
ಮುಂಬೈ: ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ಗಾಗಿ ಚೆನ್ನೈ ಸೂಪರ್ ಕಿಂಗ್ಸ್ ರವೀಂದ್ರ ಜಡೇಜಾರನ್ನು ಬಿಟ್ಟುಕೊಡಬಾರದು ಎಂದು ಮಾಜಿ ಕ್ರಿಕೆಟಿಗ ಪ್ರಿಯಾಂಕ್ ಪಾಂಚಾಲ್ ಎಚ್ಚರಿಕೆ ನೀಡಿದ್ದಾರೆ. ಟ್ರೇಡ್ ವಿಷಯದಲ್ಲಿ ಬಹುತೇಕ ಒಪ್ಪಂದವಾಗಿದೆ ಎಂಬ ವರದಿಗಳು ಬರುತ್ತಿವೆ. ಇನ್ನು ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ. ಟ್ರೇಡ್ ಸುದ್ದಿಗಳು ಹರಿದಾಡುತ್ತಿದ್ದರೂ, ಫ್ರಾಂಚೈಸಿಗಳು ಅಥವಾ ಆಟಗಾರರು ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ. ನವೆಂಬರ್ 15 ಉಳಿಸಿಕೊಳ್ಳುವ ಮತ್ತು ಕೈಬಿಡುವ ಆಟಗಾರರ ಪಟ್ಟಿಯನ್ನು ಸಲ್ಲಿಸಲು ಕೊನೆಯ ದಿನವಾಗಿದೆ.
ಈ ನಡುವೆ ರವೀಂದ್ರ ಜಡೇಜಾರನ್ನು ಬಿಟ್ಟುಕೊಡಬಾರದು ಎಂದು ಚೆನ್ನೈ ಸೂಪರ್ ಕಿಂಗ್ಸ್ಗೆ ಪ್ರಿಯಾಂಕ್ ಪಾಂಚಾಲ್ ಎಚ್ಚರಿಕೆ ನೀಡಿದ್ದಾರೆ. ''ಸಂಜುಗಾಗಿ ಜಡೇಜಾರನ್ನು ಬಿಟ್ಟುಕೊಡುವುದು ಚೆನ್ನೈ ಮಾಡುವ ದೊಡ್ಡ ತಪ್ಪು. ತಂಡದ ಮುಖವಾಗಿರುವ ಆಟಗಾರನನ್ನು ಹೋಗಲು ಬಿಡಬಾರದು. ಚೆನ್ನೈ ಹಲವು ಪ್ರಶಸ್ತಿಗಳನ್ನು ಗೆದ್ದ, ದಂತಕಥೆಗಳ ಜೊತೆ ಯಾವಾಗಲೂ ಗಟ್ಟಿಯಾಗಿ ನಿಲ್ಲುವ ಕ್ಲಬ್. ಬಹಳ ಕಾಲದಿಂದ ಶ್ರಮಿಸಿದ ಆಟಗಾರರನ್ನು ಬಿಟ್ಟುಕೊಡುವುದು ಸರಿಯಲ್ಲ,'' ಎಂದು ಪಾಂಚಾಲ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಸಂಜು ಸ್ಯಾಮ್ಸನ್ ಮತ್ತು ರವೀಂದ್ರ ಜಡೇಜಾಗೆ ಒಂದು ಸೀಸನ್ಗೆ ಅವರವರ ಫ್ರಾಂಚೈಸಿಗಳು 18 ಕೋಟಿ ರೂಪಾಯಿ ನೀಡುತ್ತಿವೆ. ಟ್ರೇಡ್ ಕುರಿತು ಎರಡೂ ತಂಡಗಳು ಮತ್ತು ಆಟಗಾರರ ನಡುವೆ ಒಪ್ಪಂದವಾಗಿದೆ ಎಂದು ಇಎಸ್ಪಿಎನ್ ಕ್ರಿಕ್ಇನ್ಫೋ ವರದಿ ಮಾಡಿದೆ. ಸಂಜು ಅವರನ್ನು ಪಡೆಯಲು ಜಡೇಜಾ ಜೊತೆಗೆ ಸ್ಯಾಮ್ ಕರನ್ ಅವರನ್ನೂ ಚೆನ್ನೈ ಸೂಪರ್ ಕಿಂಗ್ಸ್ ಬಿಟ್ಟುಕೊಟ್ಟಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಆದರೆ, ಅಭಿಮಾನಿಗಳು ಅಧಿಕೃತ ಅನೌನ್ಸ್ಮೆಂಟ್ಗಾಗಿ ಕಾಯುತ್ತಿದ್ದಾರೆ. ಒಪ್ಪಂದ ನಡೆದರೆ, 16 ವರ್ಷಗಳ ನಂತರ ಜಡೇಜಾ ರಾಯಲ್ಸ್ ಜೊತೆ ಮತ್ತೆ ಒಂದಾಗಲಿದ್ದಾರೆ. 2008, 2009ರ ಉದ್ಘಾಟನಾ ಸೀಸನ್ಗಳಲ್ಲಿ ಜಡೇಜಾ ರಾಯಲ್ಸ್ ತಂಡದ ಭಾಗವಾಗಿದ್ದರು.
ಮುಂದಿನ ಸೀಸನ್ನಲ್ಲಿ ಅಂದರೆ 2010ರಲ್ಲಿ ರಾಯಲ್ಸ್ ತಂಡದ ಅಧಿಕಾರಿಗಳಿಗೆ ತಿಳಿಸದೆ ಜಡೇಜಾ, ಮುಂಬೈ ಇಂಡಿಯನ್ಸ್ನ ಟ್ರಯಲ್ಸ್ನಲ್ಲಿ ಭಾಗವಹಿಸಿದ್ದರು. ಒಪ್ಪಂದ ಉಲ್ಲಂಘಿಸಿದ ಆಟಗಾರನ ವಿರುದ್ಧ ರಾಯಲ್ಸ್ ಬಿಸಿಸಿಐಗೆ ದೂರು ನೀಡಿತ್ತು. ಬಿಸಿಸಿಐ, ಜಡೇಜಾಗೆ ಐಪಿಎಲ್ ಆಡುವುದರಿಂದ ಒಂದು ವರ್ಷದ ನಿಷೇಧ ಹೇರಿತು. 2011ರ ಸೀಸನ್ನಲ್ಲಿ ಜಡೇಜಾ ಕೊಚ್ಚಿ ಟಸ್ಕರ್ಸ್ ತಂಡ ಸೇರಿದರು. ನಂತರ 2012ರಿಂದ ಚೆನ್ನೈ ಸೂಪರ್ ಕಿಂಗ್ಸ್ ಜರ್ಸಿಯಲ್ಲಿ ಆಡಲು ಆರಂಭಿಸಿದರು.
2012ರಿಂದ ಜಡೇಜಾ ಚೆನ್ನೈ ತಂಡದ ಅತ್ಯಂತ ನಂಬಿಗಸ್ಥ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಈ ನಡುವೆ ಸಿಎಸ್ಕೆಗೆ ನಿಷೇಧ ಹೇರಿದ್ದಾಗ 2016, 2017ರ ಸೀಸನ್ನಲ್ಲಿ ಗುಜರಾತ್ ಲಯನ್ಸ್ ಪರವೂ ಆಡಿದ್ದರು. 36 ವರ್ಷದ ಜಡೇಜಾ ಇತ್ತೀಚೆಗೆ ಅಂತರಾಷ್ಟ್ರೀಯ ಟಿ20ಯಿಂದ ನಿವೃತ್ತಿ ಘೋಷಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.