Ranji Trophy: ಕುತೂಹಲ ಘಟ್ಟಕ್ಕೆ ಕರ್ನಾಟಕ-ತ್ರಿಪುರಾ ಪಂದ್ಯ

By Kannadaprabha NewsFirst Published Jan 29, 2024, 10:05 AM IST
Highlights

ಮೊದಲ ಇನ್ನಿಂಗ್ಸ್‌ನಲ್ಲಿ 2ನೇ ದಿನ 9 ವಿಕೆಟ್‌ಗೆ 198 ರನ್‌ ಗಳಿಸಿದ್ದ ತ್ರಿಪುರಾ 200ಕ್ಕೆ ಆಲೌಟಾಯಿತು. 41 ರನ್‌ಗಳ ಮುನ್ನಡೆ ಸಾಧಿಸಿದ ರಾಜ್ಯ ತಂಡಕ್ಕೆ 2ನೇ ಇನ್ನಿಂಗ್ಸ್‌ನಲ್ಲಿ ಆಘಾತ ಎದುರಾಯಿತು. ತಾರಾ ಬ್ಯಾಟರ್‌ಗಳ ವೈಫಲ್ಯದಿಂದಾಗಿ ತಂಡ ಕೇವಲ 151ಕ್ಕೆ ಸರ್ವಪತನ ಕಂಡಿತು.

ಅಗರ್ತಲಾ(ಜ.29): ರಣಜಿ ಟ್ರೋಫಿಯ ಕರ್ನಾಟಕ ಹಾಗೂ ತ್ರಿಪುರಾ ನಡುವಿನ ಪಂದ್ಯ ಕುತೂಹಲ ಘಟ್ಟಕ್ಕೆ ತಲುಪಿದೆ. ನಾಕೌಟ್ ದೃಷ್ಟಿಯಿಂದ ಮಹತ್ವದ್ದೆನಿಸಿರುವ ಪಂದ್ಯದಲ್ಲಿ ರಾಜ್ಯ ತಂಡ ಸಂಕಷ್ಟದಲ್ಲಿದ್ದು, ಸೋಲಿನ ಭೀತಿಯಲ್ಲಿದೆ. ಗೆಲ್ಲಲು 193 ರನ್‌ ಗುರಿ ಪಡೆದಿರುವ ತ್ರಿಪುರಾ 3ನೇ ದಿನದಂತ್ಯಕ್ಕೆ 3 ವಿಕೆಟ್‌ಗೆ 59 ರನ್‌ ಗಳಿಸಿದ್ದು, ಇನ್ನೂ 134 ರನ್‌ ಅಗತ್ಯವಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ 2ನೇ ದಿನ 9 ವಿಕೆಟ್‌ಗೆ 198 ರನ್‌ ಗಳಿಸಿದ್ದ ತ್ರಿಪುರಾ 200ಕ್ಕೆ ಆಲೌಟಾಯಿತು. 41 ರನ್‌ಗಳ ಮುನ್ನಡೆ ಸಾಧಿಸಿದ ರಾಜ್ಯ ತಂಡಕ್ಕೆ 2ನೇ ಇನ್ನಿಂಗ್ಸ್‌ನಲ್ಲಿ ಆಘಾತ ಎದುರಾಯಿತು. ತಾರಾ ಬ್ಯಾಟರ್‌ಗಳ ವೈಫಲ್ಯದಿಂದಾಗಿ ತಂಡ ಕೇವಲ 151ಕ್ಕೆ ಸರ್ವಪತನ ಕಂಡಿತು. ಚೊಚ್ಚಲ ಪಂದ್ಯವಾಡುತ್ತಿರುವ ಕಿಶನ್‌ ಬೆದರೆ(42), ಶ್ರೀನಿವಾಸ್‌ ಶರತ್‌(48) ಹೊರತುಪಡಿಸಿ ಇತರ ಯಾರಿಂದಲೂ ಸೂಕ್ತ ಕೊಡುಗೆ ಸಿಗಲಿಲ್ಲ. ವೈಶಾಕ್‌ 22, ಮಯಾಂಕ್‌ ಅಗರ್‌ವಾಲ್‌ 17 ರನ್‌ ಗಳಿಸಿದರು.

ಸ್ಪರ್ಧಾತ್ಮಕ ಗುರಿ ಬೆನ್ನತ್ತಿರುವ ತ್ರಿಪುರಾಗೆ ರಾಜ್ಯದ ವೇಗಿಗಳು ಆಘಾತ ನೀಡಿದರು. ಸುದೀಪ್‌(26*) ಹಾಗೂ ಕನ್ನಡಿಗ ಗಣೇಶ್‌ ಸತೀಶ್‌(3*) ಕ್ರೀಸ್‌ನಲ್ಲಿದ್ದಾರೆ. ಕೊನೆ ದಿನವಾದ ಸೋಮವಾರ ರಾಜ್ಯದ ಬೌಲರ್‌ಗಳು ಅಸಾಧಾರಣ ಪ್ರದರ್ಶನ ನೀಡಿದರಷ್ಟೇ ಗೆಲುವು ದಕ್ಕಲಿದೆ.

ಆಸೀಸ್‌ನ ಗಾಬಾ ಕೋಟೆ ಭೇದಿಸಿದ ವಿಂಡೀಸ್‌! ಹಣ್ಣು, ಬಾಟಲನ್ನು ಬಾಲ್‌ ಮಾಡಿ ಆಡುತ್ತಿದ್ದ ಶಮಾರ್‌ ಗೆಲುವಿನ ಹೀರೋ!

ಸ್ಕೋರ್‌: 
ಕರ್ನಾಟಕ 241/10 ಮತ್ತು 151/10(ಶ್ರೀನಿವಾಸ್‌ 48, ಕಿಶನ್‌ 42, ಮುರಾ 3-29)
ತ್ರಿಪುರಾ 200/10 ಮತ್ತು 59/3(3ನೇ ದಿನದಂತ್ಯಕ್ಕೆ)(ಸುದೀಪ್‌ 26*, ವೈಶಾಕ್‌ 1-13)

ಅಂ-19 ವಿಶ್ವಕಪ್‌: ಭಾರತಕ್ಕೆ ಮತ್ತೆ 201 ರನ್‌ ಜಯ!

ಬ್ಲೂಮ್‌ಫಂಟೀನ್‌: ಅಂಡರ್‌-19 ವಿಶ್ವಕಪ್‌ನಲ್ಲಿ 5 ಬಾರಿ ಚಾಂಪಿಯನ್‌ ಭಾರತ ಹ್ಯಾಟ್ರಿಕ್‌ ಗೆಲುವಿನೊಂದಿಗೆ ಸೂಪರ್‌-6 ಹಂತ ಪ್ರವೇಶಿಸಿದೆ. ಭಾನುವಾರ ‘ಎ’ ಗುಂಪಿನ ಕೊನೆ ಪಂದ್ಯದಲ್ಲಿ ಅಮೆರಿಕ ವಿರುದ್ಧ 201 ರನ್‌ ಬೃಹತ್‌ ಗೆಲುವು ದಾಖಲಿಸಿತು. ಕಳೆದ ಪಂದ್ಯದಲ್ಲಿ ಐರ್ಲೆಂಡ್‌ ವಿರುದ್ಧವೂ ಭಾರತಕ್ಕೆ 201 ರನ್‌ ಜಯ ಲಭಿಸಿತ್ತು.

ಟೊಮ್ ಬೌಲಿಂಗ್‌ಗೆ ಭಾರತ ಠುಸ್, ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲು!

ಮೊದಲು ಬ್ಯಾಟ್‌ ಮಾಡಿದ ಭಾರತ ಅರ್ಶಿನ್‌ ಕುಲ್ಕರ್ಣಿ(109), ಮುಶೀರ್‌ ಖಾನ್‌(73) ಆಕರ್ಷಕ ಆಟದ ನೆರವಿನಿಂದ 5 ವಿಕೆಟ್‌ ಕಳೆದುಕೊಂಡು 326 ರನ್‌ ಕಲೆಹಾಕಿತು. ದೊಡ್ಡ ಗುರಿ ಬೆನ್ನತ್ತಿದ ಅಮೆರಿಕ 50 ಓವರಲ್ಲಿ 8 ವಿಕೆಟ್‌ ಕಳೆದುಕೊಂಡು 125 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ನಮನ್‌ ತಿವಾರಿ 4 ವಿಕೆಟ್ ಕಬಳಿಸಿದರು. ಭಾರತ ಸೂಪರ್‌-6 ಹಂತದ ಮೊದಲ ಪಂದ್ಯದಲ್ಲಿ ಜ.30ರಂದು ನ್ಯೂಜಿಲೆಂಡ್‌ ವಿರುದ್ಧ ಸೆಣಸಾಡಲಿದೆ.

ವಿಶ್ವವಾಣಿ ಕಪ್‌: ವಿಜಯ ಕರ್ನಾಟಕ ಚಾಂಪಿಯನ್‌

ಬೆಂಗಳೂರು: ವಿಶ್ವವಾಣಿ ಪತ್ರಿಕೆಯ 9ನೇ ವಾರ್ಷಿಕೋತ್ಸವ ಪ್ರಯುಕ್ತ ಆಯೋಜಿಸಲಾಗಿದ್ದ ಅಂತರ್‌ ಮುದ್ರಣ ಮಾಧ್ಯಮ ಕ್ರಿಕೆಟ್‌ ಟೂರ್ನಿಯಲ್ಲಿ ವಿಜಯ ಕರ್ನಾಟಕ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾನುವಾರ ನಡೆದ ಫೈನಲ್‌ನಲ್ಲಿ ಪ್ರಜಾವಾಣಿ ವಿರುದ್ಧ ವಿಜಯ ಕರ್ನಾಟಕ 15 ರನ್‌ ರೋಚಕ ಗೆಲುವು ಸಾಧಿಸಿತು.

ಮೊದಲು ಬ್ಯಾಟ್‌ ಮಾಡಿದ ವಿಜಯ ಕರ್ನಾಟಕ 10 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 89 ರನ್‌ ಕಲೆಹಾಕಿತು. ದೊಡ್ಡ ಗುರಿ ಬೆನ್ನತ್ತಿದ ಪ್ರಜಾವಾಣಿ 10 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 74 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಸೆಮಿಫೈನಲ್‌ನಲ್ಲಿ ಪ್ರಜಾವಾಣಿ ತಂಡವು ವಿಜಯವಾಣಿ ವಿರುದ್ಧ ಗೆದ್ದಿದ್ದರೆ, ವಿಜಯ ಕರ್ನಾಟಕ ತಂಡ ಕನ್ನಡಪ್ರಭ ತಂಡವನ್ನು ಸೋಲಿಸಿ ಫೈನಲ್‌ ಪ್ರವೇಶಿಸಿದ್ದವು.
 

click me!