
ಕೋಲ್ಕತಾ: ಈ ಬಾರಿ ಟಿ20 ವಿಶ್ವಕಪ್ನ ನಿರ್ಣಾಯಕ ಪಂದ್ಯದಲ್ಲಿ ಭಾನುವಾರ ಭಾರತ ಹಾಗೂ ವೆಸ್ಟ್ಇಂಡೀಸ್ ಸೆಣಸಾಡಲಿದೆ. ಇದು ಉಭಯ ತಂಡಗಳಿಗೂ ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ವರ್ಚುವಲ್ ಕ್ವಾರ್ಟರ್ ಫೈನಲ್ ಎನಿಸಿಕೊಂಡಿದೆ. ಗೆದ್ದ ತಂಡ ಸೆಮಿಫೈನಲ್ ಪ್ರವೇಶಿಸಿದರೆ, ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ.
ಗುಂಪು ಹಂತದಲ್ಲಿ ಉಭಯ ತಂಡಗಳೂ ಅಜೇಯವಾಗಿದ್ದವು. ಆದರೆ ಸೂಪರ್-8 ಹಂತದಲ್ಲಿ ಈ ಎರಡು ತಂಡಗಳೂ ಕಳೆದ ಬಾರಿ ರನ್ನರ್-ಅಪ್ ದಕ್ಷಿಣ ಆಫ್ರಿಕಾ ವಿರುದ್ಧ ಸೋತಿದ್ದರೆ, ಜಿಂಬಾಬ್ವೆ ವಿರುದ್ಧ ಗೆಲುವು ಸಾಧಿಸಿದೆ. ಹೀಗಾಗಿ 2 ತಂಡಗಳೂ ತಲಾ 2 ಅಂಕ ಸಂಪಾದಿಸಿವೆ. ನೆಟ್ ರನ್ರೇಟ್ನಲ್ಲಿ ವಿಂಡೀಸ್ (+1.791) ಮುಂದಿದ್ದರೆ, ಭಾರತ(-0.100) ನಂತರದ ಸ್ಥಾನದಲ್ಲಿದೆ. ಹೀಗಾಗಿ ಭಾನುವಾರದ ಪಂದ್ಯ ರದ್ದುಗೊಂಡರೆ ನೆಟ್ ರನ್ರೇಟ್ ಆಧಾರದಲ್ಲಿ ಭಾರತ ಹೊರ ಬೀಳಲಿದ್ದು, ವಿಂಡೀಸ್ ಸೆಮಿಫೈನಲ್ ತಲುಪಲಿದೆ.
ಈ ಪಂದ್ಯದಲ್ಲಿ ರನ್ ಮಳೆ ಹರಿಯುವ ನಿರೀಕ್ಷೆಯಿದೆ. ಟೂರ್ನಿಯ ಆರಂಭದಲ್ಲಿ ಇಟಲಿ ವಿರುದ್ಧ ಸ್ಕಾಟ್ಲೆಂಡ್ 200 ರನ್ ಗಳಿಸಿದ್ದ ಅದೇ ಪಿಚ್ನಲ್ಲಿ ಭಾರತದ ಪಂದ್ಯ ನಿಗದಿಯಾಗಿದೆ. ಈ ಪಿಚ್ ಸ್ಪಿನ್ನರ್ಗಳಿಗೂ ನೆರವು ನೀಡುವ ನಿರೀಕ್ಷೆಯಿದೆ. ಉಭಯ ತಂಡಗಳಲ್ಲೂ ಸ್ಫೋಟಕ ಆಟಗಾರರೇ ಹೆಚ್ಚಿರುವುದರಿಂದ ದೊಡ್ಡ ಮೊತ್ತ ದಾಖಲಾಗಬಹುದು.
ಭಾರತ ಟೂರ್ನಿಯಲ್ಲಿ ಬ್ಯಾಟಿಂಗ್ನಲ್ಲಿ ವಿಫಲವಾಗಿದ್ದೇ ಹೆಚ್ಚು. ಆದರೆ ಜಿಂಬಾಬ್ವೆ ವಿರುದ್ಧ ತಂಡದಲ್ಲಿ ಬದಲಾವಣೆ ಮಾಡಿ ಸಂಜು ಸ್ಯಾಮ್ಸನ್ರನ್ನು ಆರಂಭಿಕನಾಗಿ ಆಡಿಸಿದ್ದು ಫಲ ನೀಡಿತ್ತು. ಹೀಗಾಗಿ ಅವರನ್ನು ವಿಂಡೀಸ್ ವಿರುದ್ಧವೂ ಆಡಿಸಿ, ಅದೇ ಬ್ಯಾಟಿಂಗ್ ಕ್ರಮಾಂಕವನ್ನು ಮುಂದುವರಿಸುವ ಸಾಧ್ಯತೆಯಿದೆ. ಆದರೆ ತಂಡದ ಬೌಲರ್ಗಳ ಬಗ್ಗೆ ಭಾರತ ಚಿಂತೆಯಲ್ಲಿದೆ. ವಿಶ್ವ ನಂ.1 ಬೌಲರ್ ವರುಣ್ ಚಕ್ರವರ್ತಿ ದುಬಾರಿಯಾಗುತ್ತಿದ್ದಾರೆ. ಅವರನ್ನು ಈ ಪಂದ್ಯದಲ್ಲಿ ಆಡಿಸಲಾಗುತ್ತದೆಯೋ ಅಥವಾ ಕುಲ್ದೀಪ್ಗೆ ಅವಕಾಶ ನೀಡಲಾಗುತ್ತದೆಯೋ ಎಂಬ ಕುತೂಹಲವಿದೆ. ಜಿಂಬಾಬ್ವೆ ವಿರುದ್ಧ ಶಿವಂ ದುಬೆ 2 ಓವರ್ಗಳಲ್ಲಿ 46 ರನ್ ಬಿಟ್ಟುಕೊಟ್ಟಿದ್ದು ತಂಡದ ಭೀತಿ ಹೆಚ್ಚಿಸಿದೆ.
ಮತ್ತೊಂದೆಡೆ ವಿಂಡೀಸ್ ತಂಡ ಸ್ಫೋಟಕ ಆಟಗಾರರನ್ನು ಒಳಗೊಂಡಿದೆ. ಹೆಟ್ಮೇಯರ್, ರೊಮಾರಿಯೊ ಶೆಫರ್ಡ್, ರುಥರ್ಫೋರ್ಡ್, ರೋವ್ಮನ್ ಪೊವೆಲ್ ಸೇರಿ ಪ್ರಮುಖರು ತಂಡದಲ್ಲಿದ್ದಾರೆ. ಅವರನ್ನು ಕಟ್ಟಿಹಾಕಲು ಭಾರತೀಯ ಬೌಲರ್ಗಳು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದ್ದಾರೆ ಎಂಬುದರ ಮೇಲೆ ಪಂದ್ಯದ ಫಲಿತಾಂಶ ನಿರ್ಧಾರವಾಗಬಹುದು.
ಪಂದ್ಯ: ಸಂಜೆ 7 ಗಂಟೆಗೆ
ವಿಂಡೀಸ್ ತಂಡ 1983ರ ಬಳಿಕ ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಭಾರತ ವಿರುದ್ಧ ಯಾವುದೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಗೆದ್ದಿಲ್ಲ. 2 ಪಂದ್ಯ ಡ್ರಾಗೊಂಡಿದ್ದರೆ, 4 ಟಿ20 ಸೇರಿ 9 ಪಂದ್ಯದಲ್ಲಿ ಭಾರತ ಗೆದ್ದಿದೆ.
ದ.ಆಫ್ರಿಕಾ vs ಜಿಂಬಾಬ್ವೆ
ನವದೆಹಲಿ: ಭಾನುವಾರ ಮೊದಲ ಪಂದ್ಯದಲ್ಲಿ ದ.ಆಫ್ರಿಕಾ-ಜಿಂಬಾಬ್ವೆ ಸೆಣಸಾಡಲಿದೆ. ದ.ಆಫ್ರಿಕಾ 2ರಲ್ಲೂ ಗೆದ್ದು ಸೆಮಿಫೈನಲ್ ತಲುಪಿದ್ದರೆ, ಜಿಂಬಾಬ್ವೆ 2ರಲ್ಲೂ ಸೋತರೆ ಸೆಮೀಸ್ ಕನಸು ಭಗ್ನಗೊಳಿಸಿದೆ. ಹೀಗಾಗಿ ಈ ಪಂದ್ಯ ಕೇವಲ ಔಪಚಾರಿಕ ಎನಿಸಿಕೊಂಡಿದೆ.
ಪಂದ್ಯ: ಮಧ್ಯಾಹ್ನ 3 ಗಂಟೆಗೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.