
ಮುಂಬೈ (ಮಾ.10) ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಎಲ್ಪಿಜಿ ಪೂರೈಕೆ ಸ್ಥಗಿತಗೊಂಡಿದೆ. ಈಗಾಗಲೇ ಹಲವು ಹೊಟೆಲ್ಗಳು ಮುಚ್ಚಿದೆ. ಇತ್ತ ಕೆಲ ಹೊಟೆಲ್ಗಳಲ್ಲಿ ಶೇಖರಿಸಿಟ್ಟ ಗ್ಯಾಸ್ ಸಿಲಿಂಡರ್ ಖಾಲಿಯಾಗುತ್ತಿದೆ. ಸಮಸ್ಯೆ ತೀವ್ರಗೊಳ್ಳುತ್ತಿದೆ. ಕೇಂದ್ರ ಸರ್ಕಾರ ತುರ್ತು ಸಭೆ ಕರೆದು ಚರ್ಚಿಸಿದೆ. ಆದರೆ ಅಮೆರಿಕ ಯುದ್ಧ ತೀವ್ರಗೊಳಿಸಿದ್ದರೆ, ಇರಾನ್ ಅಷ್ಟೇ ಖಾರವಾಗಿ ಪ್ರತಿಕ್ರಿಯಿಸಿದೆ. ಹೀಗಾಗಿ ಹೊರ್ಮುಜ್ ಜಲಸಂಧಿ ಮೂಲಕ ಯಾವುದೇ ಹಡಗಗಳು ಸರಕು ಸಾಗಾಣೆ ಮಾಡುತ್ತಿಲ್ಲ. ಇದರ ಪರಿಣಾಮ ಹೊಟೆಲ್ ಉದ್ಯಮಕ್ಕೆ ಮಾತ್ರವಲ್ಲ, ಇದೀಗ ಐಪಿಎಲ್ ಟೂರ್ನಿ ಮೇಲೂ ಆವರಿಸಿದೆ. 2026ರ ಐಪಿಎಲ್ ಟೂರ್ನಿ ಆರಂಭವೇ ಅನುಮಾನವಾಗಿದೆ.
ಐಪಿಎಲ್ 2026 ಟೂರ್ನಿಗೆ ಎಲ್ಪಿಜಿ ಗ್ಯಾಸ್ ಸಮಸ್ಯೆ ಎದುರಾಗಿದೆ. ಬಿಸಿಸಿಐ ಸಂಭಾವ್ಯ ವೇಳಾಪಟ್ಟಿಯಂತೆ ಮಾರ್ಚ್ ಅಂತ್ಯದಲ್ಲಿ ಐಪಿಎಲ್ ಟೂರ್ನಿ ಆರಂಭಗೊಳ್ಳಬೇಕು. ಆದರೆ ಮದ್ಯಪ್ರಾಚ್ಯಗಳ ಯುದ್ಧ, ಭಾರತದಲ್ಲಿ ಕೆಲ ರಾಜ್ಯಗಳಲ್ಲಿನ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗದ ಕಾರಣ ವೇಳಾಪಟ್ಟಿ ಪ್ರಕಟಗೊಂಡಿಲ್ಲ. ಇನ್ನು ಮೂರು ವಾರದಲ್ಲಿ ಐಪಿಎಲ್ ಆರಂಭಗೊಳ್ಳಬೇಕು. ಆದರೆ ಗ್ಯಾಸ್ ಸಮಸ್ಯೆ ತೀವ್ರಗೊಳ್ಳುತ್ತಿದೆ. 10 ತಂಡಗಳ ಆಟಗಾರರು ಕನಿಷ್ಠ 10 ಹೊಟೆಲ್ಗಳಲ್ಲಿ ತಂಗಲಿದ್ದಾರೆ. ಆದರೆ ಹಲವು ಪ್ರತಿಷ್ಠಿ ಹೊಟೆಲ್ಗಳು ಗ್ಯಾಸ್ ಸಮಸ್ಯೆ ಎದುರಿಸುತ್ತಿರುವ ಕಾರಣ ಆಟಗಾರರಿಗೆ ಹೊಟೆಲ್ನಲ್ಲಿ ತಂಗಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ.
ಐಪಿಎಲ್ ಫ್ರಾಂಚೈಲಿಯಲ್ಲಿ ಆಟಗಾರರು, ಕೋಚ್, ಸಹಾಯಕ ಸಿಬ್ಬಂದಿ ಸೇರಿದಂತೆ ಒಂದೇ ತಂಡದಲ್ಲಿ 30 ರಿಂದ 50 ಮಂದಿ ಸದಸ್ಯರಿರುತ್ತಾರೆ. ಹೀಗೆ 10 ತಂಡದ ಸದಸ್ಯರು 10 ಹೊಟೆಲ್ಗಳಲ್ಲಿ ತಂಗಲಿದ್ದಾರೆ. ಹೊಟೆಲ್ ಈಗಾಗಲೇ ಗ್ಯಾಸ್ ಸಮಸ್ಯೆ ಎದುರಿಸುತ್ತಿರುವ ಕಾರಣ ಇದು ಕಷ್ಟಸಾಧ್ಯವಾಗಲಿದೆ. ಮದ್ಯಪ್ರಾಚ್ಯದಲ್ಲಿ ಇದೇ ಪರಿಸ್ಥಿತಿ ಮುಂದುವರಿದರೆ, ಭಾರತದಲ್ಲಿ ಐಪಿಎಲ್ 2026 ಟೂರ್ನಿ ಆರಂಭ ವಿಳಂಬವಾಗಲಿದೆ. ಸದ್ಯಕ್ಕೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಕಾಣುತ್ತಿದೆ. ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಒಂದು ಇಂಚು ಹಿಂದೆ ಸರಿದಿಲ್ಲ. ಇರಾನ್ ಪರಮಾಣು ಘಟಕ ವಶಕ್ಕೆ ಮುಂದಾಗಿದ್ದು ಮಾತ್ರವಲ್ಲ ಹೊರ್ಮುಜು ಜಲಸಂಧಿ ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಇತ್ತ ಇರಾನ್ ಖಡಕ್ ಆಗಿ ಒಂದೇ ಒಂದು ತೊಟ್ಟ ತೈಲ ಹೊರಗಡೆ ಹೋಗಲ್ಲ. ನಾವು ನೋಡುತ್ತೇವೆ ಎಂದು ಎಚ್ಚರಿಕೆ ನೀಡಿದೆ.
ಸದ್ಯದ ಪರಿಸ್ಥಿತಿ ಕುರಿತು ಬಿಸಿಸಿಐ ಅವಲೋಕನ ನಡೆಸುತ್ತಿದೆ. ಹೊಟೆಲ್ಗಳಿಂದ ನಮಗೆ ಸ್ಪಷ್ಟ ಮಾಹಿತಿ ಬಂದಿಲ್ಲ. ಯುದ್ಧ ಹಾಗೂ ಅನಿಲ ಪೂರೈಕೆ ಕುರಿತು ಸರ್ಕಾರ ತೆಗೆದುಕೊಳ್ಳುವ ನಿರ್ಧಾರವನ್ನು ಎದುರು ನೋಡುತ್ತಿದ್ದೇವೆ. ಕೆಲವು ದಿನಗಳಲ್ಲಿ ಈ ಕುರಿತು ಸ್ಪಷ್ಟತೆ ಬೇಕಿದೆ. ಬಿಸಿಸಿಐ ಸದ್ಯದ ಬೆಳವಣಿಗ ಕುರಿತು ತೀವ್ರ ನಿಗಾ ಇಟ್ಟಿದೆ ಎಂದು ಐಪಿಎಲ್ ಚೇರ್ಮೆನ್ ಅರುಣ್ ಧುಮಾಲ್ ಹೇಳಿದ್ದಾರೆ. ಐಪಿಎಲ್ ಟೂರ್ನಿ ಕುರಿತು ಕೆಲವೇ ದಿನಗಳಲ್ಲಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕಿದೆ. ತಯಾರಿ ಸೇರಿದಂತೆ ಹಲವು ಕಾರಣಗಳಿಂದ ಕನಿಷ್ಠ 2 ವಾರಗಳ ಅಗತ್ಯವಿದೆ ಎಂದಿದ್ದಾರೆ.
ಕೇವಲ ಗ್ಯಾಸ್ ಮಾತ್ರವಲ್ಲ, ಯುದ್ದ ಹೀಗೆ ಮುಂದುವರಿದರೆ ಪ್ರಯಾಣದ ಸಮಸ್ಯೆ ತೀವ್ರಗೊಳ್ಳಲಿದೆ. ವಿಮಾನ ಸಂಪೂರ್ಣವಾಗಿ ಲಭ್ಯವಿರುವುದಿಲ್ಲ. ವಿದೇಶಿ ಆಟಗಾರರ ಲಭ್ಯತೆ ಕೊರತೆ ಎದುರಾಗವು ಸಾಧ್ಯತೆ ಇದೆ. ಇದು ಫ್ರಾಂಚೈಸಿಗಳಿಗೆ ಹೊಡೆತ ನೀಡಲಿದೆ. ಹೀಗಾಗಿ ಫ್ರಾಂಚೈಸಿಗಳು ಟೂರ್ನಿ ಮುಂದೂಡಲು ಬೇಡಿಕೆ ಇಡುವ ಸಾಧ್ಯತೆ ಇದೆ. ಟಿ20 ವಿಶ್ವಕಪ್ ಟೂರ್ನಿ ಮುಗಿದರೂ ಸೌತ್ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ತಂಡ ಭಾರತದಲ್ಲೇ ಉಳಿಯಬೇಕಾದ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ವಿದೇಶಿ ಕ್ರಿಕೆಟಿಗರು ಆಗಮಿಸುವ ಸಾಧ್ಯತೆಗಳು ಕ್ಷೀಣಸಲಿದೆ. ಇದು ಟೂರ್ನಿಗೆ ಹೊಡೆತ ಬೀಳಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.