
ಮುಂಬೈ: ಟಿ20 ವಿಶ್ವಕಪ್ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲು ಭಾರತ ಸಜ್ಜಾಗುತ್ತಿದೆ. ಆದರೆ, ಟೀಂ ಇಂಡಿಯಾ ಮತ್ತು ಅಭಿಮಾನಿಗಳಿಗೆ ಒಂದು ದೊಡ್ಡ ತಲೆನೋವು ಶುರುವಾಗಿದೆ. ಅದುವೇ, ಇಂಗ್ಲೆಂಡ್ ವಿರುದ್ಧ ಓಪನರ್ ಸಂಜು ಸ್ಯಾಮ್ಸನ್ ಅವರ ಕಳಪೆ ದಾಖಲೆ. ವೆಸ್ಟ್ ಇಂಡೀಸ್ ವಿರುದ್ಧದ ಕಳೆದ ಪಂದ್ಯದಲ್ಲಿ ಸಂಜು 97 ರನ್ ಸಿಡಿಸಿ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಆದರೂ, ವಾಂಖೆಡೆ ಸ್ಟೇಡಿಯಂನಲ್ಲಿ ಇಂಗ್ಲಿಷ್ ವೇಗಿ ಜೋಫ್ರಾ ಆರ್ಚರ್ ಅವರ ಬೌಲಿಂಗ್ ದಾಳಿಯನ್ನು ಸಂಜು ಹೇಗೆ ಎದುರಿಸುತ್ತಾರೆ ಎನ್ನುವುದೇ ದೊಡ್ಡ ಸವಾಲಾಗಿದೆ.
ಸಂಜು ಸ್ಯಾಮ್ಸನ್ ಅವರನ್ನು ಅತಿ ಹೆಚ್ಚು ಕಾಡಿರುವ ಬೌಲರ್ಗಳಲ್ಲಿ ಇಂಗ್ಲೆಂಡ್ನ ವೇಗದ ಬೌಲರ್ ಜೋಫ್ರಾ ಆರ್ಚರ್ ಕೂಡ ಒಬ್ಬರು. ಅಂಕಿಅಂಶಗಳನ್ನು ನೋಡಿದರೆ, ಆರ್ಚರ್ ಸಂಜು ಮೇಲೆ ಸ್ಪಷ್ಟ ಹಿಡಿತ ಸಾಧಿಸಿದ್ದಾರೆ. ಆರ್ಚರ್ ಎದುರು ಆಡಿದ ಐದು ಇನ್ನಿಂಗ್ಸ್ಗಳಲ್ಲಿ ಸಂಜು ಮೂರು ಬಾರಿ ಔಟಾಗಿದ್ದಾರೆ. ಆರ್ಚರ್ ವಿರುದ್ಧ ಸಂಜು ಅವರ ಬ್ಯಾಟಿಂಗ್ ಸರಾಸರಿ ಕೇವಲ 8.33. ಆರ್ಚರ್ ಎಸೆದ 23 ಎಸೆತಗಳ ಪೈಕಿ 13 ಎಸೆತಗಳಲ್ಲಿ ಸಂಜು ಒಂದೂ ರನ್ ಗಳಿಸಲು ಸಾಧ್ಯವಾಗಿಲ್ಲ.
ವಾಂಖೆಡೆ ಪಿಚ್ನಲ್ಲಿ ಸಿಗುವ ಹೆಚ್ಚುವರಿ ಬೌನ್ಸ್ ಬಳಸಿಕೊಂಡು ಶಾರ್ಟ್ ಬಾಲ್ಗಳ ಮೂಲಕ ಸಂಜು ಅವರನ್ನು ಔಟ್ ಮಾಡಲು ಇಂಗ್ಲೆಂಡ್ ತಂಡ ಪ್ಲಾನ್ ಮಾಡಿದೆ. ಇದೇ ರೀತಿ, ಸ್ಯಾಮ್ ಕರನ್ ಕೂಡ ಐಪಿಎಲ್ನಲ್ಲಿ ಸಂಜು ಅವರನ್ನು ಎರಡು ಬಾರಿ ಔಟ್ ಮಾಡಿದ್ದರು. ಬೇರೆ ತಂಡಗಳ ವಿರುದ್ಧ ಉತ್ತಮವಾಗಿ ಆಡಿದರೂ, ಇಂಗ್ಲೆಂಡ್ ವಿರುದ್ಧ ಸಂಜು ಬ್ಯಾಟಿಂಗ್ ರೆಕಾರ್ಡ್ ಅಷ್ಟೇನೂ ಚೆನ್ನಾಗಿಲ್ಲ. ಐದು ಇನ್ನಿಂಗ್ಸ್ಗಳಿಂದ ಅವರು ಗಳಿಸಿದ್ದು ಕೇವಲ 51 ರನ್. ಕಳೆದ ವರ್ಷ ಇಂಗ್ಲೆಂಡ್ ವಿರುದ್ಧ ನಡೆದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಸಂಜು 26, 5, 3, 1, ಮತ್ತು 16 ರನ್ ಗಳಿಸಿದ್ದರು. ಇಂಗ್ಲೆಂಡ್ ವಿರುದ್ಧ ಸಂಜು ಅವರ ಬ್ಯಾಟಿಂಗ್ ಸರಾಸರಿ 10.20 ಮತ್ತು ಸ್ಟ್ರೈಕ್ ರೇಟ್ 118.60 ಮಾತ್ರ.
ಸಂಜು ಅವರ ಶಾರ್ಟ್ ಬಾಲ್ ದೌರ್ಬಲ್ಯವನ್ನು ಗಮನದಲ್ಲಿಟ್ಟುಕೊಂಡು, ಇಂಗ್ಲೆಂಡ್ ತಂಡಕ್ಕೆ ಹೆಚ್ಚುವರಿ ವೇಗಿಯನ್ನು ಸೇರಿಸಿಕೊಳ್ಳುವ ಬಗ್ಗೆ ಯೋಚಿಸುತ್ತಿದೆ. ವರದಿಗಳ ಪ್ರಕಾರ, ಜೋಶ್ ಟಂಗ್ ಅವರು ತಂಡಕ್ಕೆ ಪದಾರ್ಪಣೆ ಮಾಡುವ ಸಾಧ್ಯತೆಯಿದೆ. ಈ ಹಿಂದೆ ವೇಗಿಗಳಾದ ಸಾಕೀಬ್ ಮಹಮೂದ್ ಮತ್ತು ಮಾರ್ಕ್ ವುಡ್ ಕೂಡ ಶಾರ್ಟ್ ಬಾಲ್ಗಳ ಮೂಲಕ ಸಂಜು ವಿಕೆಟ್ ಪಡೆದಿದ್ದರು.
ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ವಿರುದ್ಧವೂ ಸಂಜು ಅವರ ಸರಾಸರಿ 15ಕ್ಕಿಂತ ಕಡಿಮೆಯಿದೆ. ಆದರೆ, ವೆಸ್ಟ್ ಇಂಡೀಸ್ ವಿರುದ್ಧ ತೋರಿದ ಭರ್ಜರಿ ಫಾರ್ಮ್ ಅನ್ನು ಇಂಗ್ಲೆಂಡ್ ವಿರುದ್ಧವೂ ಮುಂದುವರಿಸುತ್ತಾರೆ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ಕೋಲ್ಕತ್ತಾದಲ್ಲಿ ಕಂಡ ಆ ಹೋರಾಟದ ಆಟವನ್ನು ವಾಂಖೆಡೆಯಲ್ಲೂ ಸಂಜು ಪುನರಾವರ್ತಿಸಿದರೆ, ಭಾರತ ಫೈನಲ್ಗೆ ಹೋಗುವ ದಾರಿ ಸುಲಭವಾಗಲಿದೆ.
ಸಂಜು ನೆಚ್ಚಿಕೊಂಡಿರುವ ಟೀಂ ಇಂಡಿಯಾ:
ಸೂಪರ್-8 ಹಂತದ ವೆಸ್ಟ್ ಇಂಡೀಸ್ ಎದುರಿನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗೆಲ್ಲಲು 196 ರನ್ಗಳ ಕಠಿಣ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಆರಂಭಿಕ ಆಘಾತ ಅನುಭವಿಸಿತ್ತು. ಅಭಿಷೇಕ್ ಶರ್ಮಾ ಹಾಗೂ ಇಶಾನ್ ಕಿಶನ್ ತಲಾ 10 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರೆ, ನಾಯಕ ಸೂರ್ಯಕುಮಾರ್ ಯಾದವ್ ಕೂಡಾ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿರಲಿಲ್ಲ. ಇಂತಹ ಸಂದರ್ಭದಲ್ಲಿ ಪ್ರಬುದ್ದ ಬ್ಯಾಟಿಂಗ್ ನಡೆಸಿದ ಸಂಜು ಸ್ಯಾಮ್ಸನ್ ಕೇವಲ 50 ಎಸೆತಗಳಲ್ಲಿ ಅಜೇಯ 97 ರನ್ ಸಿಡಿಸುವ ಮೂಲಕ ಇನ್ನೂ 4 ಎಸೆತ ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಇದೀಗ ಸೆಮಿಫೈನಲ್ನಲ್ಲೂ ಸಂಜು ಅದೇ ಫಾರ್ಮ್ ಮುಂದುವರೆಸಲಿ ಎನ್ನುವುದು ಟೀಂ ಇಂಡಿಯಾ ಅಭಿಮಾನಿಗಳ ಹಾರೈಕೆಯಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.