
ಮುಂಬೈ(ಮೇ.29): 14ನೇ ಆವೃತ್ತಿಯ ಐಪಿಎಲ್ ಚಾಲ್ತಿಯಲ್ಲಿರುವಾಗಲೇ ಟೂರ್ನಿಯಿಂದ ಹೊರನಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಪಿನ್ನರ್ ಆರ್.ಅಶ್ವಿನ್, ತಾವು ಆ ನಿರ್ಧಾರವನ್ನು ತೆಗೆದುಕೊಂಡಿದ್ದೇಕೆ ಎಂದು ವಿವರಿಸಿದ್ದಾರೆ.
‘ಟೂರ್ನಿ ವೇಳೆ 8-9 ದಿನಗಳ ಕಾಲ ನಿದ್ದೆ ಮಾಡಲಾಗಲಿಲ್ಲ. ನನ್ನ ಕುಟುಂಬ ಸದಸ್ಯರು ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿದ್ದರು. ಅವರ ಆರೋಗ್ಯದ ಬಗ್ಗೆಯೇ ನನಗೆ ಚಿಂತೆಯಾಗಿತ್ತು. ಸರಿಯಾದ ನಿದ್ದೆ ಇಲ್ಲದೆ ಮೈದಾನಕ್ಕಿಳಿದು ಆಡಲು ಸಾಧ್ಯವಾಗುತ್ತಿಲ್ಲ. ಇದೇ ಕಾರಣದಿಂದಾಗಿ ನಾನು ಹೊರ ನಡೆದೆ. ಆ ಸಂದರ್ಭದಲ್ಲಿ ನಾನು ಮತ್ತೆ ಕ್ರಿಕೆಟ್ ಆಡುತ್ತೇನೋ ಇಲ್ಲವೋ ಎನ್ನುವ ಬಗ್ಗೆ ಸ್ಪಷ್ಟತೆ ಇರಲಿಲ್ಲ’ ಎಂದು ಅಶ್ವಿನ್ ಹೇಳಿದ್ದಾರೆ.
ನಾನು ಐಪಿಎಲ್ ತೊರೆದು ಮನೆಗೆ ಬಂದ ಬಳಿಕ ನಮ್ಮ ಕುಟುಂಬಸ್ಥರು ಒಬ್ಬಬ್ಬರಾಗಿಯೇ ಗುಣಮುಖರಾಗತೊಡಗಿದರು. ಹೀಗಾಗಿ ಮತ್ತೆ ಐಪಿಎಲ್ಗೆ ಮರಳಬೇಕು ಎಂದು ಯೋಚಿಸುತ್ತಿರುವಾಗಲೇ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಬಿಸಿಸಿಐ ಮುಂದೂಡಿತು ಎಂದು ಅನುಭವಿ ಆಫ್ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.
ಸದ್ಯ ರವಿಚಂದ್ರನ್ ಅಶ್ವಿನ್ ಇಂಗ್ಲೆಂಡ್ ಪ್ರವಾಸಕ್ಕೆ ಸಜ್ಜಾಗಿದ್ದು, ಮುಂಬೈನ ಹೋಟೆಲ್ನಲ್ಲಿ ಕಡ್ಡಾಯ ಕ್ವಾರಂಟೈನ್ಗೆ ಒಳಗಾಗಿದ್ದಾರೆ. 14 ದಿನಗಳ ಕ್ವಾರಂಟೈನ್ ಪೈಕಿ ಕೊನೆಯ 7 ದಿನಗಳ ಕಠಿಣ ಕ್ವಾರಂಟೈನ್ಗೆ ಟೀಂ ಇಂಡಿಯಾ ಕ್ರಿಕೆಟಿಗರು ಒಳಗಾಗಿದ್ದಾರೆ. ಈ ಕಠಿಣ ಕ್ವಾರಂಟೈನ್ನಲ್ಲಿ ಆಟಗಾರರು ತಮ್ಮ ಹೋಟೆಲ್ ಕೊಠಡಿಯಿಂದ ಹೊರಬರುವಂತಿಲ್ಲ.
ಐಪಿಎಲ್ ಭಾಗ-2ಕ್ಕೆ ಬಹುತೇಕ ವಿದೇಶಿ ಆಟಗಾರರ ಕೊರತೆ?
ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಜೂನ್ 02ರಂದು ಮುಂಬೈನಿಂದ ಇಂಗ್ಲೆಂಡ್ಗೆ ವಿಶೇಷ ವಿಮಾನದ ಮೂಲಕ ಪ್ರಯಾಣ ಬೆಳೆಸಲಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ಮೊದಲಿಗೆ ಭಾರತ ತಂಡವು ಜೂನ್ 18ರಿಂದ ಸೌಥಾಂಪ್ಟನ್ನಲ್ಲಿ ಆರಂಭವಾಗಲಿರುವ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಇದಾದ ಬಳಿಕ ಇಂಗ್ಲೆಂಡ್ ವಿರುದ್ದ ಭಾರತ ತಂಡವು 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
"
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.