
ಮುಂಬೈ (ಜು.24) ರಾಜಸ್ಥಾನ ರಾಯಲ್ಸ್ ತಂಡ ಮಾರಾಟವಾದರೂ ವಿವಾದ ಬಿಟ್ಟಿಲ್ಲ. ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಬಳಿಕ ರಾಜಸ್ಥಾನ ರಾಯಲ್ಸ್ ತಂಡ 2 ವರ್ಷಗಳ ಕಾಲ ಐಪಿಎಲ್ನಿಂದ ಬ್ಯಾನ್ ಪ್ರಕರಣ ಭಾರಿ ವಿವಾದ ಸೃಷ್ಟಿಸಿತ್ತು. ಬಳಿಕ ಸುಧಾರಿಸಿಕೊಂಡು ಐಪಿಎಲ್ ಸೇರಿಕೊಂಡು ಇತ್ತೀಚೆಗೆ ಮಾರಾಟವಾದರೂ ವಿವಾದ ಬೆಂಬಿದಡೆ ಕಾಡುತ್ತಿದೆ. ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಮಾರಾಟದ ಪಾಲು ಹಂಚಿಕೆಯಲ್ಲಿ ವಂಚನೆ ನಡೆದಿದೆ ಎಂದು ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಗಂಭೀರ ಆರೋಪ ಮಾಡಿದ್ದಾರೆ. ಇಷ್ಟೇ ಅಲ್ಲ ಕೋರ್ಟ್ ಮೆಟ್ಟಿಲೇರಿದ್ದಾರೆ.ಇದೇ ವೇಳೆಮಾಜಿ ಮಾಲೀಕ ಮನೋಜ್ ಬಡಾಲೆಗೆ ಬಹಿರಂಗ ಸವಾಲು ಹಾಕಿದ್ದು, ಕೋರ್ಟ್ನಲ್ಲ ಭೇಟಿಯಾಗೋಣ ಎಂದಿದ್ದಾರೆ.
ರಾಜಸ್ಥಾನ್ ರಾಯಲ್ಸ್ (RR) ಫ್ರಾಂಚೈಸಿಯ ಮಾಜಿ ಸಹ ಮಾಲೀಕ ಹಾಗೂ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ, ಮಾಜಿ ಮಾಲೀಕ ಮನೋಜ್ ಬಡಾಲೆ ಹಾಗೂ ಅವರ ಎಮರ್ಜಿಂಗ್ ಮೀಡಿಯಾ ವೆಂಚರ್ಸ್ ವಿರುದ್ಧ ವಂಚನೆ ಆರೋಪ ಮಾಡಿದ್ದಾರೆ. ಮನೋಜ್ ಬಡಾಲೆ ಇತ್ತೀಚೆಗಷ್ಟೇ ಉದ್ಯಮಿ ಲಕ್ಷ್ಮಿ ಮಿತ್ತಲ್ ಪುತ್ರ ಆದಿತ್ಯ ಮಿತ್ತಲ್ ಹಾಗೂ ಸೀರಮ್ ಇನ್ಸ್ಟಿಟ್ಯೂಟ್ ಮುಖ್ಯಸ್ಥ ಆದರ್ ಪೂನಾವಾಲಾ ಸೇರಿದಂತೆ ಪ್ರಮುಖರು ರಾಜಸ್ಥಾನ ರಾಯಲ್ಸ್ ತಂಡವನ್ನು ಖರೀದಿಸಿದ್ದಾರೆ. ಬರೋಬ್ಬರಿ 15,600 ಕೋಟಿ ರೂಪಾಯಿಗೆ ತಂಡ ಮಾರಾಟವಾಗಿತ್ತು. ಆದರೆ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ತಮಗಿದ್ದ ಶೇ 11.7 ರಷ್ಟು ಷೇರುಗಳಿಗೆ ಸರಿಯಾದ ಮೌಲ್ಯ ನೀಡದೆ ವಂಚನೆ ಮಾಡಲಾಗಿದೆ. ತಮಗೆ ನೈಜ ಮೌಲ್ಯಕ್ಕಿಂತ ಅತ್ಯಂತ ಕಡಿಮೆ ಹಣ ನೀಡಿ ವಂಚಿಸಲಾಗಿದೆ ಎಂದು ರಾಜ್ ಕುಂದ್ರಾ ನ್ಯಾಯಾಲಯದ ಬಾಗಿಲು ತಟ್ಟಿದ್ದಾರೆ.
ವಂಚನೆ ಆರೋಪ ಮಾಡಿರುವ ರಾಜ್ ಕುಂದ್ರಾ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣ (NCLT) ಹಾಗೂ ಮುಂಬೈ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಮನೋಜ್ ಬಡಾಲೆ ನಡವಳಿಕೆ ವಿರುದ್ಧ ಶೋಷಣೆ ಮತ್ತು ಆಡಳಿತ ದುರುಪಯೋಗದ ಆರೋಪ ಹೊರಿಸಿದ್ದಾರೆ.
ಉದ್ಯಮಿ ಮನೋಜ್ ಬಡಾಲೆಯ ಇಎಂವಿ ಸಂಸ್ಥೆ ಲಂಡನ್ ಹೈಕೋರ್ಟ್ನಿಂದ ತಾತ್ಕಾಲಿಕ ರಿಲೀಫ್ ಪಡೆದುಕೊಂಡಿದೆ. 2019 ರಲ್ಲಿ ಮಾಡಿಕೊಳ್ಳಲಾದ ಗೌಪ್ಯ ಸಂಧಾನ ಒಪ್ಪಂದವನ್ನು ರಾಜ್ ಕುಂದ್ರಾ ಉಲ್ಲಂಘಿಸಿದ್ದಾರೆ ಎಂದು ಕೋರ್ಟ್ನಲ್ಲಿ ವಾದಿಸಿತ್ತು. 2015 ರ ಬೆಟ್ಟಿಂಗ್ ಪ್ರಕರಣದ ನಂತರ ಶೇರುಗಳನ್ನು ಹಸ್ತಾಂತರಿಸಿದ್ದ ಕುಂದ್ರಾ, 2019 ರ ಒಪ್ಪಂದದಡಿ 4.94 ಮಿಲಿಯನ್ ಡಾಲರ್ ಪಡೆದುಕೊಂಡಿದ್ದರು ಎಂದು ಸಂಸ್ಥೆ ಹೇಳಿತ್ತು.
ಪಟ್ಟು ಬಿಡದ ರಾಜ್ ಕುಂದ್ರಾ ಹರಾಜು ಪ್ರಕ್ರಿಯೆ ಪಾರದರ್ಶಕತೆಯಿಂದ ಕೂಡಿಲ್ಲ ಎಂದು ಆರೋಪಿಸಿದ್ದಾರೆ. ಮಾರುಕಟ್ಟೆ ಮೌಲ್ಯವನ್ನು ಕುಗ್ಗಿಸಿ ತಮಗೆ ವಂಚನೆ ಮಾಡಿ ಮೌಲ್ಯ ತೋರಿಸಿದ್ದಾರೆ. ನಿಜವಾದ ಆರ್ಥಿಕ ಮೌಲ್ಯಮಾಪನವನ್ನು ಮರೆಮಾಚಲಾಗಿದೆ ಎಂಬ ಆರೋಪವನ್ನು ರಾಜ್ ಕುಂದ್ರಾ ಮಾಡಿದ್ದಾರೆ. ಇದೇ ವೇಳೆ ಭಾರತೀಯ ನ್ಯಾಯಾಲಯದಲ್ಲಿ ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.