
ಲಖನೌ: ದಶಕಗಳ ಬಳಿಕ ರಣಜಿ ಟ್ರೋಫಿಯಲ್ಲಿ ಫೈನಲ್ಗೇರಲು ಕಾಯುತ್ತಿರುವ 8 ಬಾರಿ ಚಾಂಪಿಯನ್ ಕರ್ನಾಟಕ ತಂಡ, ಈ ಬಾರಿ ಸೆಮಿಫೈನಲ್ನಲ್ಲಿ ಉತ್ತರಾಖಂಡ ವಿರುದ್ಧ ಮೊದಲ ದಿನವೇ ಅಮೋಘ ಪ್ರದರ್ಶನ ನೀಡಿದೆ. ತಂಡ ಒಂದನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ನಷ್ಟದಲ್ಲಿ 355 ರನ್ ಕಲೆಹಾಕಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಉತ್ತರಾಖಂಡ ನಿರ್ಧಾರವನ್ನು ರಾಜ್ಯದ ಬ್ಯಾಟರ್ಗಳು ತಲೆಕೆಳಗಾಗುವಂತೆ ಮಾಡಿದರು. ಮಯಾಂಕ್ ಅಗರ್ವಾಲ್ 5 ರನ್ ಗಳಿಸಿ ಔಟಾದರೂ, 2ನೇ ವಿಕೆಟ್ಗೆ ಕ್ರೀಸ್ ಹಂಚಿಕೊಂಡ ಕೆ.ಎಲ್.ರಾಹುಲ್ ಹಾಗೂ ನಾಯಕ ದೇವದತ್ ಪಡಿಕ್ಕಲ್ 278 ರನ್ ಜೊತೆಯಾಟವಾಡಿದರು. ತಮ್ಮ ಅನುಭವ ಬಳಸಿ ಭರ್ಜರಿ ಶತಕ ಬಾರಿಸಿದ ರಾಹುಲ್, 211 ಎಸೆತಗಳಲ್ಲಿ 141 ರನ್ ಗಳಿಸಿ ನಿರ್ಗಮಿಸಿದರು. ಅವರದ್ದು ಇದು ಸತತ 2ನೇ ಸೆಂಚುರಿ. ಬಳಿಕ ಮುರಿಯದ 3ನೇ ವಿಕೆಟ್ಗೆ ಜೊತೆಯಾಗಿರುವ ದೇವದತ್-ಕರುಣ್ ನಾಯರ್, 59 ರನ್ ಸೇರಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 9ನೇ ಶತಕ ಪೂರೈಸಿರುವ ಪಡಿಕ್ಕಲ್ 148 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಕರುಣ್ ಔಟಾಗದೆ 37 ರನ್ ಗಳಿಸಿದ್ದಾರೆ.
ಸ್ಕೋರ್: ಕರ್ನಾಟಕ 355/2(ಮೊದಲ ದಿನದಂತ್ಯಕ್ಕೆ) (ದೇವದತ್ ಔಟಾಗದೆ 148, ರಾಹುಲ್ 141, ಆದಿತ್ಯ ರಾವತ್ 2-73)
ತಾರಾ ಕ್ರಿಕೆಟಿಗ ರಾಹುಲ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 25ನೇ ಶತಕ ಪೂರೈಸಿದರು. ಅವರು 41 ಅರ್ಧಶತಕ ಕೂಡಾ ಸಿಡಿಸಿದ್ದಾರೆ. ಭಾರತದ ಪರ 11 ಶತಕ ಬಾರಿಸಿರುವ ರಾಹುಲ್, ಕರ್ನಾಟಕ ಪರ 14 ಬಾರಿ ಮೂರಂಕಿ ಮೊತ್ತ ಕಲೆಹಾಕಿದ್ದಾರೆ.
ಕೋಲ್ಕತಾದಲ್ಲಿ ನಡೆಯುತ್ತಿರುವ ಮತ್ತೊಂದು ಸೆಮಿಫೈನಲ್ನಲ್ಲಿ ಜಮ್ಮು-ಕಾಶ್ಮೀರ ವಿರುದ್ಧ ಬೆಂಗಾಲ್ ಮೊದಲ ದಿನ 5 ವಿಕೆಟ್ಗೆ 249 ರನ್ ಕಲೆಹಾಕಿದೆ. ಸುದೀಪ್ ಕುಮಾರ್ ಘರಮಿ ಔಟಾಗದೆ 136 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ನಾಯಕ ಅಭಿಮನ್ಯು ಈಶ್ವರನ್ 49, ಶಾಬಾಜ್ 42 ರನ್ ಕೊಡುಗೆ ನೀಡಿದರು. ಆಕಿಬ್ ನಬಿ, ಸುನಿಲ್ ಕುಮಾರ್ ತಲಾ 2 ವಿಕೆಟ್ ಕಿತ್ತರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.