
ನವದೆಹಲಿ(ಮಾ.15): ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಬುಧವಾರ(ಮಾ.15) ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ. ಕಳೆದ ವರ್ಷದ ಕೊನೆಯಲ್ಲಿ ಗಂಭೀರ ಕಾರು ಅಪಘಾತಕ್ಕೊಳಗಾಗಿ ಚೇತರಿಸಿಕೊಳ್ಳುತ್ತಿರುವ ರಿಷಭ್ ಪಂತ್, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ಸ್ವಿಮ್ಮಿಂಗ್ ಪೂಲ್ನಲ್ಲಿಯೇ ವಾಕರ್ ಸಹಾಯದಿಂದ ಒಂದೊಂದೆ ಹಜ್ಜೆಹಾಕುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಪಘಾತದಿಂದ ಚೇತರಿಸಿಕೊಳ್ಳುತ್ತಿರುವ ರಿಷಭ್ ಪಂತ್, ಚೇತರಿಕೆಯ ಭಾಗವಾಗಿರುವ ಈ ನೀರಿನಲ್ಲಿ ನಡೆಯುವ ಪ್ರಕ್ರಿಯೆಯ ವಿಡಿಯೋದ ಜತೆಗೆ " ಈ ನಡುವೆ ನಡೆಯುತ್ತಿರುವ ಎಲ್ಲಾ ಸಣ್ಣ ಹಾಗೂ ದೊಡ್ಡ ಕ್ಷಣಗಳಿಗೆ ನಾನು ಋಣಿ" ಎಂದು ಬರೆದುಕೊಂಡಿದ್ದಾರೆ.
ಭಾರತ ಕ್ರಿಕೆಟ್ ತಂಡದ ತಾರಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಕಳೆದ ವರ್ಷದ ಕೊನೆಯಲ್ಲಿ ತಮ್ಮ ಮರ್ಸಿಡೀಸ್ ಕಾರನ್ನು ತಾವೇ ಚಾಲನೆ ಮಾಡುತ್ತಾ ದೆಹಲಿಯಿಂದ ಉತ್ತರಾಖಂಡದ ರೂರ್ಕೀ ಎಂಬಲ್ಲಿರುವ ತಮ್ಮ ನಿವಾಸಕ್ಕೆ ಹೊರಟಿದ್ದ ಸಂದರ್ಭದಲ್ಲಿ ಭೀಕರ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ಇದಾದ ಬಳಿಕ ಆಸ್ಪತ್ರೆಗೆ ದಾಖಲಾಗಿ ಸೂಕ್ತ ಚಿಕಿತ್ಸೆ ಪಡೆದುಕೊಂಡು ಮನೆಗೆ ಡಿಸ್ಚಾರ್ಜ್ ಆಗಿದ್ದಾರೆ. ತಾವು ಗುಣಮುಖರಾಗುತ್ತಿರುವ ಮಹತ್ವದ ಕ್ಷಣಗಳನ್ನು ರಿಷಭ್ ಪಂತ್ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸೂಕ್ತ ಮಾಹಿತಿ ನೀಡುತ್ತಲೇ ಬಂದಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ರಿಷಭ್ ಪಂತ್ ತಾವೊಬ್ಬರೇ ಚೆಸ್ ಆಡುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು.
ಕಳೆದ ತಿಂಗಳಷ್ಟೇ ಮೊಣಕಾಲಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ರಿಷಭ್ ಪಂತ್, ಮುಂಬರುವ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇದಷ್ಟೇ ಅಲ್ಲದೇ ಭಾರತದಲ್ಲೇ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಿಂದಲೂ ಹೊರಗುಳಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದರೆ ಸದ್ಯದ ಚೇತರಿಸಿಕೊಳ್ಳುತ್ತಿರುವ ರೀತಿಯನ್ನು ಗಮನಿಸಿದರೆ, ಆದಷ್ಟು ಬೇಗ ಭಾರತ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ.
ಯಾವ ಮಾಡೆಲ್ಗೂ ಕಮ್ಮಿಯಿಲ್ಲ ಎಬಿಡಿ ಪತ್ನಿ ಡೇನಿಯಲ್ಲೆ..! ತಾಜ್ ಮಹಲ್ ಎದುರು ಪ್ರೇಮ ನಿವೇದನೆ ಮಾಡಿದ್ದ ಡಿವಿಲಿಯರ್ಸ್
ನಾನು ರಿಷಭ್ ಪಂತ್ ಜತೆಗೆ ಒಂದೆರಡು ಬಾರಿ ಮಾತನಾಡಿದೆ. ನಿಸ್ಸಂಶಯವಾಗಿ ಅವರು ಗಾಯಗಳು ಮತ್ತು ಶಸ್ತ್ರಚಿಕಿತ್ಸೆಗಳ ಮೂಲಕ ಕಠಿಣ ಅವಧಿಯನ್ನು ಎದುರಿಸುತ್ತಿದ್ದಾರೆ. ಮತ್ತು ಈ ಹಿನ್ನೆಲೆ ನಾನು ಅವರಿಗೆ ಶುಭ ಹಾರೈಸುತ್ತೇನೆ. ಒಂದು ವರ್ಷದ ಸಮಯದಲ್ಲಿ ಅಥವಾ ಒಂದೆರಡು ವರ್ಷಗಳ ನಂತರ, ಅವರು ಮತ್ತೆ ಭಾರತ ತಂಡದ ಪರ ಆಡಲು ಬರುತ್ತಾರೆ ಎಂದು ಸೌರವ್ ಗಂಗೂಲಿ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಐಪಿಎಲ್ನಿಂದ ಹೊರಬಿದ್ರೂ ಪಂತ್ಗೆ ಸಿಗುತ್ತೆ ಬರೋಬ್ಬರಿ 16 ಕೋಟಿ ರುಪಾಯಿ!
ನವದೆಹಲಿ: ಕಾರು ಅಪಘಾತದಿಂದಾಗಿ ಮುಂಬೈನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಭಾರತೀಯ ಕ್ರಿಕೆಟಿಗ ರಿಷಭ್ ಪಂತ್ 16ನೇ ಆವೃತ್ತಿಯ ಐಪಿಎಲ್ಗೆ ಸಂಪೂರ್ಣ ಗೈರಾದರೂ ಅವರ 16 ಕೋಟಿ ರುಪಾಯಿ ವೇತನ ಪೂರ್ತಿ ಸಿಗಲಿದೆ. ಜೊತೆಗೆ ಬಿಸಿಸಿಐ ಕೇಂದ್ರ ಗುತ್ತಿಗೆಯ 5 ಕೋಟಿ ರುಪಾಯಿ ಮೊತ್ತವೂ ಪಂತ್ ಖಾತೆಗೆ ಜಮೆಯಾಗಲಿದೆ.
ಬಿಸಿಸಿಐ ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿರುವ ಎಲ್ಲಾ ಆಟಗಾರರು ವಿಮೆ ವ್ಯಾಪ್ತಿಗೆ ಒಳಪಟ್ಟಿರುತ್ತಾರೆ. ಗಾಯದ ಕಾರಣದಿಂದ ಐಪಿಎಲ್ಗೆ ಗೈರಾದರೂ ಅವರಿಗೆ ಫ್ರಾಂಚೈಸಿ ಘೋಷಿಸಿರುವ ಪೂರ್ತಿ ವೇತನ ಸಿಗಲಿದೆ. ಅದನ್ನು ವಿಮಾ ಕಂಪೆನಿಯೇ ಆಟಗಾರನಿಗೆ ಪಾವತಿಸಲಿದೆ. ಮತ್ತೊಂದೆಡೆ ಈಗಾಗಲೇ ಪಂತ್ರ ಚಿಕಿತ್ಸೆಯ ಸಂಪೂರ್ಣ ವೆಚ್ಚ ಭರಿಸುವುದಾಗಿ ತಿಳಿಸಿರುವ ಬಿಸಿಸಿಐ, ಕೇಂದ್ರ ಗುತ್ತಿಗೆಯ ಹಣವನ್ನೂ ಪಾವತಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.