
ಅಹಮದಾಬಾದ್: ಐಪಿಎಲ್ 2026ರ ಕಿರೀಟಕ್ಕಾಗಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ಗುಜರಾತ್ ಟೈಟನ್ಸ್ ತಂಡಗಳು ಸೆಣಸಾಡುತ್ತಿವೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಫೈನಲ್ ಪಂದ್ಯದಲ್ಲಿ ಎರಡೂ ತಂಡಗಳು ತಮ್ಮ ಎರಡನೇ ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟಿವೆ. ಕಳೆದ ವರ್ಷ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ಆರ್ಸಿಬಿ ತನ್ನ ಚೊಚ್ಚಲ ಕಪ್ ಗೆದ್ದಿತ್ತು. ಇನ್ನೊಂದೆಡೆ, 2022ರಲ್ಲಿ ಪದಾರ್ಪಣೆ ಮಾಡಿದ ಸೀಸನ್ನಲ್ಲೇ ಚಾಂಪಿಯನ್ ಆಗಿದ್ದ ಗುಜರಾತ್ ಟೈಟನ್ಸ್, ಐದು ವರ್ಷಗಳಲ್ಲಿ ಮೂರನೇ ಬಾರಿಗೆ ಫೈನಲ್ ಆಡುತ್ತಿದೆ.
ವಾಯುವ್ಯ ಭಾರತದಲ್ಲಿ ಸುರಿಯುತ್ತಿರುವ ಭಾರೀ ಮಳೆ ಮತ್ತು ಬಿರುಗಾಳಿಯಿಂದಾಗಿ, ಚಂಡೀಗಢದಿಂದ ಅಹಮದಾಬಾದ್ಗೆ ಬರಬೇಕಿದ್ದ ಗುಜರಾತ್ ತಂಡದ ಪ್ರಯಾಣ ತಡವಾಗಿತ್ತು. ಈ ಬೆಳವಣಿಗೆಯಿಂದಾಗಿ, ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸುತ್ತಾ ಎಂಬ ಆತಂಕ ಆರ್ಸಿಬಿ ಮತ್ತು ಗುಜರಾತ್ ಅಭಿಮಾನಿಗಳಲ್ಲಿ ಶುರುವಾಗಿದೆ.
ಅಭಿಮಾನಿಗಳಿಗೆ ಖುಷಿ ಕೊಡುವ ವಿಚಾರವೆಂದರೆ, ಅಕ್ಯುವೆದರ್ (AccuWeather) ವರದಿ ಪ್ರಕಾರ ಇಂದು ಅಹಮದಾಬಾದ್ನಲ್ಲಿ ಮಳೆ ಬರುವ ಸಾಧ್ಯತೆ ಕೇವಲ 5% ಮಾತ್ರ. ಆಕಾಶ ಶೇ. 15ರಷ್ಟು ಮೋಡ ಕವಿದ ವಾತಾವರಣದಿಂದ ಕೂಡಿದ್ದರೂ, ಪಂದ್ಯಕ್ಕೆ ಸಂಪೂರ್ಣವಾಗಿ ಅಡ್ಡಿಯಾಗುವ ಸಾಧ್ಯತೆ ಇಲ್ಲ ಎಂದು ಸ್ಥಳೀಯ ಹವಾಮಾನ ವರದಿಗಳು ಹೇಳಿವೆ. ಆದರೂ, ಅನಿರೀಕ್ಷಿತವಾಗಿ ಮಳೆ ಬಂದರೆ ವಿಜೇತರನ್ನು ಹೇಗೆ ನಿರ್ಧರಿಸುತ್ತಾರೆ ನೋಡೋಣ.
ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯಗಳಿಗೆ ರಿಸರ್ವ್ ಡೇ ಇರಲಿಲ್ಲ. ಆದರೆ ಫೈನಲ್ಗಾಗಿ ಬಿಸಿಸಿಐ ಜೂನ್ 1, ಸೋಮವಾರವನ್ನು ರಿಸರ್ವ್ ದಿನವನ್ನಾಗಿ ನಿಗದಿಪಡಿಸಿದೆ. ಒಂದು ವೇಳೆ ಇಂದು ಪಂದ್ಯ ಆರಂಭವಾಗಿ ಮಳೆಯಿಂದ ನಿಂತರೆ, ಸೋಮವಾರದಂದು ಎಲ್ಲಿಗೆ ಆಟ ನಿಂತಿರುತ್ತದೋ ಅಲ್ಲಿಂದಲೇ ಪಂದ್ಯವನ್ನು ಮುಂದುವರಿಸಲಾಗುತ್ತದೆ.
ಒಂದು ವೇಳೆ ರಿಸರ್ವ್ ದಿನವಾದ ಸೋಮವಾರವೂ ಮಳೆಯಿಂದಾಗಿ ಒಂದೂ ಎಸೆತವನ್ನು ಹಾಕಲು ಸಾಧ್ಯವಾಗದೆ ಪಂದ್ಯ ಸಂಪೂರ್ಣ ರದ್ದಾದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗುತ್ತದೆ. ಯಾಕೆಂದರೆ, ಲೀಗ್ ಹಂತದ ಪಾಯಿಂಟ್ಸ್ ಪಟ್ಟಿಯಲ್ಲಿ ಗುಜರಾತ್ ಟೈಟನ್ಸ್ಗಿಂತ ಆರ್ಸಿಬಿ ಮೇಲಿನ ಸ್ಥಾನದಲ್ಲಿತ್ತು. ಇದೇ ನಿಯಮ ಆರ್ಸಿಬಿಗೆ ವರದಾನವಾಗಲಿದೆ. ಕ್ವಾಲಿಫೈಯರ್ 1ರಲ್ಲಿ ಗುಜರಾತ್ ತಂಡವನ್ನು 92 ರನ್ಗಳಿಂದ ಸೋಲಿಸಿ ಆರ್ಸಿಬಿ ನೇರವಾಗಿ ಫೈನಲ್ಗೆ ಪ್ರವೇಶಿಸಿತ್ತು. ಆ ಪಂದ್ಯದಲ್ಲಿ ಸೋತಿದ್ದ ಗುಜರಾತ್, ಕ್ವಾಲಿಫೈಯರ್ 2ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು 7 ವಿಕೆಟ್ಗಳಿಂದ ಮಣಿಸಿ ಫೈನಲ್ಗೆ ಅರ್ಹತೆ ಪಡೆದಿತ್ತು.
ಒಂದು ವೇಳೆ ಆರ್ಸಿಬಿ ಈ ಬಾರಿ ಕಪ್ ಗೆದ್ದರೆ, ನಾಯಕ ರಜತ್ ಪಾಟಿದಾರ್ ಒಂದು ಐತಿಹಾಸಿಕ ದಾಖಲೆ ಬರೆಯಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ನ ಎಂ.ಎಸ್. ಧೋನಿ ಮತ್ತು ಮುಂಬೈ ಇಂಡಿಯನ್ಸ್ನ ರೋಹಿತ್ ಶರ್ಮಾ ನಂತರ, ಐಪಿಎಲ್ನಲ್ಲಿ ಸತತ ಎರಡು ಬಾರಿ ಕಪ್ ಗೆದ್ದ ಮೂರನೇ ನಾಯಕ ಎಂಬ ಹೆಗ್ಗಳಿಕೆಗೆ ಪಾಟಿದಾರ್ ಪಾತ್ರರಾಗಲಿದ್ದಾರೆ. ಸದ್ಯಕ್ಕೆ ಮಳೆಯ ದೊಡ್ಡ ಭೀತಿ ಇಲ್ಲದಿರುವುದರಿಂದ, ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪೂರ್ತಿ 20 ಓವರ್ಗಳ ಪಂದ್ಯವನ್ನು ನೋಡುವ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.