ರಾಷ್ಟ್ರಪತಿಗಳಿಂದ ಅರ್ಜುನ ಅವಾರ್ಡ್ ಸ್ವೀಕರಿಸಿದ ಕ್ರಿಕೆಟಿಗ ಮೊಹಮ್ಮದ್ ಶಮಿ: ವಿಡಿಯೋ ವೈರಲ್

By Naveen KodaseFirst Published Jan 9, 2024, 12:24 PM IST
Highlights

ಅರ್ಜುನ ಪ್ರಶಸ್ತಿ ಸ್ವೀಕರಿಸುವ ಮುನ್ನ ಮಾತನಾಡಿದ್ದ ಶಮಿ, "ಇದು ಒಂದು ಕನಸಾಗಿತ್ತು. ಜೀವನ ಸಾಗುತ್ತಿರುತ್ತದೆ ಹಾಗೂ ಎಲ್ಲರೂ ಈ ಪ್ರಶಸ್ತಿಯನ್ನು ಗೆಲ್ಲಲು ಆಗುವುದಿಲ್ಲ. ಈ ಪ್ರಶಸ್ತಿಗೆ ನನ್ನ ಹೆಸರು ನಾಮನಿರ್ದೇಶನಗೊಂಡಿದ್ದಕ್ಕೆ ಸಂತೋಷ ಪಡುತ್ತಿದ್ದೇನೆ ಎಂದು ಹೇಳಿದ್ದರು.

ನವದೆಹಲಿ(ಜ.09): ಟೀಂ ಇಂಡಿಯಾ ವೇಗದ ಬೌಲರ್‌ ಮೊಹಮ್ಮದ್ ಶಮಿ, ಕ್ರಿಕೆಟ್‌ನಲ್ಲಿ ದೇಶಕ್ಕೆ ಹೆಮ್ಮೆ ಪಡುವಂತ ಸಾಧನೆ ಮಾಡಿದ್ದಕ್ಕಾಗಿ ಅರ್ಜುನ ಪ್ರಶಸ್ತಿಗೆ ಪಾತ್ರರಾಗಿದ್ದರು. ಇದೀಗ ಶಮಿ ಇಂದು ರಾಷ್ಟ್ರಪತಿ ಭವನದಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿದ್ದ ಮೊಹಮ್ಮದ್ ಶಮಿ ಅವರ ಹೆಸರನ್ನು ಅರ್ಜುನ ಪ್ರಶಸ್ತಿಗೆ ಬಿಸಿಸಿಐ ಶಿಫಾರಸು ಮಾಡಿತ್ತು.

2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮೊಹಮ್ಮದ್ ಶಮಿ ಕೇವಲ 7 ಪಂದ್ಯಗಳನ್ನಾಡಿ 24 ವಿಕೆಟ್ ಕಬಳಿಸುವ ಮೂಲಕ ತಂಡ ಫೈನಲ್‌ಗೇರುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಆದರೆ ಫೈನಲ್‌ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಆಸ್ಟ್ರೇಲಿಯಾಗೆ ಶರಣಾಗುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಶುಭ್‌ಮನ್ ಗಿಲ್ ಪದೇ ಪದೇ ಫೇಲ್; ಡಬಲ್ ಸೆಂಚುರಿ ಬಾರಿಸಿ ಪೂಜಾರ ಕಮಾಲ್..!

ಇನ್ನು ಅರ್ಜುನ ಪ್ರಶಸ್ತಿ ಸ್ವೀಕರಿಸುವ ಮುನ್ನ ಮಾತನಾಡಿದ್ದ ಶಮಿ, "ಇದು ಒಂದು ಕನಸಾಗಿತ್ತು. ಜೀವನ ಸಾಗುತ್ತಿರುತ್ತದೆ ಹಾಗೂ ಎಲ್ಲರೂ ಈ ಪ್ರಶಸ್ತಿಯನ್ನು ಗೆಲ್ಲಲು ಆಗುವುದಿಲ್ಲ. ಈ ಪ್ರಶಸ್ತಿಗೆ ನನ್ನ ಹೆಸರು ನಾಮನಿರ್ದೇಶನಗೊಂಡಿದ್ದಕ್ಕೆ ಸಂತೋಷ ಪಡುತ್ತಿದ್ದೇನೆ ಎಂದು ಹೇಳಿದ್ದರು.

ಹೀಗಿತ್ತು ನೋಡಿ ಶಮಿ, ಪ್ರಶಸ್ತಿ ಸ್ವೀಕಾರದ ಕ್ಷಣ:

A proud day for cricket...!!!

Shami is now a Arjuna Awardee. 🫡pic.twitter.com/A8NDBqcjt1

— Mufaddal Vohra (@mufaddal_vohra)

2023ರ ಏಕದಿನ ವಿಶ್ವಕಪ್ ಟೂರ್ನಿಯ ಮೊದಲ 4 ಪಂದ್ಯಗಳಲ್ಲಿ ಮೊಹಮ್ಮದ್ ಶಮಿ ಬೆಂಚ್ ಕಾಯಿಸಿದ್ದರು. ಇನ್ನು ಬಾಂಗ್ಲಾದೇಶ ಎದುರಿನ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಗಾಯಗೊಂಡಿದ್ದರಿಂದಾಗಿ ನ್ಯೂಜಿಲೆಂಡ್ ಎದುರಿನ ಪಂದ್ಯದ ವೇಳೆ ಶಮಿಗೆ ಭಾರತದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಲಾಗಿತ್ತು. ಕಿವೀಸ್ ಎದುರು ತಾನಾಡಿದ ಮೊದಲ ಪಂದ್ಯದಲ್ಲೇ 5 ವಿಕೆಟ್ ಕಬಳಿಸಿ ಮಿಂಚಿದ್ದ ಶಮಿ ಆ ಬಳಿಕ ಹಿಂತಿರುಗಿ ನೋಡುವ ಪ್ರಶ್ನೆಯೇ ಬರಲಿಲ್ಲ. ಶಮಿ ಟೂರ್ನಿಯಲ್ಲಿ 24 ವಿಕೆಟ್ ಕಬಳಿಸುವ ಮೂಲಕ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮಿದ್ದರು.

ರಣಜಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ಗೆಲುವಿನೊಂದಿಗೆ ಶುಭಾರಂಭ

ಇತ್ತೀಚೆಗಷ್ಟೇ ಕೇಂದ್ರ ಕ್ರೀಡಾ ಸಚಿವಾಲಯವು ಕ್ರೀಡಾ ಸಾಧಕರ ಹೆಸರನ್ನು ವಿವಿಧ ಪ್ರಶಸ್ತಿಗಳಿಗೆ ಆಯ್ಕೆ ಮಾಡಿತ್ತು. ತಾರಾ ಕ್ರಿಕೆಟಿಗ ಮೊಹಮದ್‌ ಶಮಿ ಸೇರಿದಂತೆ 26 ಸಾಧಕರು ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಅಜಯ್‌ ರೆಡ್ಡಿ(ಅಂಧರ ಕ್ರಿಕೆಟ್‌), ಓಜಸ್‌, ಅದಿತಿ ಸ್ವಾಮಿ (ಆರ್ಚರಿ), ಶೀತಲ್‌ ದೇವಿ(ಪ್ಯಾರಾ ಆರ್ಚರಿ), ಪಾರುಲ್‌ ಚೌಧರಿ, ಶ್ರೀಶಂಕರ್‌ ಮುರಳಿ (ಅಥ್ಲೆಟಿಕ್ಸ್‌), ಮೊಹಮದ್‌ ಹುಸ್ಮುದ್ದಿನ್‌ (ಬಾಕ್ಸಿಂಗ್‌), ಆರ್‌.ವೈಶಾಲಿ (ಚೆಸ್‌), ಅಂತಿಮ್‌ ಪಂಘಲ್‌ (ಕುಸ್ತಿ) ಕೂಡಾ ಮಂಗಳವಾರ ಅರ್ಜುನ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ತಾರಾ ಬ್ಯಾಡ್ಮಿಂಟನ್‌ ಆಟಗಾರರಾದ ಸಾತ್ವಿಕ್‌ ಸಾಯಿರಾಜ್‌ ಹಾಗೂ ಚಿರಾಗ್‌ ಶೆಟ್ಟಿ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ಧ್ಯಾನ್‌ಚಂದ್‌ ಖೇಲ್‌ ರತ್ನ ಪ್ರಶಸ್ತಿ, ಶ್ರೇಷ್ಠ ಕೋಚ್‌ಗಳಿಗೆ ನೀಡುವ ದ್ರೋಣಾಚಾರ್ಯ ಪ್ರಶಸ್ತಿಯನ್ನು ಕಬಡ್ಡಿ ಕೋಚ್‌ ಬಾಸ್ಕರನ್‌ ಅವರು ರಾಷ್ಟ್ರಪತಿಯಿಂದ ಸ್ವೀಕರಿಸಿದ್ದಾರೆ.
 

click me!