
ಮಾರ್ಚ್(ಮಾ.29): ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಸದಾ ಹೊಸತನ ಹಾಗೂ ಹೊಸ ಹೊಸ ಅನುಭವ ನೀಡುವ ವಿಚಾರದಲ್ಲಿ ಸದಾ ಮುಂದಿರುತ್ತದೆ. ಇದೀಗ ಆರ್ಸಿಬಿ ಫ್ರಾಂಚೈಸಿಯು ಪ್ರಾಣಿ ಪ್ರಿಯ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದು, ತನ್ನ ತವರು ಮೈದಾನವಾದ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 'ಡಾಗ್ ಔಟ್' ನಿರ್ಮಾಣ ಮಾಡಿದೆ. ಈ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸ್ಟೇಡಿಯಂನಲ್ಲಿ ಡಾಗ್ ಔಟ್ ನಿರ್ಮಾಣ ಮಾಡಿದ ಮೊದಲ ಫ್ರಾಂಚೈಸಿ ಎನ್ನುವ ಹಿರಿಮೆಗೆ ಪಾತ್ರವಾಗಿದೆ.
ಈ 'ಡಾಗ್ ಔಟ್' ವಿಶೇಷವಾಗಿ ಸಾಕು ನಾಯಿಗಳಿಗಾಗಿಯೇ ಸ್ಟೇಡಿಯಂನಲ್ಲಿ ಮೀಸಲಿಟ್ಟ ಜಾಗವಾಗಿದೆ. ಇಲ್ಲಿ ತಮ್ಮ ಪ್ರೀತಿಯ ಸಾಕು ನಾಯಿಯೊಂದಿಗೆ ಐಪಿಎಲ್ ಪಂದ್ಯ ವೀಕ್ಷಿಸಲು ಅವಕಾಶ ಮಾಡಿಕೊಟ್ಟಿದೆ. ಈ ಡಾಗ್ ಔಟ್ ವಿಶೇಷವಾಗಿ ಸಾಕುನಾಯಿ ಪ್ರಿಯ ಕ್ರಿಕೆಟ್ ಅಭಿಮಾನಿಗಳನ್ನು ಗಮನದಲ್ಲಿಟ್ಟುಕೊಂಡು ಶಾಶ್ವತವಾಗಿ ನಿರ್ಮಾಣ ಮಾಡಲಾಗಿದ್ದು, ಈ ಜಾಗದಲ್ಲಿ ಎಲ್ಲಾ ರೀತಿಯ ನಾಯಿಗಳ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಡಾಗ್ ಔಟ್ ಪ್ರದೇಶದಲ್ಲಿ ಈ ಸಾಕು ನಾಯಿ ಪೋಷಕರಿಗೆ ವಿಶೇಷ ಆಸನದ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಸಾಕುನಾಯಿ ಪ್ರಿಯ ಅಭಿಮಾನಿಗಳಿಗೆ ವಿಶೇಷ ಅನುಭವ ಒದಗಿಸಲಿದೆ ಎಂದು ಆರ್ಸಿಬಿ ಫ್ರಾಂಚೈಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರಿನಲ್ಲಿಂದು IPL ಹಬ್ಬ; ಬದಲಾಗುತ್ತಾ RCB ಬ್ಯಾಟಿಂಗ್ ಆರ್ಡರ್?
ನಮ್ಮ ಮೈದಾನದಲ್ಲಿ ಡಾಗ್ ಔಟ್ ವಲಯವನ್ನು ಹೊಂದಲು ನಾವು ಸಂತೋಷಪಡುತ್ತೇವೆ, ಸಾಕು ನಾಯಿ ಪೋಷಕರಿಗೆ ಅವರ ಸಹಚರರೊಂದಿಗೆ ಮರೆಯಲಾಗದ ಕ್ಷಣಗಳನ್ನು ಹಂಚಿಕೊಳ್ಳುವ ಅವಕಾಶವನ್ನು ಒದಗಿಸುತ್ತೇವೆ. ಪಂದ್ಯಗಳ ವೇಳೆ ಸಾಕುಪ್ರಾಣಿಗಳನ್ನು ಹೊಂದಿರುವವರು ಮನೆಗೆ ಸೀಮಿತವಾಗುತ್ತಿದ್ದರು. ಹೀಗಾಗಿ ಆರ್ಸಿಬಿ ಆಟವನ್ನು ನೋಡುವ ಉತ್ಸಾಹವನ್ನು ಅನೇಕ ಅಭಿಮಾನಿಗಳು ಕಳೆದುಕೊಳ್ಳುತ್ತಿದ್ದರು. ಆದರೆ ಈಗ ಅವರು ಯಾವುದೇ ಅನಾನುಕೂಲತೆ ಇಲ್ಲದೆ ಕ್ರೀಡಾಂಗಣಕ್ಕೆ ಬಂದು ತಮ್ಮ ಸಾಕುಪ್ರಾಣಿಗಳೊಂದಿಗೆ ಕ್ರಿಕೆಟ್ ವೀಕ್ಷಿಸಬಹುದು ಎಂದು ಆರ್ಸಿಬಿಯ ಉಪಾಧ್ಯಕ್ಷ & ಮುಖ್ಯಸ್ಥ ರಾಜೇಶ್ ಮೆನನ್ ತಿಳಿಸಿದ್ದಾರೆ.
ಡಾಗ್ ಔಟ್ ಕ್ರಿಕೆಟ್ ಉತ್ಸಾಹಿಗಳಿಗೆ ಮತ್ತು ಶ್ವಾನ ಪ್ರಿಯರಿಗೆ ಸಮಾನವಾಗಿ ಸುರಕ್ಷಿತ ಸ್ಥಳವಾಗಿದೆ ಎಂದು ಫ್ರಾಂಚೈಸಿ ಖಚಿತಪಡಿಸಿದೆ. ಇದು ಎಲ್ಲೆಗಳನ್ನು ಮೀರಿದ ಅನುಭವವನ್ನು ನೀಡುತ್ತದೆ ಎಂದು ಆರ್ಸಿಬಿ ಫ್ರಾಂಚೈಸಿಯು ತಿಳಿಸಿದೆ.
ಇಂದು ಆರ್ಸಿಬಿಗೆ ಕೆಕೆಆರ್ ಸವಾಲು..!
ಚೊಚ್ಚಲ ಐಪಿಎಲ್ ಟ್ರೋಫಿ ಕನವರಿಕೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತವರಿನಲ್ಲಿಂದು ಕೋಲ್ಕತಾ ನೈಟ್ ರೈಡರ್ಸ್ ಸವಾಲು ಎದುರಿಸಲಿದೆ. ಎರಡು ಬಲಿಷ್ಠ ತಂಡಗಳ ನಡುವಿನ ಕಾದಾಟಕ್ಕೆ ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸಿದೆ
IPL 2024 ಬೆಂಗಳೂರಿನಲ್ಲಿಂದು RCB vs KKR ಹೈವೋಲ್ಟೇಜ್ ಫೈಟ್
ಉದ್ಘಾಟನಾ ಪಂದ್ಯದಲ್ಲಿ ಚೆನ್ನೈಗೆ ಶರಣಾಗಿದ್ದ ಆರ್ಸಿಬಿ, ತವರಿನಲ್ಲಿ ನಡೆದಿದ್ದ ಪಂಜಾಬ್ ವಿರುದ್ಧದ ಸೆಣಸಾಟದಲ್ಲಿ ರೋಚಕ ಗೆಲುವು ಸಾಧಿಸಿತ್ತು. ಆದರೆ ಬ್ಯಾಟರ್ಗಳ ಸ್ವರ್ಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಬ್ಯಾಟರ್ಗಳ ಪ್ರದರ್ಶನ ಹೇಳಿಕೊಳ್ಳುವಂತದ್ದೇನೂ ಆಗಿರಲಿಲ್ಲ.
2015ರ ಬಳಿಕ ಚಿನ್ನಸ್ವಾಮಿಯಲ್ಲಿ ಕೆಕೆಆರ್ ವಿರುದ್ಧ ಗೆದ್ದಿಲ್ಲ ಆರ್ಸಿಬಿ!
ಆರ್ಸಿಬಿ ತಂಡ ಕೆಕೆಆರ್ ವಿರುದ್ಧ 2015ರ ನಂತರ ಒಂದೂ ಪಂದ್ಯದಲ್ಲಿ ಗೆದ್ದಿಲ್ಲ. 2015ರ ಮುಖಾಮುಖಿಯಲ್ಲಿ ಆರ್ಸಿಬಿ ತಂಡ ಕೋಲ್ಕತಾವನ್ನು ಸೋಲಿಸಿತ್ತು. ಆ ಬಳಿಕ 2016, 2017, 2018, 2019 ಹಾಗೂ 2023ರಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲೂ ಕೆಕೆಆರ್ಗೆ ಆರ್ಸಿಬಿ ಶರಣಾಗಿದೆ. ಈ ಬಾರಿ ಸೋಲಿನ ಸರಪಳಿ ಕಳಚಳು ಕಾಯುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.