
ಹುಬ್ಬಳ್ಳಿ: 2025-26ನೇ ಸಾಲಿನ ರಣಜಿ ಟ್ರೋಫಿ ಫೈನಲ್ನಲ್ಲಿ ಪ್ರಶಸ್ತಿಗಾಗಿ ಮಾಜಿ ಚಾಂಪಿಯನ್ ಕರ್ನಾಟಕ ಹಾಗೂ ಜಮ್ಮು ಮತ್ತು ಕಾಶ್ಮೀರ ತಂಡಗಳು ಮುಖಾಮುಖಿಯಾಗಲಿವೆ. ಫೆಬ್ರವರಿ 24ರಿಂದ ಇಲ್ಲಿನ ಕೆಎಸ್ಸಿಎ ಕ್ರಿಕೆಟ್ ಮೈದಾನದಲ್ಲಿ ಪ್ರತಿಷ್ಠಿತ ರಣಜಿ ಟ್ರೋಫಿ ಫೈನಲ್ ಪಂದ್ಯವು ಆರಂಭವಾಗಲಿದೆ. ಈ ಪಂದ್ಯಕ್ಕೂ ಮುನ್ನ ಸುದ್ದಿಗಾರರ ಜತೆ ಮಾತನಾಡಿರುವ ಕರ್ನಾಟಕ ತಂಡದ ನಾಯಕ ದೇವದತ್ ಪಡಿಕ್ಕಲ್ ನಾವು ಕಪ್ ಗೆಲ್ಲಲು ಸರ್ವಪ್ರಯತ್ನ ಮಾಡುತ್ತೇವೆ ಎಂದು ಆತ್ಮವಿಶ್ವಾಸದಿಂದ ಹೇಳಿದ್ದಾರೆ.
ಮಂಗಳವಾರದಿಂದ ರಣಜಿ ಟ್ರೋಫಿ ಫೈನಲ್ ಪಂದ್ಯವು ಆರಂಭವಾಗಲಿದೆ. ಈ ಕುರಿತಂತೆ ಮಾತನಾಡಿರುವ ದೇವದತ್ ಪಡಿಕ್ಕಲ್, ಕಳೆದ ಎರಡು ಬಾರಿ ಈ ಮೈದಾನದಲ್ಲಿ ಆಡಿದಾಗ ಪ್ರೇಕ್ಷಕರು ಹಾಗೂ ಕ್ರೀಡಾಭಿಮಾನಿಗಳಿಂದ ಉತ್ತಮ ಸಪೋರ್ಟ್ ಸಿಕ್ಕಿದೆ. ಕರ್ನಾಟಕದಲ್ಲಿ ಪ್ರತಿಭಾವಂತ ಆಟಗಾರರಿಗೆ ಕೊರತೆಯಿಲ್ಲ. ಹುಬ್ಬಳ್ಳಿಯಲ್ಲಿ ಫೈನಲ್ ಪಂದ್ಯ ಆಡುತ್ತಿರುವುದರ ಬಗ್ಗೆ ಖುಷಿಯಿದೆ ಎಂದು ರಾಜ್ಯ ತಂಡದ ನಾಯಕ ಪಡಿಕ್ಕಲ್ ಹೇಳಿದ್ದಾರೆ.
ಇನ್ನು ಫೈನಲ್ ಪಂದ್ಯ ಎಂದಾಗ ಸಹಜವಾಗಿಯೇ ಒತ್ತಡವಿರುತ್ತದೆ. ಸೆಮಿಫೈನಲ್ ಪಂದ್ಯದಲ್ಲಿ ನಾವು ಸಾವಿರ ರನ್ ಗಳಿಸಿದ್ದು ಪಾಸಿಟಿವ್ ಫೀಲ್ ಇದೆ. ತವರಿನಲ್ಲಿ ಫೈನಲ್ ಪಂದ್ಯವನ್ನಾಡುತ್ತಿರುವುದರ ಬಗ್ಗೆ ಖುಷಿಯಿದೆ. ನಾವೆಲ್ಲರೂ ಫೈನಲ್ ಪಂದ್ಯವನ್ನಾಡಲು ರೆಡಿಯಾಗಿದ್ದೇವೆ ಎಂದು ದೇವದತ್ ಪಡಿಕ್ಕಲ್ ಹೇಳಿದ್ದಾರೆ.
ಹೌದು, ಈ ಬಾರಿಯ ರಣಜಿ ಟ್ರೋಫಿ ಫೈನಲ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿರುವ ಐವರು ಆಟಗಾರರು ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಭಾರತ ತಂಡಕ್ಕೆ ಆಡಿದ ಐವರು ಅನುಭವಿ ಆಟಗಾರರು ತಂಡದಲ್ಲಿದ್ದೇವೆ. ಅನುಭವಿ ಆಟಗಾರರು ತಂಡದಲ್ಲಿರುವುದರಿಂದ ತಂಡಕ್ಕೆ ಒಳ್ಳೆಯದಾಗಲಿದೆ. ನಾವು ಕಪ್ ಗೆಲ್ಲಲು ಸರ್ವ ಪ್ರಯತ್ನವನ್ನು ಮಾಡುತ್ತೇವೆ ಎಂದು ಪಡಿಕ್ಕಲ್ ಹೇಳಿದ್ದಾರೆ. ಅಂದಹಾಗೆ ಈ ಬಾರಿಯ ರಣಜಿ ಟ್ರೋಫಿ ಫೈನಲ್ನಲ್ಲಿ ಭಾರತ ತಂಡದ ಆಟಗಾರರಾದ ಕೆ ಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ಪ್ರಸಿದ್ದ್ ಕೃಷ್ಣ ಹಾಗೂ ದೇವದತ್ ಪಡಿಕ್ಕಲ್ ಕರ್ನಾಟಕ ತಂಡದಲ್ಲಿದ್ದಾರೆ.
ಇನ್ನು ಇದೇ ಮೊದಲ ಬಾರಿಗೆ ರಣಜಿ ಟ್ರೋಫಿ ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿರುವ ಜಮ್ಮು & ಕಾಶ್ಮೀರ ತಂಡವು ಚೊಚ್ಚಲ ಪ್ರಯತ್ನದಲ್ಲೇ ಕಪ್ ಗೆಲ್ಲುವ ವಿಶ್ವಾಸದಲ್ಲಿದೆ. ಎಲ್ಲರೂ ಆಟವನ್ನು ಎಂಜಾಯ್ ಮಾಡುತ್ತಿದ್ದೇವೆ. ನಾವೆಲ್ಲರೂ ರಿಲ್ಯಾಕ್ಸ್ ಆಗಿದ್ದೇವೆ. ನಮ್ಮ ಕ್ರಿಕೆಟ್ ಅನ್ನು ನಾವು ಆಡುತ್ತೇವೆ. ನಮ್ಮ ಆಟಗಾರರು ತುಂಬಾ ಆತ್ಮವಿಶ್ವಾಸದಲ್ಲಿದ್ದಾರೆ. ಮುಂಬೈ ವಿರುದ್ದ ಉತ್ತಮ ಆಟವಾಡಿ ಗೆದ್ದಿದ್ದೇವೆ. ಇಲ್ಲಿಯೂ ಒಳ್ಳೆಯ ಫಲಿತಾಂಶದ ನಿರೀಕ್ಷೆಯಲ್ಲಿದ್ದೇವೆ ಎಂದು ಜಮ್ಮುಕಾಶ್ಮಿರ ತಂಡದ ನಾಯಕ ಪಾರಸ್ ಡೋಗ್ರಾ ಹೇಳಿದ್ದಾರೆ.
ಕಳೆದೊಂದು ದಶಕದಿಂದ ಕರ್ನಾಟಕ ತಂಡವು ರಣಜಿ ಟ್ರೋಫಿ ಫೈನಲ್ಗೇರಲು ಪದೇ ಪದೇ ವಿಫಲವಾಗುತ್ತಾ ಬಂದಿತ್ತು. 2015-15ರಲ್ಲಿ ಕೊನೆಯ ಬಾರಿಗೆ ಫೈನಲ್ ಪ್ರವೇಶಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಕರ್ನಾಟಕ ತಂಡವು, ಇದಾದ ಬಳಿಕ ಒಮ್ಮೆಯೂ ರಣಜಿ ಟ್ರೋಫಿ ಫೈನಲ್ ಪ್ರವೇಶಿಸಿರಲಿಲ್ಲ. ಇದೀಗ ಟೂರ್ನಿಯುದ್ದಕ್ಕೂ ಅತ್ಯದ್ಭುತ ಹಾಗೂ ಅವಿಸ್ಮರಣೀಯ ಪ್ರದರ್ಶನ ತೋರುವ ಮೂಲಕ 11 ವರ್ಷಗಳ ಬಳಿಕ ರಣಜಿ ಟ್ರೋಫಿ ಫೈನಲ್ಗೆ ಕರ್ನಾಟಕ ಲಗ್ಗೆಯಿಟ್ಟಿದೆ.
ಮಯಾಂಕ್ ಅಗರ್ವಾಲ್, ಕೆ ಎಲ್ ರಾಹುಲ್, ಅನೀಶ್ ಕೆ.ವಿ, ದೇವದತ್ ಪಡಿಕ್ಕಲ್(ನಾಯಕ), ಕರುಣ್ ನಾಯರ್, ಆರ್ ಸ್ಮರಣ್, ಶ್ರೇಯಸ್ ಗೋಪಾಲ್, ಕೃತಿಕ್ ಕೃಷ್ಣ, ವಿದ್ವತ್ ಕಾವೇರಪ್ಪ, ವಿದ್ಯಾಧರ್ ಪಾಟೀಲ್, ಪ್ರಸಿದ್ದ್ ಕೃಷ್ಣ, ಮೊಹ್ಸಿನ್ ಖಾನ್, ಶಿಖರ್ ಶೆಟ್ಟಿ, ಶ್ರೀಜಿತ್ ಕೆ ಎಲ್, ವೈಶಾಖ್ ವಿಜಯ್ಕುಮಾರ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.