
ಬೆಂಗಳೂರು: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಭರ್ಜರಿಯಾಗಿ ಸಾಗುತ್ತಿದೆ. ಈ ನಡುವೆ ಐಪಿಎಲ್ನಲ್ಲಿ ಮಾಟಮಂತ್ರದ ಸದ್ದು ಕೂಡಾ ಜೋರಾಗಿಯೇ ಕೇಳಿ ಬರುತ್ತಿದೆ. ಇತ್ತೀಚೆಗಷ್ಟೇ ಸನ್ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯವೊಂದರಲ್ಲಿ ಸನ್ರೈಸರ್ಸ್ ತಂಡದ ಅಭಿಮಾನಿಯೊಬ್ಬ ಬ್ಲಾಕ್ ಮ್ಯಾಜಿಕ್ ಮಾಡಿ ಸಿಎಸ್ಕೆ ತಂಡದ ಬ್ಯಾಟರ್ ವಿಕೆಟ್ ಉರುಳಿಸಿದಂತೆ ವಿಡಿಯೋವೊಂದು ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಬಿಸಿಸಿಐಗೆ ಪತ್ರವನ್ನು ಬರೆದಿತ್ತು. ಇದೀಗ ಐಪಿಎಲ್ ಮಾಜಿ ಚೇರ್ಮನ್ ಲಲಿತ್ ಮೋದಿ ಐಪಿಎಲ್ನಲ್ಲಿ ನಡೆಯುವ ಬ್ಲಾಕ್ ಮ್ಯಾಜಿಕ್ ಕುರಿತಂತೆ ತುಟಿಬಿಚ್ಚಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದ ವೇಳೆ ನಡೆದಿದೆ ಎನ್ನಲಾದ ವಿಡಿಯೋ ಬಗ್ಗೆ, 'ವ್ಯಕ್ತಿಯೋರ್ವ ನಿಂಬೆ ಹಣ್ಣು ಹಿಡಿದುಕೊಂಡು ವಾಮಾಚಾರ ನಡೆಸಿದ ಬೆನ್ನಲ್ಲೇ ನಮ್ಮ ಆಟಗಾರರ ಪ್ರದರ್ಶನ ದಿಢೀರ್ ಕುಸಿತ ಕಂಡಿತು. ಕ್ರಿಕೆಟ್ ಅನಿಶ್ಚಿತತೆಯ ಆಟ ಎನ್ನುವುದು ನಮಗೆಲ್ಲರಿಗೂ ಗೊತ್ತಿದೆ. ಕ್ರಿಕೆಟ್ ಒಂದು ಕೌಶಲ್ಯ, ತಂತ್ರಗಾರಿಕೆ ಹಾಗೂ ಕ್ರೀಡಾಸ್ಪೂರ್ತಿಯ ಪ್ರದರ್ಶನಕ್ಕೆ ವೇದಿಕೆಯಾಗಬೇಕೇ ಹೊರತು, ಈ ರೀತಿಯ ವಾಮಾಚಾರಕ್ಕೆ ಅವಕಾಶ ಮಾಡಿಕೊಡಬಾರದು. ಬಿಸಿಸಿಐ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಬಿಸಿಸಿಐ ಬಳಿ ಆಗ್ರಹಿಸಿದೆ.
ಇನ್ನು ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಲಲಿತ್ ಮೋದಿ, ಈ ವಿಡಿಯೋ ಒಂದು ರೀತಿ ನಕಲಿಯಂತೆ ಕಾಣಿಸುತ್ತಿದೆ. ಆದರೆ ಐಪಿಎಲ್ನ ಒಂದು ತಂಡದ ಮಾಲೀಕರು ಈ ರೀತಿಯ ಕೃತ್ಯಗಳನ್ನು ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
'ತಂಡದ ಮಾಲೀಕರು ಎದುರಾಳಿ ತಂಡದ ಡ್ರೆಸ್ಸಿಂಗ್ ಕೋಣೆಯಲ್ಲಿ ಹೀಗೆ ಮಾಡಿದ್ದಾರೆಂದು ಎದುರಾಳಿ ತಂಡವನ್ನು ಎಚ್ಚರಿಸಿದ್ದೆ ಎಂದು ನಾನು ಪೋಸ್ಟ್ ಮಾಡಿದ್ದನ್ನು ನೆನಪಿಸಿಕೊಳ್ಳುತ್ತೇನೆ. 2011 ರ ಋತುವಿನಲ್ಲಿ ನಾನು ಎದುರಾಳಿ ತಂಡದ ಮಾಲೀಕರಿಗೆ ಈ ಬಗ್ಗೆ ಎಚ್ಚರಿಕೆ ನೀಡಿದ್ದೆ, ಆಗ ಅದು ಸಂಭವಿಸಿತು ಮತ್ತು ನನಗೆ ಖಚಿತವಾದ ಪುರಾವೆಗಳೊಂದಿಗೆ ಸಾಕ್ಷಿ ಸಿಕ್ಕಿತು. ನನ್ನ ತಂಡ ನಿರ್ಧರಿಸಿದಂತೆ ಈ ಎಲ್ಲಾ ರೀತಿಯ ಚಟುವಟಿಕೆಗಳನ್ನು ಮತ್ತು ಅವುಗಳನ್ನು ಯಾರು ನಡೆಸಿದರು ಎಂಬುದನ್ನು ನಾನು ಚಲನಚಿತ್ರ ಅಥವಾ ಟಿವಿ ಸರಣಿಯಲ್ಲಿ ಬಹಿರಂಗಪಡಿಸುತ್ತೇನೆ ಎಂದು ಲಲಿತ್ ಮೋದಿ ಹೇಳಿದ್ದಾರೆ. ಇದು ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಸಂಚಲನವನ್ನು ಹುಟ್ಟು ಹಾಕಿದೆ.
ಇನ್ನು ಐಪಿಎಲ್ ವಿಚಾರಕ್ಕೆ ಬರುವುದಾದರೇ, ಸದ್ಯ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡವು ಆಡಿದ ಆರು ಪಂದ್ಯಗಳ ಪೈಕಿ ಐದು ಗೆಲುವು ಹಾಗೂ ಒಂದು ರದ್ದಾದ ಪಂದ್ಯ ಸೇರಿದಂತೆ 11 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನೊಂದೆಡೆ ಸನ್ರೈಸರ್ಸ್ ಹೈದರಾಬಾದ್ ತಂಡವು ಆಡಿದ ಆರು ಪಂದ್ಯಗಳಲ್ಲಿ ಮೂರು ಗೆಲುವು ಹಾಗೂ ಮೂರು ಸೋಲು ಸಹಿತ ಆರು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇನ್ನು ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಆಡಿದ 5 ಪಂದ್ಯಗಳಲ್ಲಿ ಒಂದು ಗೆಲುವು ಹಾಗೂ 4 ಸೋಲು ಸಹಿತ ಕೇವಲ ಎರಡು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.