
ಲಂಡನ್ (ಜು.30) ಪೆಹಲ್ಗಾಂ ದಾಳಿ ಬಳಿಕ ಭಾರತ ವಿರುದ್ದ ಕ್ರಿಕೆಟ್ ಸೇರಿ ಎಲ್ಲಾ ವ್ಯವಹಾರಗಳು ಬಂದ್ ಆಗಿದೆ. ಆದರೆ ಇತ್ತೀಚೆಗೆ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಪಾಕಿಸ್ತಾನ ಮುಖಾಮುಖಿಯಾಗುತ್ತಿದೆ. ಇದು ಭಾರಿ ವಿರೋಧಕ್ಕೆ ಕಾರಣವಾಗುತ್ತಿದೆ. ಈ ಬೆಳವಣಿಗೆ ನಡುವೆ ಇದೀಗ ವರ್ಲ್ಡ್ ಚಾಂಪಿಯನ್ಸ್ ಆಫ್ ಲೆಜೆಂಡ್ ಟೂರ್ನಿ( WCL) ಆಡುತ್ತಿರುವ ಯುವರಾಜ್ ಸಿಂಗ್ ನೇತೃತ್ವದ ಭಾರತದ ಹಿರಿಯರ ತಂಡ ಮತ್ತೆ ಹೃದಯ ಗೆದ್ದಿದೆ. ಸದ್ಯ WCL ಟೂರ್ನಿಯಲ್ಲಿ ಭಾರತ ಸೆಮಿಫೈನಲ್ ಪ್ರವೇಶಿಸಿದೆ. ಇತ್ತ ಭಾರತಕ್ಕೆ ಎದುರಾಳಿಯಾಗಿ ಪಾಕಿಸ್ತಾನ ಆಗಮಿಸಿದೆ. ಇದೀಗ ಭಾರತ ಚಾಂಪಿಯನ್ಸ್, ಪಾಕಿಸ್ತಾನ ವಿರುದ್ಧ ಸೆಮಿಫೈನಲ್ ಆಡುವುದಿಲ್ಲ ಎಂದಿದೆ ಎಂದು ಮೂಲಗಳು ಹೇಳಿವೆ.
ಯುವರಾಜ್ ಸಿಂಗ್ ನೇತೃತ್ವದ ಭಾರತದ ಹಿರಿಯರ ತಂಡ ಪಾಕಿಸ್ತಾನ ವಿರುದ್ದ ಸೆಮಿಫೈನಲ್ ಪಂದ್ಯ ಆಡಲು ನಿರಾಕರಿಸಿದೆ. ಗ್ರೂಪ್ ಸ್ಟೇಜ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 13.2 ಓವರ್ಗಳಲ್ಲಿ ಮಣಿಸಿದ ಭಾರತ ಸೆಮಿಫೈನಲ್ ಪ್ರವೇಶಿಸಿತ್ತು. ಆದರೆ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಜೊತೆ ಆಡಲು ಸಾಧ್ಯವಿಲ್ಲ ಎಂದಿದೆ. ಇಷ್ಟೇ ಅಲ್ಲ ಪಂದ್ಯಕ್ಕಿಂತ ದೇಶ ಮುಖ್ಯ ಅನ್ನೋ ಸಂದೇಶ ಸಾರಿದೆ.
WCL ಟೂರ್ನಿಯ ಗ್ರೂಪ್ ಹಂತದಲ್ಲೂ ಭಾರತ ಪಾಕಿಸ್ತಾನ ಮುಖಾಮುಖಿಯಾಗಬೇಕಿತ್ತು. ಆದರೆ ನಾಯಕ ಯುವರಾಜ್ ಸಿಂಗ್ ನೇತೃತ್ವದ ತಂಡ ಪಾಕಿಸ್ತಾನ ವಿರುದ್ಧದ ಪಂದ್ಯ ಬಹಿಷ್ಕರಿಸಿತ್ತು. ಇದೀಗ ಮತ್ತೆ ಸೆಮಿಫೈನಲ್ ಪಂದ್ಯವನ್ನೂ ಬಹಿಷ್ಕರಿಸಿದೆ.
ಭಾರತ ಚಾಂಪಿಯನ್ಸ್ ತಂಡ ಸ್ಟಾರ್ ಆಟಗಾರರನ್ನೊಳಗೊಂಡಿದೆ. ಯುವವಾಜ್ ಸಿಂಗ್ ನಾಯಕನಾಗಿದ್ದರೆ, ಸುರೇಶ್ ರೈನಾ, ಶಿಖರ್ ಧವನ್, ಇರ್ಫಾನ್ ಪಠಾನ್, ಯೂಸೂಫ್ ಪಠಾಣ್, ಸ್ಟುವರ್ಟ್ ಬಿನ್ನಿ ಸೇರಿದಂತೆ ಹಲವು ದಿಗ್ಗಜರು ಈ ತಂಡದಲ್ಲಿ ಆಡುತ್ತಿದ್ದಾರೆ. ಈ ಪೈಕಿ ಶಿಖರ್ ಧವನ್ ಹಾಗೂ ಸುರೇಶ್ ರೈನಾ ಬಹಿರಂಗವಾಗಿ ತಾವು ಪಾಕಿಸ್ತಾನದ ಜೊತೆ ಪಂದ್ಯವಾಡುದಿಲ್ಲ ಎಂದು ಆರಂಭದಲ್ಲೇ ಘೋಷಿಸಿದ್ದರು.
ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಬೇಕಿತ್ತು. ಈ ಪಂದ್ಯ ಜುಲೈ 31ರಂದು ಬರ್ಮಿಂಗ್ಹ್ಯಾಮ್ನಲ್ಲಿ ಆಯೋಜಿಸಲಾಗಿದೆ. ಆದರೆ ಈ ಪಂದ್ಯದಿಂದ ಭಾರತ ಹಿಂದೆ ಸರಿದಿದಿದೆ.
ಸೆಮಿಫೈನಲ್ ಪಂದ್ಯವನ್ನು ಭಾರತ ಬಹಿಷ್ಕರಿಸಿದೆ. ಹೀಗಾಗಿ ಪಾಕಿಸ್ತಾನ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಭಾರತ ಟೂರ್ನಿಯಿಂದ ಹೊರಬೀಳಲಿದೆ. ಇನ್ನು 2ನೇ ಸೆಮಿಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ಹೋರಾಟ ನಡೆಸಲಿದೆ.
ಏಷ್ಯಾಕಪ್ ವೇಳಾಪಟ್ಟಿ ಪ್ರಕಟಗೊಂಡ ಬೆನ್ನಲ್ಲೇ ಬಿಸಿಸಿಐ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಬಿಸಿಸಿಐ ತನ್ನ ಉದ್ದೇಶ ಸಾಧಿಸಲು ಪಾಕಿಸ್ತಾನ ಜೊತೆ ಪಂದ್ಯಕ್ಕೆ ಸಮ್ಮತಿಸಿದೆ. ಬಿಸಿಸಿಐ ನಡೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗುತ್ತಿದೆ. ಈ ವಿರೋಧ, ಆಕ್ರೋಶದ ಬೆನ್ನಲ್ಲೇ ಭಾರತ ಚಾಂಪಿಯನ್ಸ್ ಹಿರಿಯರ ತಂಡ ಮಹತ್ವದ ನಿರ್ಧಾರ ಘೋಷಿಸಿದೆ.
ಟೂರ್ನಿಯ ಪ್ರಮುಖ ಪ್ರಾಯೋಜಕತ್ವದ ಕಂಪನಿ ಈಸ್ ಮೈ ಟ್ರಿಪ್ ಈಗಾಗಲೇ ಭಾರತ ಪಾಕಿಸ್ತಾನ ನಡುವಿನ ಪಂದ್ಯದ ಪ್ರಾಯೋಜಕತ್ವದಿಂದ ಹಿಂದೆ ಸರಿದಿದೆ. ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧದಿಂದ ಭಾರತ ಹಾಗೂ ಪಾಕಿಸ್ತಾನ ಪಂದ್ಯದ ಸ್ಪಾನ್ಸರ್ಶಿಪ್ನಿಂದ ಹಿಂದೆ ಸರಿಯುತ್ತಿರುವುದಾಗಿ ಹೇಳಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.