ನವದೆಹಲಿ(ಜು.10): ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಹೈ ವೋಲ್ಟೇಜ್ ಪಂದ್ಯ ಸಿಗುವ ಸಾಧ್ಯತೆಗಳು ಕಾಣಿಸುತ್ತಿದೆ. ಅಜಾದಿ ಕಾ ಅಮೃತಮಹೋತ್ಸವ ಆಚರಣೆಯಲ್ಲಿ ಭಾರತ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಮಾಡುತ್ತಿದೆ. ಇದರ ಅಂಗವಾಗಿ ಟೀಂ ಇಂಡಿಯಾ ಹಾಗೂ ವಿಶ್ವ ಇಲೆವೆನ್ ನಡುವೆ ವಿಶೇಷ ಪಂದ್ಯ ಆಯೋಜಿಸಲು ಕೇಂದ್ರ ಕ್ರೀಡಾ ಇಲಾಖೆ ಬಿಸಿಸಿಐಗೆ ಪತ್ರ ಬರೆದಿದೆ.
ಆಗಸ್ಟ್ ತಿಂಗಳಲ್ಲಿ ವಿಶೇಷ ಪಂದ್ಯ ಆಯೋಜಿಸಲು ಕೇಂದ್ರ ಸರ್ಕಾರ ಮನವಿ ಮಾಡಿದೆ. ಆಗಸ್ಟ್ 22ರೊಳಗೆ ಪಂದ್ಯ ಆಯೋಜಿಸಲು ಸಾಧ್ಯವೆ ಎಂದು ಕೇಂದ್ರ ಸರ್ಕಾರ ಬಿಸಿಸಿಐ ಬಳಿ ಕೇಳಿದೆ. ನಾವು ಪಂದ್ಯ ಆಯೋಜಿಸಲು ಯೋಚನೆ ಮಾಡಿದ್ದೇವೆ. ಟೀಂ ಇಂಡಿಯಾದ ಅತ್ಯುತ್ತಮ ಆಟಗಾರರನ್ನೊಳಗೊಂಡ ತಂಡ ವಿಶ್ವದ ಅತ್ಯುತ್ತಮ ಆಟಗಾರರನ್ನೊಳಗೊಂಡ ತಂಡದ ಜೊತೆ ಕ್ರಿಕೆಟ್ ಪಂದ್ಯ ಆಯೋಜಿಸಲು ಮನವಿ ಪತ್ರವನ್ನು ಬಿಸಿಸಿಐಗೆ ಕಳುಹಿಸಿದ್ದೇವೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಆಸುಪಾಸಿನಲ್ಲಿ ಈ ಪಂದ್ಯ ಆಯೋಜನೆಗೊಂಡರೆ ಉತ್ತಮ ಎಂದು ಕೇಂದ್ರ ಯುವಜನ ಹಾಗೂ ಕ್ರೀಡಾ ಇಲಾಖೆ ಹೇಳಿದೆ.
Ind vs Eng ಇಂಗ್ಲೆಂಡ್ಗೆ ಹೀನಾಯ ಸೋಲು, ಟಿ20 ಸರಣಿ ಟೀಂ ಇಂಡಿಯಾ ಪಾಲು..!
ಮೋದಿ ಸರ್ಕಾರದ ವಿಶೇಷ ಮನವಿ ಕುರಿತು ಸ್ಪಷ್ಟ ಚಿತ್ರಣ ಹೊರಬಿದ್ದಿಲ್ಲ. ಆದರೆ ಒಂದು ಪಂದ್ಯ ಆಯೋಜಿಸಲು ಕೇಂದ್ರ ಸರ್ಕಾರ ತುದಿಗಾಲಲ್ಲಿ ನಿಂತಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಎಲ್ಲಾ ತಯಾರಿ ಮಾಡಿಕೊಂಡಿದೆ. ಸದ್ಯ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಸಕ್ರೀಯವಾಗಿದೆ. ಆಗಸ್ಟ್ ತಿಂಗಳಲ್ಲಿ ಅತ್ಯುತ್ತಮ ಟೀಂ ಇಂಡಿಯಾ ಆಯ್ಕೆ ಹಾಗೂ ಲಭ್ಯತೆ ಕುರಿತು ಬಿಸಿಸಿಐ ಸಮಾಲೋಚನೆ ನಡೆಸಬೇಕಿದೆ. ಇತ್ತ ವಿಶ್ವದ ಅತ್ಯುತ್ತಮ ಆಟಗಾರರನ್ನೊಳಗೊಂಡ ತಂಡದ ಆಯ್ಕೆ ಕೂಡ ಸವಾಲಾಗಿದೆ.
ಸದ್ಯ ಬಿಸಿಸಿಐ ಬರ್ಮಿಂಗ್ಹ್ಯಾಮ್ನಲ್ಲಿ ಬೀಡು ಬಿಟ್ಟಿದೆ. ಇದೇ ಜುಲೈ 22 ರಿಂದ 26ರ ವರೆಗೆ ಐಸಿಸಿ ಸಭೆ ನಡೆಯಲಿದೆ. ಭಾರತದ ವಿಶೇಷ ಪಂದ್ಯ ಆಯೋಜನೆ, ವಿಶ್ವ ಇಲೆವೆನ್ ತಂಡ ಕುರಿತು ಬಿಸಿಸಿಐ ಐಸಿಸಿ ಸಭೆಯಲ್ಲೂ ಚರ್ಚಿಸುವ ಸಾಧ್ಯತೆಗಳಿದೆ. ಇತರ ಕ್ರಿಕೆಟ್ ಮಂಡಳಿಗಳ ಆಟಗಾರರನ್ನೊಳಗೊಂಡ ವಿಶ್ವದ ಅತ್ಯುತ್ತಮ ತಂಡ ಆಯ್ಕೆ ಮಾಡುವ ಕುರಿತು ಚರ್ಚಿಸುವ ಸಾಧ್ಯತೆಗಳಿವೆ.
ಅಜಾದಿ ಅಮೃತಮಹೋತ್ಸವದ ವಿಶೇಷ ಕಾರ್ಯಕ್ರಮಗಳು ಕಳೆದೊಂದು ವರ್ಷದಿಂದ ನಡೆಯುತ್ತಿದೆ. ಇದೇ ವೇಳೆ ಟೀಂ ಇಂಡಿಯಾ ವಿಶೇಷ ಪಂದ್ಯ ಅಮೃತಮಹೋತ್ಸವ ಸಂಭ್ರಮಾಚರಣೆಗೆ ಮತ್ತಷ್ಟು ಮೆರುಗು ನೀಡಲಿದೆ. ಇಷ್ಟೇ ಅಲ್ಲ ಭಾರತದ ಅಜಾದಿಕಾ ಅಮೃತಮಹೋತ್ಸವ ಆಚರಣೆ ವಿಶ್ವದೆಲ್ಲಡೆ ಪಸರಿಸಲಿದೆ ಅನ್ನೋ ಲೆಕ್ಕಾಚಾರ ಹಾಕಿಕೊಂಡ ಕೇಂದ್ರ ಸರ್ಕಾರ, ಈ ಪಂದ್ಯಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದೆ.
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಈಗ ದಾಖಲೆಗಳ ಸರದಾರ..!
ಕೇಂದ್ರ ಸರ್ಕಾರದ ಪ್ಲಾನ್ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿದೆ. ಭಾರತ ಹಾಗೂ ವಿಶ್ವ ಇಲೆವೆನ್ ನಡುವಿನ ಪಂದ್ಯಕ್ಕಾಗಿ ಕಾತರ ಹೆಚ್ಚಾಗಿದೆ. ಟೀಂ ಇಂಡಿಯಾದಲ್ಲಿ ಯಾವ ಆಟಗಾರರು ಸ್ಥಾನ ಪಡೆಯಲಿದ್ದಾರೆ? ಇನ್ನು ವಿಶ್ವ ತಂಡದಲ್ಲಿ ಯಾವೆಲ್ಲಾ ಸ್ಟಾರ್ ಆಟಗಾರರು ಸ್ಥಾನ ಪಡೆಯಲಿದ್ದಾರೆ ಅನ್ನೋ ಲೆಕ್ಕಾಚಾರಗಳು ಈಗಾಗಲೇ ಶುರುವಾಗಿದೆ. ಮೂಲಗಳ ಪ್ರಕಾರ ವಿಶ್ವದ ಅತೀ ದೊಡ್ಡಕ್ರೀಡಾಂಗಣದ ಗುಜರಾತ್ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜಿಸುವ ಸಾಧ್ಯತೆ ಇದೆ.