Ranji Trophy: 20 ಆಟಗಾರರನ್ನೊಳಗೊಂಡ ಬಲಿಷ್ಠ ಕರ್ನಾಟಕ ತಂಡ ಪ್ರಕಟ

Suvarna News   | others
Published : Feb 09, 2022, 09:15 AM IST
Ranji Trophy: 20 ಆಟಗಾರರನ್ನೊಳಗೊಂಡ ಬಲಿಷ್ಠ ಕರ್ನಾಟಕ ತಂಡ ಪ್ರಕಟ

ಸಾರಾಂಶ

* ರಣಜಿ ಟ್ರೋಫಿ ಟೂರ್ನಿಗೆ ಕರ್ನಾಟಕ ಕ್ರಿಕೆಟ್ ತಂಡ ಪ್ರಕಟ * ಮನೀಶ್‌ ಪಾಂಡೆ ರಾಜ್ಯ ತಂಡದ ನಾಯಕ, ಆರ್‌. ಸಮರ್ಥ್ ಉಪನಾಯಕ * ಚೆನ್ನೈನಲ್ಲಿ ಲೀಗ್ ಹಂತದ ಪಂದ್ಯಗಳನ್ನಾಡಲಿರುವ ಕರ್ನಾಟಕ ತಂಡ

ಬೆಂಗಳೂರು(ಫೆ.09): 2022ನೇ ಸಾಲಿನ ರಣಜಿ ಟ್ರೋಫಿಯ (Ranji Trophy 2022) ಮೊದಲ ಹಂತಕ್ಕೆ ಕರ್ನಾಟಕ ಕ್ರಿಕೆಟ್ ತಂಡ (Karnataka Cricket Team) ಪ್ರಕಟಗೊಂಡಿದ್ದು, ಈ ವರ್ಷವೂ ತಾರಾ ಬ್ಯಾಟರ್‌ ಮನೀಶ್‌ ಪಾಂಡೆ (Manish Pandey) ತಂಡವನ್ನು ಮುನ್ನಡೆಸಲಿದ್ದಾರೆ. 20 ಸದಸ್ಯರ ತಂಡದ ಉಪನಾಯಕನಾಗಿ ಆರ್‌.ಸಮರ್ಥ್ (R Samarth) ನೇಮಕಗೊಂಡಿದ್ದಾರೆ. ತಂಡದಲ್ಲಿ ಅನುಭವಿ ಆಟಗಾರರ ದಂಡೇ ಇದ್ದು, ರಾಜ್ಯ ತಂಡ 9ನೇ ಬಾರಿಗೆ ಟ್ರೋಫಿ ಗೆಲ್ಲುವ ಗುರಿಯೊಂದಿಗೆ ಕಣಕ್ಕಿಳಿಯಲಿದೆ. ಎಲೈಟ್‌ ‘ಸಿ’ ಗುಂಪಿನಲ್ಲಿರುವ ಕರ್ನಾಟಕ, ಫೆಬ್ರವರಿ 17ರಿಂದ ಮೊದಲ ಪಂದ್ಯದಲ್ಲಿ ರೈಲ್ವೇಸ್‌ ವಿರುದ್ಧ ಸೆಣಸಲಿದೆ. ಗುಂಪಿನಲ್ಲಿ ಜಮ್ಮು-ಕಾಶ್ಮೀರ ಹಾಗೂ ಪುದುಚೇರಿ ತಂಡಗಳು ಸಹ ಇವೆ.

‘ಸಿ’ ಗುಂಪಿನ ಪಂದ್ಯಗಳು ಚೆನ್ನೈನಲ್ಲಿ ನಡೆಯಲಿದ್ದು, ಫೆಬ್ರವರಿ 10ರಂದು ತಂಡ ಚೆನ್ನೈ ತಲುಪಲಿದೆ. 5 ದಿನಗಳ ಕ್ವಾರಂಟೈನ್‌ ವೇಳೆ 2ನೇ ಹಾಗೂ 5ನೇ ದಿನದಂದು ಕೋವಿಡ್‌ ಪರೀಕ್ಷೆ (COVID Test) ನಡೆಸಲಾಗುತ್ತದೆ. ಫೆಬ್ರವರಿ 15, 16ರಂದು ಅಭ್ಯಾಸ ನಡೆಸಲು ತಂಡಗಳಿಗೆ ಅವಕಾಶ ಸಿಗಲಿದೆ. ಪ್ರತಿ ತಂಡವು ಕನಿಷ್ಠ 20 ಆಟಗಾರರೊಂದಿಗೆ ನಿಗದಿತ ಸ್ಥಳಕ್ಕೆ ತೆರಳಬೇಕಿದ್ದು, ಗರಿಷ್ಠ 10 ಸಹಾಯಕ ಸಿಬ್ಬಂದಿಯನ್ನು ಕರೆದೊಯ್ಯಲು ಬಿಸಿಸಿಐ ಅನುಮತಿ ನೀಡಿದೆ. 

ಮೊದಲ ಹಂತದಲ್ಲಿ ಒಟ್ಟು 8 ಗುಂಪುಗಳಲ್ಲಿ ಅಗ್ರ 7 ಸ್ಥಾನ ಪಡೆಯುವ ತಂಡಗಳು ನೇರವಾಗಿ ಕ್ವಾರ್ಟರ್‌ ಫೈನಲ್‌ಗೇರಲಿದ್ದು, 8ನೇ ತಂಡವು ಪ್ಲೇಟ್‌ ಗುಂಪಿನ ವಿಜೇತರ ವಿರುದ್ಧ ಪ್ರಿ ಕ್ವಾರ್ಟರ್‌ನಲ್ಲಿ ಸೆಣಸಲಿದೆ. ಫೆಬ್ರವರಿ 10ರಿಂದ ಮಾರ್ಚ್‌ 15ರ ವರೆಗೂ ನಿಗದಿಯಾಗಿರುವ ಮೊದಲ ಹಂತದಲ್ಲಿ 38 ತಂಡಗಳು ಒಟ್ಟು 57 ಪಂದ್ಯಗಳಲ್ಲಿ ಆಡಲಿವೆ. ನಾಕೌಟ್‌ ಹಂತವು ಮೇ 30ರಿಂದ ಜೂನ್ 26ರ ವರೆಗೂ ನಡೆಯಲಿದ್ದು, ಈ ಹಂತದಲ್ಲಿ ಒಟ್ಟು 7 ಪಂದ್ಯಗಳು ನಡೆಯಲಿವೆ.

ಕಳೆದ ಕೆಲ ವರ್ಷಗಳಲ್ಲಿ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ ಹಾಗೂ ವಿಜಯ್ ಹಜಾರೆ ಏಕದಿನ ಟೂರ್ನಿಗಳಲ್ಲಿ ಕರ್ನಾಟಕ ತಂಡವು ಉತ್ತಮ ಪ್ರದರ್ಶನ ತೋರಿದ ಹೊರತಾಗಿಯೂ ಕಪ್‌ ಗೆಲ್ಲಲು ವಿಫಲವಾಗುತ್ತಾ ಬಂದಿದೆ. ಇದೀಗ ರೆಡ್‌ ಬಾಲ್ ಕ್ರಿಕೆಟ್‌ ಟೂರ್ನಿಗೆ ಸಾಕಷ್ಟು ತಾರಾ ಆಟಗಾರರೊಂದಿಗೆ ಸಜ್ಜಾಗಿರುವ ಕರ್ನಾಟಕ ತಂಡವು ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ.

ರಣಜಿ ಟ್ರೋಫಿ ಟೂರ್ನಿಯಿಂದ ಹೊರಗುಳಿಯಲು ತೀರ್ಮಾನಿಸಿದ ಹಾರ್ದಿಕ್ ಪಾಂಡ್ಯ..!

ಗುಂಡಪ್ಪ ವಿಶ್ವನಾಥ್ ಅವರಿಂದ ಶುಭಹಾರೈಕೆ: ಕರ್ನಾಟಕ ಕ್ರಿಕೆಟ್ ತಂಡವು ಚೆನ್ನೈಗೆ ತೆರಳುವ ಮುನ್ನ ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ಜಿ.ಆರ್. ವಿಶ್ವನಾಥ್ (GR Vishwanath) ಕೆಎಸ್‌ಸಿಎಗೆ ಭೇಟಿ ನೀಡಿ ತಮ್ಮ ಸ್ಪೂರ್ತಿಯ ಮಾತುಗಳ ಮೂಲಕ ಆಟಗಾರರನ್ನು ಹುರಿದುಂಬಿಸಿದರು. ಇದರ ಜತೆಗೆ ಆಟಗಾರರ ಕಿಟ್‌ಗಳಿಗೆ ತಮ್ಮ ಆಟೋಗ್ರಾಫ್ ಕೂಡಾ ನೀಡಿದರು.

72 ವರ್ಷದ ದಿಗ್ಗಜ ಕ್ರಿಕೆಟಿಗ ಜಿ.ಆರ್. ವಿಶ್ವನಾಥ್ ಇಂದಿಗೂ ಹಲವು ಯುವ ಕ್ರಿಕೆಟಿಗರ ಪಾಲಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ. ನಮ್ಮ ರಾಜ್ಯ ಕ್ರಿಕೆಟ್‌ನ ಇತಿಹಾಸ ಹಾಗೂ ಪರಂಪರೆ ಸಾಕಷ್ಟು ಶ್ರೀಮಂತವಾದದ್ದು. ಕೆಎಸ್‌ಸಿಎ ನನಗೆ ಎರಡನೇ ಮನೆಯಿದ್ದಂತೆ. ನಾನು ಆರಂಭದ ದಿನಗಳಲ್ಲಿ ಸಾಕಷ್ಟು ಕ್ರಿಕೆಟ್‌ ಅನ್ನು ಮೈಸೂರು ಪರ ಆ ಬಳಿಕ ಕರ್ನಾಟಕ ಪರ ಆಡಿದ್ದೇನೆ. ಇಲ್ಲಿಂದಲೇ ನಮ್ಮ ಕನಸಿನ ಪಯಣ ಆರಂಭವಾಗಿದ್ದು ಎಂದು ಜಿ.ಆರ್. ವಿಶ್ವನಾಥ್ ಹೇಳಿದ್ದಾರೆ.

ಕರ್ನಾಟಕ ತಂಡ:

ಮನೀಶ್‌ ಪಾಂಡೆ(ನಾಯಕ), ಆರ್‌.ಸಮರ್ಥ್‍, ಮಯಾಂಕ್ ಅಗರ್‌ವಾಲ್‌, ಕರುಣ್ ನಾಯರ್‌, ದೇವದತ್ ಪಡಿಕ್ಕಲ್‌, ಸಿದ್ಧಾರ್ಥ್ ಕೆ.ವಿ., ಡಿ.ನಿಶ್ಚಲ್‌, ಅನೀಶ್ವರ್‌ ಗೌತಮ್‌, ಶುಭಾಂಗ್‌, ಕೆ.ಗೌತಮ್‌, ಶ್ರೇಯಸ್‌ ಗೋಪಾಲ್‌, ಸುಚಿತ್‌, ಕಾರ್ಯಪ್ಪ, ಶರತ್‌ ಶ್ರೀನಿವಾಸ್‌, ಬಿ.ಆರ್‌.ಶರತ್‌, ಪ್ರಸಿದ್ಧ್ ಕೃಷ್ಣ, ರೋನಿತ್‌ ಮೋರೆ, ವೆಂಕಟೇಶ್‌, ವೈಶಾಖ್‌, ವಿದ್ಯಾಧರ್‌ ಪಾಟೀಲ್.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?