
ನವದೆಹಲಿ(ಸೆ.09): ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ 15 ಆಟಗಾರರನ್ನೊಳಗೊಂಡ ಭಾರತೀಯ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡಲಾಗಿದೆ. ಸಾಕಷ್ಟು ಅಳೆದು-ತೂಗಿ ಸಮತೋಲಿತ ತಂಡವನ್ನು ಆಯ್ಕೆ ಮಾಡಲಾಗಿದೆ. ಇದೆಲ್ಲದರ ಜತೆಗೆ ಭಾರತಕ್ಕೆ ಮೊದಲ ಟಿ20 ವಿಶ್ವಕಪ್ ಗೆದ್ದುಕೊಟ್ಟ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಮೆಂಟರ್ ಹುದ್ದೆ ನೀಡಲಾಗಿದೆ.
ಟಿ20 ವಿಶ್ವಕಪ್ ಟೂರ್ನಿಗೆ 15 ಸದಸ್ಯರ ತಂಡದಲ್ಲಿ 6 ತಜ್ಞ ಬ್ಯಾಟ್ಸ್ಮನ್ಗಳಿದ್ದಾರೆ. ರೋಹಿತ್, ರಾಹುಲ್ ಆರಂಭಿಕರಾಗಿ ತಂಡದಲ್ಲಿದ್ದರೆ, ಮಧ್ಯಮ ಕ್ರಮಾಂಕದಲ್ಲಿ ಹಲವು ಆಯ್ಕೆಗಳಿವೆ. 3ನೇ ಕ್ರಮಾಂಕದಲ್ಲಿ ಕೊಹ್ಲಿ, 4ರಲ್ಲಿ ಸೂರ್ಯಕುಮಾರ್ ಆಡುವುದು ಬಹುತೇಕ ಖಚಿತ. 5ನೇ ಕ್ರಮಾಂಕದಲ್ಲಿ ರಿಷಭ್ ಪಂತ್ ಇಲ್ಲವೇ ಇಶಾನ್ ಕಿಶನ್ ಆಡಬಹುದು. ಪಂತ್ ಮೊದಲ ಆಯ್ಕೆ. ಆಲ್ರೌಂಡರ್ಗಳಾಗಿ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಆಯ್ಕೆಯಾಗಿದ್ದಾರೆ.
ಟಿ20 ವಿಶ್ವಕಪ್ಗೆ ಬಲಿಷ್ಠ ಟೀಂ ಇಂಡಿಯಾ ಪ್ರಕಟ; ಎಂ.ಎಸ್. ಧೋನಿ ಮೆಂಟರ್!
ತಂಡದಲ್ಲಿ ಕೇವಲ ಮೂವರು ತಜ್ಞ ವೇಗಿಗಳು ಇದ್ದಾರೆ. ಬುಮ್ರಾ, ಭುವನೇಶ್ವರ್ ಹಾಗೂ ಶಮಿ ಈ ಮೂವರಲ್ಲಿ ಇಬ್ಬರು ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯಬಹುದು. ಹೀಗಾಗಿ, ಹಾರ್ದಿಕ್ ಬೌಲಿಂಗ್ನಲ್ಲೂ ಕೊಡುಗೆ ನೀಡಬೇಕಿದೆ. ಅಶ್ವಿನ್, ಜಡೇಜಾ, ಅಕ್ಷರ್, ರಾಹುಲ್ ಚಹರ್ ಹಾಗೂ ವರುಣ್ ಈ ಐವರಲ್ಲಿ ಇಬ್ಬರು ಇಲ್ಲವೇ ಮೂವರಿಗೆ ಆಡುವ ಹನ್ನೊಂದರಲ್ಲಿ ಸ್ಥಾನ ಸಿಗಬಹುದು. ದೀಪಕ್ ಚಹರ್, ಶಾರ್ದೂಲ್ ಠಾಕೂರ್ ಬ್ಯಾಟಿಂಗ್ನಲ್ಲೂ ತಂಡಕ್ಕೆ ನೆರವಾಗಬಲ್ಲರು. ಆದರೆ ಅಂತಿಮ 15ರಲ್ಲಿ ಅವರಿಗೆ ಸ್ಥಾನ ಸಿಕ್ಕಿಲ್ಲ. ಸೂರ್ಯಕುಮಾರ್, ಕಿಶನ್ಗೆ ಮಣೆ ಹಾಕಿರುವ ಕಾರಣ ಶ್ರೇಯಸ್ ಅಯ್ಯರ್ ಮೀಸಲು ಪಡೆ ಸೇರಿದ್ದಾರೆ.
ಐವರು ಸ್ಪಿನ್ನರ್ಗಳ ಆಯ್ಕೆ ಯಾಕೆ?
ಯುಎಇನಲ್ಲಿ ವಿಶ್ವಕಪ್ಗೂ ಮೊದಲು ಐಪಿಎಲ್ ನಡೆಯಲಿದೆ. ಹೀಗಾಗಿ ಎಷ್ಟೇ ಪ್ರಯತ್ನಿಸಿದರೂ ಪಿಚ್ಗಳು ಏರುಪೇರಾಗುವುದನ್ನು ತಪ್ಪಿಸುವುದು ಕಷ್ಟ. ಪಿಚ್ಗಳು ನಿಧಾನಗತಿಯದ್ದಾಗಿರಲಿವೆ ಎನ್ನುವ ಲೆಕ್ಕಾಚಾರದ ಮೇಲೆ ಐವರು ಸ್ಪಿನ್ನರ್ಗಳನ್ನು ಆಯ್ಕೆ ಮಾಡಲಾಗಿದೆ. ಜೊತೆಗೆ ದುಬೈ ಹಾಗೂ ಅಬುಧಾಬಿಯ ಕ್ರೀಡಾಂಗಣಗಳು ದೊಡ್ಡವು. ಈ ಕ್ರೀಡಾಂಗಣಗಳಲ್ಲಿ ಸ್ಪಿನ್ನರ್ಗಳ ಪಾತ್ರ ಪ್ರಮುಖವಾಗಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.