ಮಿಚೆಲ್‌ ಸ್ಯಾಂಟ್ನರ್‌ಗೆ ಆಗಿದ್ದು ಭುಜದ ಗಾಯ, ಆದ್ರೆ 'ಕನ್ಕಶನ್ ಸಬ್' ಆಗಿ ಶಾರ್ದೂಲ್ ಠಾಕೂರ್ ಬಂದಿದ್ದೇಕೆ? ಸ್ಪಷ್ಟನೆ ಕೊಟ್ಟ ಜಯವರ್ಧನೆ

Published : Apr 24, 2026, 12:20 PM IST
Mitchell Santner-Shardul Thakur

ಸಾರಾಂಶ

ಚೆನ್ನೈ ವಿರುದ್ಧದ ಪಂದ್ಯದಲ್ಲಿ ಅದ್ಭುತ ಕ್ಯಾಚ್ ಹಿಡಿದ ಮುಂಬೈ ಆಲ್‌ರೌಂಡರ್ ಮಿಚೆಲ್ ಸ್ಯಾಂಟ್ನರ್ ಗಾಯಗೊಂಡಿದ್ದಾರೆ. ಭುಜದ ಗಾಯದ ಹೊರತಾಗಿಯೂ, ತಲೆಸುತ್ತಿನ ಕಾರಣ ಶಾರ್ದೂಲ್ ಠಾಕೂರ್ 'ಕನ್ಕಶನ್ ಸಬ್‌ಸ್ಟಿಟ್ಯೂಟ್' ಆಗಿ ಬಂದಿದ್ದು ಗೊಂದಲಕ್ಕೆ ಕಾರಣವಾಗಿತ್ತು. ಕೋಚ್ ಮಹೇಲ ಜಯವರ್ಧನೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಸ್ಯಾಂಟ್ನರ್ ಮುಂದಿನ ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆಯಿದೆ.

ಮುಂಬೈ: ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಹೀನಾಯ ಸೋಲು ಕಂಡ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ತಂಡದ ಆಲ್‌ರೌಂಡರ್ ಮಿಚೆಲ್ ಸ್ಯಾಂಟ್ನರ್ ಗಾಯಗೊಂಡಿದ್ದು, ಮುಂದಿನ ಪಂದ್ಯಗಳಲ್ಲಿ ಆಡುವುದು ಅನುಮಾನವಾಗಿದೆ. ಇದರ ನಡುವೆ, ಭುಜದ ಗಾಯಗೊಂಡಿದ್ದ ಸ್ಯಾಂಟ್ನರ್ ಬದಲಿಗೆ ಶಾರ್ದೂಲ್ ಠಾಕೂರ್ 'ಕನ್ಕಶನ್ ಸಬ್‌ಸ್ಟಿಟ್ಯೂಟ್' ಆಗಿ ಬ್ಯಾಟಿಂಗ್‌ಗೆ ಇಳಿದಿದ್ದು ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿತ್ತು. ಈ ಬಗ್ಗೆ ಮುಂಬೈ ಕೋಚ್ ಮಹೇಲ ಜಯವರ್ಧನೆ ಈಗ ಸ್ಪಷ್ಟನೆ ನೀಡಿದ್ದಾರೆ.

ಕ್ಷೇತ್ರರಕ್ಷಣೆ ವೇಳೆ ಗಾಯಗೊಂಡ ಮಿಚೆಲ್ ಸ್ಯಾಂಟ್ನರ್

ಸಿಎಸ್‌ಕೆ ಇನ್ನಿಂಗ್ಸ್‌ನ 17ನೇ ಓವರ್‌ನಲ್ಲಿ ಈ ಘಟನೆ ನಡೆಯಿತು. ಬುಮ್ರಾ ಬೌಲಿಂಗ್‌ನಲ್ಲಿ ಕಾರ್ತಿಕ್ ಶರ್ಮಾ ಬಾರಿಸಿದ ಚೆಂಡನ್ನು ಡೀಪ್‌ನಲ್ಲಿ ಸ್ಯಾಂಟ್ನರ್ ಅದ್ಭುತ ಡೈವಿಂಗ್ ಕ್ಯಾಚ್ ಮೂಲಕ ಹಿಡಿದರು. ಆದರೆ, ಕೆಳಗೆ ಬಿದ್ದ ರಭಸಕ್ಕೆ ಅವರ ಭುಜಕ್ಕೆ ಗಂಭೀರ ಗಾಯವಾಯಿತು. ತಕ್ಷಣವೇ ಸ್ಯಾಂಟ್ನರ್ ಮೈದಾನದಿಂದ ಹೊರನಡೆದರು.

ಸಾಮಾನ್ಯವಾಗಿ, ತಲೆ ಅಥವಾ ಕುತ್ತಿಗೆಗೆ ಪೆಟ್ಟಾದಾಗ ಮಾತ್ರ ಕನ್ಕಶನ್ ನಿಯಮದಡಿ ಬದಲಿ ಆಟಗಾರನಿಗೆ ಅವಕಾಶ ನೀಡಲಾಗುತ್ತದೆ. ಆದರೆ, ಸ್ಯಾಂಟ್ನರ್ ವಿಚಾರದಲ್ಲಿ ಆಗಿದ್ದೇ ಬೇರೆ ಎಂದು ಜಯವರ್ಧನೆ ವಿವರಿಸಿದ್ದಾರೆ. "ಕ್ಯಾಚ್ ಹಿಡಿಯುವಾಗ ಸ್ಯಾಂಟ್ನರ್ ತಲೆ ಮತ್ತು ಕುತ್ತಿಗೆ ಕೂಡ ನೆಲಕ್ಕೆ ಬಡಿದಿತ್ತು. ಡ್ರೆಸ್ಸಿಂಗ್ ರೂಮ್‌ಗೆ ಬಂದ ಮೇಲೆ ಅವರಿಗೆ ತಲೆಸುತ್ತು ಮತ್ತು ಅಸ್ವಸ್ಥತೆ ಕಾಣಿಸಿಕೊಂಡಿತು. ಎದ್ದು ನಿಲ್ಲಲೂ ಅವರಿಗೆ ಸಾಧ್ಯವಾಗದ ಕಾರಣ ನಾವು ಕನ್ಕಶನ್ ಸಬ್‌ಸ್ಟಿಟ್ಯೂಟ್‌ಗೆ ಮನವಿ ಮಾಡಿದೆವು. ಮ್ಯಾಚ್ ರೆಫರಿ ಮತ್ತು ಅಂಪೈರ್‌ಗಳು ಪರಿಸ್ಥಿತಿಯನ್ನು ಪರಿಶೀಲಿಸಿ ಶಾರ್ದೂಲ್‌ಗೆ ಅವಕಾಶ ನೀಡಿದರು," ಎಂದು ಜಯವರ್ಧನೆ ತಿಳಿಸಿದ್ದಾರೆ.

ಸ್ಯಾಂಟ್ನರ್ ಗಾಯದ ಸಮಸ್ಯೆ ಮುಂಬೈಗೆ ಬಿಗ್ ಶಾಕ್

ಸದ್ಯ, ಸ್ಯಾಂಟ್ನರ್ ಅವರನ್ನು ಹೆಚ್ಚಿನ ಪರೀಕ್ಷೆಗಳಿಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಕ್ಯಾನಿಂಗ್ ವರದಿ ಬಂದ ನಂತರವೇ ಗಾಯದ ಗಂಭೀರತೆ ತಿಳಿಯಲಿದೆ. ಸ್ಯಾಂಟ್ನರ್ ಬ್ಯಾಟಿಂಗ್ ಸಾಮರ್ಥ್ಯಕ್ಕೆ ಶಾರ್ದೂಲ್ ಸರಿಸಾಟಿಯೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಮಹೇಲ ನಗುತ್ತಲೇ ಉತ್ತರಿಸಿದರು. "ನನ್ನ ಬ್ಯಾಟಿಂಗ್ ಶಾರ್ದೂಲ್‌ಗೆ ಸಮ ಎಂದು ಕೇಳಿದರೆ ಮಿಚೆಲ್‌ಗೆ ಬೇಸರವಾಗಬಹುದು. ಆದರೆ ಆ ಸಮಯದಲ್ಲಿ ನಮಗೆ ಬೇರೆ ದಾರಿ ಇರಲಿಲ್ಲ," ಎಂದು ಅವರು ಹೇಳಿದರು. ಐಪಿಎಲ್ ಇತಿಹಾಸದಲ್ಲೇ ಹೀನಾಯ ಸೋಲು ಕಂಡಿರುವ ಮುಂಬೈ ತಂಡಕ್ಕೆ ಸ್ಯಾಂಟ್ನರ್ ಅನುಪಸ್ಥಿತಿ ಮುಂದಿನ ಪಂದ್ಯಗಳಲ್ಲಿ ದೊಡ್ಡ ಸವಾಲಾಗಲಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಜು ಶತಕ ಸಿಡಿಸುತ್ತಿದ್ದಂತೆಯೇ ತಲೆಕೆಳಗಾದ ಲೆಕ್ಕಾಚಾರ; ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಕೊಹ್ಲಿ, ಗಿಲ್ ಹಿಂದಿಕ್ಕಿದ ಸ್ಯಾಮ್ಸನ್!
ಮುಂಬೈ ಎದುರು ಶತಕ ಚಚ್ಚಿ ಸಿಎಸ್‌ಕೆ ಪರ ಯಾರೂ ಮಾಡಿರದ ಅಪರೂಪದ ದಾಖಲೆ ಬರೆದ ಸಂಜು ಸ್ಯಾಮ್ಸನ್!