
ಮುಂಬೈ: ಅಜೇಯರಾಗಿ ಮುನ್ನಡೆದಿದ್ದ ಭಾರತ, ಅಂತಿಮ ಹಂತದಲ್ಲಿ ಸೋತ ಆ ದಿನ, 2023ರ ನವೆಂಬರ್ 19. ದೇಶದ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯ ಹೃದಯ ಒಡೆದ ದಿನ. ಹೆಚ್ಚಿನವರು ಈ ದಿನವನ್ನು ಮರೆತಿರಬಹುದು. ಆದರೆ ಹಿಟ್ಮ್ಯಾನ್ ರೋಹಿತ್ ಶರ್ಮಾಗೆ ತಮ್ಮ ಕ್ರಿಕೆಟ್ ವೃತ್ತಿಜೀವನವನ್ನೇ ಕೊನೆಗೊಳಿಸಲು ಯೋಚಿಸಿದ ದಿನವಾಗಿತ್ತು ಅದು. 2023ರ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ನೋವು ಇನ್ನೂ ನನ್ನನ್ನು ಬಿಟ್ಟು ಹೋಗಿಲ್ಲ ಎಂದು ಅವರು ಬಹಿರಂಗಪಡಿಸಿದ್ದಾರೆ.
ಮಾಸ್ಟರ್ಸ್ ಯೂನಿಯನ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದಾಗ ರೋಹಿತ್ ಶರ್ಮಾ ಈ ವಿಷಯವನ್ನು ಹೇಳಿದರು. 2023ರ ವಿಶ್ವಕಪ್ ಫೈನಲ್ ನಂತರ ಏನೂ ಉಳಿದಿಲ್ಲ ಎಂದು ನನಗೆ ಅನಿಸಿತು. ನಾನು ಸಂಪೂರ್ಣವಾಗಿ ನಿರಾಶನಾಗಿದ್ದೆ. ಆದರೆ ಕ್ರಿಕೆಟ್ ಅನ್ನು ಸುಲಭವಾಗಿ ಬಿಡಲು ಸಾಧ್ಯವಿಲ್ಲ ಎಂದು ಅರಿತುಕೊಳ್ಳಲು ನನಗೆ ಸಮಯ ಹಿಡಿಯಿತು. ನಿಧಾನವಾಗಿ ನಾನು ನನ್ನ ಶಕ್ತಿಯನ್ನು ಮರಳಿ ಪಡೆದು ಮೈದಾನದಲ್ಲಿ ಸಕ್ರಿಯನಾದೆ. ಅಂದು ಎಲ್ಲರೂ ನಿರಾಶರಾಗಿದ್ದರು. ಆಸೀಸ್ ವಿರುದ್ಧದ ಫೈನಲ್ನಲ್ಲಿ ಏನಾಯಿತು ಎಂಬುದನ್ನು ನಂಬಲು ನಮಗೆ ಸಾಧ್ಯವಾಗಲಿಲ್ಲ. 2022ರಲ್ಲಿ ನಾನು ನಾಯಕತ್ವ ವಹಿಸಿಕೊಂಡ ನಂತರ, ವಿಶ್ವಕಪ್ ಗೆಲ್ಲುವುದೇ ನನ್ನ ಏಕೈಕ ಗುರಿಯಾಗಿತ್ತು, ಅದು ಟಿ20 ವಿಶ್ವಕಪ್ ಆಗಿರಲಿ ಅಥವಾ 2023ರ ವಿಶ್ವಕಪ್ ಆಗಿರಲಿ. ಅದು ಆಗದಿದ್ದಾಗ, ನಾನು ಸಂಪೂರ್ಣವಾಗಿ ಕುಸಿದುಹೋದೆ. ನನ್ನನ್ನು ನಾನು ಸರಿಪಡಿಸಿಕೊಳ್ಳಲು ಎರಡು ತಿಂಗಳು ಬೇಕಾಯಿತು ಎಂದು ರೋಹಿತ್ ಹೇಳಿದರು.
ಅಹಮದಾಬಾದ್ನಲ್ಲಿ ನಡೆದ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಹೀನಾಯ ಸೋಲಿನ ನಂತರ, ಮುಂದಿನ ವರ್ಷ ನಡೆದ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಭಾರತ ರೋಹಿತ್ ಶರ್ಮಾ ನಾಯಕತ್ವದಲ್ಲಿ ಗೆದ್ದುಕೊಂಡಿತು. ಒಂದು ವಿಷಯಕ್ಕಾಗಿ ತುಂಬಾ ಆಸೆಪಟ್ಟ ನಂತರ ಅದು ಸಿಗದಿದ್ದಾಗ ದೊಡ್ಡ ನಿರಾಶೆ ಉಂಟಾಗಬಹುದು. ಆದರೆ ಜೀವನ ಅಲ್ಲಿಗೆ ಮುಗಿಯುವುದಿಲ್ಲ. ನಿರಾಶೆಯನ್ನು ಹೇಗೆ ಎದುರಿಸುವುದು ಮತ್ತು ಹೊಸದಾಗಿ ಪ್ರಾರಂಭಿಸುವುದು ಹೇಗೆ ಎಂದು ನಾನು ಕಲಿತ ದೊಡ್ಡ ಪಾಠವಾಗಿತ್ತು. ಹಾಗಾಗಿ ಟಿ20 ವಿಶ್ವಕಪ್ನಲ್ಲಿ ಬೇರೇನೋ ಕಾದಿದೆ ಎಂದು ನನಗೆ ತಿಳಿದಿತ್ತು. ಟಿ20 ವಿಶ್ವಕಪ್ನಲ್ಲಿ ಬೇರೇನೋ ಆಗಲಿದೆ ಎಂದು ನನಗೆ ತಿಳಿದಿತ್ತು. ನಂತರ ಅದರ ಮೇಲೆ ಸಂಪೂರ್ಣ ಗಮನ ಹರಿಸಿದೆ. ಈಗ ಇದನ್ನು ಹೇಳುವುದು ತುಂಬಾ ಸುಲಭ, ಆದರೆ ಆ ಸಮಯದಲ್ಲಿ ಅದು ತುಂಬಾ ಕಷ್ಟಕರವಾಗಿತ್ತು ಎಂದು ಅವರು ಹೇಳಿದರು.
ನವೆಂಬರ್ 19ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆತಿಥೇಯ ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡಗಳು ಫೈನಲ್ನಲ್ಲಿ ಮುಖಾಮುಖಿಯಾಗಿದ್ದವು. ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಅಜೇಯವಾಗಿ ಫೈನಲ್ ಪ್ರವೇಶಿಸಿತ್ತು. ಆದರೆ ಫೈನಲ್ನಲ್ಲಿ ಆಸ್ಟ್ರೇಲಿಯಾದ ಮಾರಕ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ ಕೇವಲ 240 ರನ್ ಗಳಿಸಲಷ್ಟೇ ಶಕ್ತವಾಯಿತು. ಇನ್ನು ಸಾಧಾರಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು ಟ್ರ್ಯಾವಿಸ್ ಹೆಡ್ ಅವರು ಬಾರಿಸಿದ ಸ್ಪೋಟಕ ಶತಕದ ನೆರವಿನಿಂದ 6 ವಿಕೆಟ್ ಸುಲಭ ಜಯ ಸಾಧಿಸಿತು. ಈ ಮೂಲಕ 2011ರ ಬಳಿಕ ಏಕದಿನ ವಿಶ್ವಕಪ್ ಗೆಲ್ಲುವ ಭಾರತದ ಕನಸು ನುಚ್ಚುನೂರಾಗಿತ್ತು.
2024ರಲ್ಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಗೆಲ್ಲುತ್ತಿದ್ದಂತೆಯೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ರೋಹಿತ್ ಶರ್ಮಾ ವಿದಾಯ ಘೋಷಿಸಿದ್ದಾರೆ. ಇನ್ನು ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೂ ಮುನ್ನ ರೋಹಿತ್ ಶರ್ಮಾ ಟೆಸ್ಟ್ಗೂ ನಿವೃತ್ತಿ ಘೋಷಿಸಿದ್ದು, ಸದ್ಯ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಮಾತ್ರ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಹಿಟ್ಮ್ಯಾನ್ ಇದೀಗ 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಮೇಲೆ ಕಣ್ಣಿಟ್ಟಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.