ್ಯರ ತಂಡ ಆಯ್ಕೆಗೆ ಸ್ಪಷ್ಟ ಚಿತ್ರಣ ಸಿಗಲಿದೆ. ತಂಡದ ಬೌಲಿಂಗ್‌ ವಿಭಾಗದ ಮೇಲೆ ಹೆಚ್ಚಿನ ಗಮನ ನೀಡಬೇಕಾಗಿದ್ದರೂ, ವಿರಾಟ್‌ ಕೊಹ್ಲಿ ಫಾರ್ಮ್‌ಗೆ ಮರಳಿರುವುದು ಇಡೀ ಏಷ್ಯಾಕಪ್‌ನಲ್ಲಿ ತಂಡಕ್ಕೆ ದೊಡ್ಡ ಪ್ಲಸ್‌ ಪಾಯಿಂಟ್‌ ಎನಿಸಿದೆ. 

8 ವರ್ಷಗಳ ಬಳಿಕ ಏಷ್ಯಾಕಪ್ ಗೆದ್ದ ಲಂಕಾಗೆ ಜೈ ಹೋ ಎಂದ ಗೌತಮ್ ಗಂಭೀರ್..!

ಪಾಕಿಸ್ತಾನ ಹಾಗೂ ಹಾಂಕಾಂಗ್‌ ವಿರುದ್ಧ ಸತತ ಎರಡು ಅರ್ಧಶತಕ ಬಾರಿಸಿದ್ದ ವಿರಾಟ್‌ ಕೊಹ್ಲಿ, ಅಫ್ಘಾನಿಸ್ತಾನ ವಿರುದ್ಧ ಸೂಪರ್‌-4 ಹಂತದ ಪಂದ್ಯದಲ್ಲಿ ಅಫ್ಘಾನಿಸ್ತಾನ 61 ಎಸೆತಗಳಲ್ಲಿ ಅಜೇಯ 122 ರನ್‌ ಬಾರಿಸಿದ್ದರು. ಇದು ವಿರಾಟ್‌ ಕೊಹ್ಲಿಯ ಮೊದಲ ಅಂತಾರಾಷ್ಟ್ರೀಯ ಟಿ20 ಶತಕ ಮಾತ್ರವಲ್ಲದೆ, ಒಟ್ಟಾರೆ 71ನೇ ಶತಕ ಎನಿಸಿತ್ತು. ಕ್ರಿಕ್‌ಬಜ್‌ ಕೂಡ ಈ ಕುರಿತಾಗಿ ವರದಿ ಮಾಡಿದ್ದು, ಜಸ್‌ಪ್ರೀತ್‌ ಬುಮ್ರಾ (Jasprit Bumrah) ಹಾಗೂ ಹರ್ಷಲ್‌ ಪಟೇಲ್‌, ಎನ್‌ಸಿಎಯಲ್ಲಿ ಎಂದಿನಂತೆ ಬೌಲಿಂಗ್‌ ನಡೆಸಿದ್ದು ಅವರ ಪುನಃಶ್ಚೇತನವನ್ನು ಪೂರ್ಣಗೊಳಿಸಿದ್ದಾರೆ. ಗಾಯದ ಕಾರಣದಿಂದಾಗಿ ಇವರಿಬ್ಬರೂ ಏಷ್ಯಾಕಪ್‌ ಟೂರ್ನಿಯಲ್ಲಿ ಭಾಗಿಯಾಗಿರಲಿಲ್ಲ. ಹರ್ಷಲ್‌ ಪಟೇಲ್‌ (Harshal Patel) ಸೈಡ್‌ ಸ್ಟ್ರೇನ್‌ಗೆ ತುತ್ತಾಗಿದ್ದರೆ, ಜಸ್‌ಪ್ರೀತ್‌ ಬುಮ್ರಾ, ಬೆನ್ನು ನೋವಿನ ಕಾರಣದಿಂದಾಗಿ ಕಳೆದ ಜುಲೈನಿಂದಲೂ ಕ್ರಿಕೆಟ್‌ ಮೈದಾನದಿಂದ ಹೊರಗಿದ್ದಾರೆ.

Asia Cup 2022: ಪಾಕಿಸ್ತಾನಕ್ಕೆ ಸ್ಪಿನ್‌ ಬಲೆ, ಏಷ್ಯಾಕಪ್‌ಗೆ ಶ್ರೀಲಂಕಾ ದೊರೆ!

ಇಬ್ಬರೂ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ (Bengaluru National Cricket Academy) ಪುನಃಶ್ಚೇತನ ಶಿಬಿರದಲ್ಲಿ ಭಾಗಿಯಾಗಿದ್ದಾರೆ ಎಂದು ಬಿಸಿಸಿಐ (Bcci) ಘೋಷಣೆ ಮಾಡಿತ್ತು. ಈಗ ಇಬ್ಬರೂ ಫಿಟ್‌ನೆಸ್‌ ಪರೀಕ್ಷೆ (Fitness Test) ಪಾಸ್‌ ಆಗಿದ್ದು, ತಂಡಕ್ಕೆ ಮರಳಲಿದ್ದಾರೆ. ಇವರನ್ನು ತಂಡಕ್ಕೆ ಸೇರಿಸುವ ಸಲುವಾಗಿ ಇಬ್ಬರು ಆಟಗಾರರು ಸ್ಥಾನ ತೊರೆಯಬೇಕಾಗಿದೆ. ಆಲ್ ರೌಂಡರ್ ರವೀಂದ್ರ ಜಡೇಜಾ (Ravindra Jadeja) ಅವರು ಇತ್ತೀಚೆಗೆ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರಿಂದ ಸಂಪೂರ್ಣವಾಗಿ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದ್ದಾರೆ. ಅಕ್ಷರ್ ಪಟೇಲ್ ಇವರ ಸ್ಥಾನಕ್ಕೆ ನೇರ ಆಯ್ಕೆಯಾಗುವ ಸಾಧ್ಯತೆ ಇದೆ.

click me!