
ಲಖನೌ(ಫೆ.24): ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಗಳಿಸಲು ಸ್ಪರ್ಧೆ ಹೆಚ್ಚಾಗುತ್ತಿದ್ದು, ಶ್ರೀಲಂಕಾ ವಿರುದ್ಧ ಗುರುವಾರದಿಂದ ಆರಂಭಗೊಳ್ಳಲಿರುವ 3 ಪಂದ್ಯಗಳ ಟಿ20 ಸರಣಿಯಲ್ಲಿ ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಲು ವೇದಿಕೆ ಸಿಗಲಿದೆ. ವಿಂಡೀಸ್ ವಿರುದ್ಧ 3-0 ವೈಟ್ವಾಷ್ ಸಾಧನೆಯೊಂದಿಗೆ ಈ ಸರಣಿಗೆ ಕಾಲಿಡುತ್ತಿರುವ ಭಾರತ, ಶ್ರೀಲಂಕಾ ಮೇಲೂ ಪ್ರಾಬಲ್ಯ ಮೆರೆಯಲು ಎದುರು ನೋಡುತ್ತಿದೆ. ಈ ಸರಣಿಯನ್ನೂ ವೈಟ್ವಾಷ್ ಮಾಡುವುದು ರೋಹಿತ್ ಶರ್ಮಾ(Rohit Sharma) ಪಡೆಗಿರುವ ಗುರಿ.
ವಿರಾಟ್ ಕೊಹ್ಲಿ(Virat Kohli), ರಿಷಭ್ ಪಂತ್(Rishabh Pant), ಕೆ.ಎಲ್.ರಾಹುಲ್ರಂತಹ (KL Rahul) ಹಿರಿಯ ಆಟಗಾರರು ಅಲಭ್ಯರಾಗಲಿದ್ದು ಇಶಾನ್ ಕಿಶನ್(Ishan Kishan), ಋುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್ (Sanju Samson) ಸೇರಿ ಇನ್ನೂ ಕೆಲ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ದೊರೆಯಲಿದೆ. ಇನ್ನು 2 ತಿಂಗಳ ಬಳಿಕ ರವೀಂದ್ರ ಜಡೇಜಾ (Ravindra Jadeja) ತಂಡಕ್ಕೆ ವಾಪಸಾಗಲಿದ್ದು ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಮೂರೂ ವಿಭಾಗಗಳಲ್ಲಿ ಸಮತೋಲನ ಹೆಚ್ಚುವ ನಿರೀಕ್ಷೆ ಇದೆ. ಬುಮ್ರಾ ಬೌಲಿಂಗ್ ಪಡೆಗೆ ಬಲ ತುಂಬಲಿದ್ದಾರೆ.
ಕೊಹ್ಲಿ ಅನುಪಸ್ಥಿತಿಯಲ್ಲಿ ಶ್ರೇಯಸ್ ಅಯ್ಯರ್ (Shreyas Iyer) ಹೆಗಲಿಗೆ ಮಧ್ಯಮ ಕ್ರಮಾಂಕದ ಜವಾಬ್ದಾರಿ ಬೀಳಲಿದ್ದು, ಆಡುವ ಹನ್ನೊಂದರಲ್ಲಿ ಕಾಯಂ ಸ್ಥಾನ ಪಡೆಯಲು ಇದು ಉತ್ತಮ ಅವಕಾಶವೆನಿಸಿದೆ. ವೆಂಕಟೇಶ್ ಅಯ್ಯರ್ ಫಿನಿಶರ್ ಪಾತ್ರದಲ್ಲಿ ಮಿಂಚುತ್ತಿದ್ದು, ದೀಪಕ್ ಚಹರ್ ಅಲಭ್ಯರಾಗಲಿರುವ ಕಾರಣ ಅವರಿಗೆ ಹೆಚ್ಚಿನ ಬೌಲಿಂಗ್ ಅವಕಾಶವೂ ಸಿಗಬಹುದು. ವೆಂಕಿ ತಮ್ಮ ಲಯ ಮುಂದುವರಿಸಿದರೆ, ವಿಶ್ವಕಪ್ ತಂಡಕ್ಕೆ ಆಯ್ಕೆಯಾಗುವುದು ಖಚಿತ.
Ind vs SL ಸೂರ್ಯಕುಮಾರ್ ಯಾದವ್ ಗಾಯಗೊಂಡಿದ್ದು ನಮಗೆ ದೊಡ್ಡ ಹೊಡೆತ: ರೋಹಿತ್ ಶರ್ಮಾ
ಯುವ ಸ್ಪಿನ್ನರ್ ರವಿ ಬಿಷ್ಣೋಯ್ ಭರವಸೆ ಹೆಚ್ಚಿಸಿದ್ದು, ಅವರ ಮೇಲೆ ತಂಡದ ಆಡಳಿತ ಹಾಗೂ ಆಯ್ಕೆಗಾರರು ಕಣ್ಣಿಟ್ಟಿದ್ದಾರೆ. ಜಸ್ಪ್ರೀತ್ ಬುಮ್ರಾ (Jasprit Bumrah) ವಾಪಸಾಗಿದ್ದು, ಭುವನೇಶ್ವರ್ ಕುಮಾರ್ ಹಾಗೂ ಮೊಹಮ್ಮದ್ ಸಿರಾಜ್ ಜೊತೆ ಲಂಕಾ ಬ್ಯಾಟರ್ಗಳಿಗೆ ಕಠಿಣ ಸವಾಲು ನೀಡುವ ವಿಶ್ವಾಸದಲ್ಲಿದ್ದಾರೆ. ಭಾರತ ತಂಡದ ಬೌಲಿಂಗ್ ಅತ್ಯಂತ ಬಲಿಷ್ಠವಾಗಿದೆ ಎಂದಿರುವ ಲಂಕಾ ನಾಯಕ ದಸುನ್ ಶನಕ ತಮ್ಮ ಅಗ್ರ ಕ್ರಮಾಂಕದ ಬ್ಯಾಟರ್ಗಳು ಸಿಡಿದರಷ್ಟೇ ಪ್ರಬಲ ಪೈಪೋಟಿ ನೀಡಲು ಸಾಧ್ಯ ಎಂದು ಸರಣಿ ಆರಂಭಕ್ಕೂ ಮೊದಲೇ ಒಪ್ಪಿಕೊಂಡಿದ್ದಾರೆ. ಜೊತೆಗೆ ತಾರಾ ಸ್ಪಿನ್ನರ್ ವನಿಂದು ಹಸರಂಗ ಸಹ ಹೊರಬಿದ್ದಿರುವ ಕಾರಣ, ಲಂಕಾ ಮೇಲೆ ಭಾರತ ಪ್ರಾಬಲ್ಯ ಮೆರೆದರೆ ಅಚ್ಚರಿಯಿಲ್ಲ.
ಗಾಯಾಳು ಸೂರ್ಯ ಸರಣಿಯಿಂದ ಔಟ್
ವಿಂಡೀಸ್ ವಿರುದ್ಧ 3ನೇ ಟಿ20 ವೇಳೆ ಕೈಬೆರಳಿಗೆ ಗಾಯ ಮಾಡಿಕೊಂಡ ತಾರಾ ಬ್ಯಾಟರ್ ಸೂರ್ಯಕುಮಾರ್ ಯಾದವ್, ಲಂಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ಬೇರಾರಯವ ಆಟಗಾರನನ್ನು ಬಿಸಿಸಿಐ ತಂಡಕ್ಕೆ ಆಯ್ಕೆ ಮಾಡಿಲ್ಲ.
ಹಸರಂಗಗೆ ಮತ್ತೆ ಕೋವಿಡ್: ಸರಣಿಯಿಂದ ಹೊರಕ್ಕೆ
ಆಸ್ಪ್ರೇಲಿಯಾದಲ್ಲಿ ಕೋವಿಡ್ಗೆ ತುತ್ತಾಗಿದ್ದ ಲಂಕಾದ ಸ್ಪಿನ್ನರ್ ವಾನಿಂದು ಹಸರಂಗ ಇನ್ನೂ ಚೇತರಿಸಿಕೊಂಡಿಲ್ಲ. ಭಾರತಕ್ಕೆ ಆಗಮಿಸಿದಾಗ ನಡೆಸಿದ ಪರೀಕ್ಷೆಯ ವರದಿಯೂ ಪಾಸಿಟಿವ್ ಬಂದ ಕಾರಣ ಅವರು ಐಸೋಲೇಷನ್ನಲ್ಲೇ ಮುಂದುವರಿಯಲಿದ್ದು, ಸರಣಿಯಿಂದ ಹೊರಬಿದ್ದಿದ್ದಾರೆ.
ಸಂಭವನೀಯ ಆಟಗಾರರ ಪಟ್ಟಿ
ಭಾರತ: ರೋಹಿತ್ ಶರ್ಮಾ(ನಾಯಕ), ಋುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ರವೀಂದ್ರ ಜಡೇಜಾ, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ರವಿ ಬಿಷ್ಣೋಯ್, ಜಸ್ಪ್ರೀತ್ ಬುಮ್ರಾ.
ಲಂಕಾ: ಗುಣತಿಲಕ, ನಿಸ್ಸಾಂಕ, ಮೆಂಡಿಸ್, ಅಸಲಂಕ, ಶಾನಕ(ನಾಯಕ), ಬಿನುರ ಫೆನಾಂರ್ಡೋ, ಕರುಣರತ್ನೆ, ಚಮೀರ, ಜಯವಿಕ್ರಮ, ತೀಕ್ಷಣ, ಕುಮಾರ.
ಪಂದ್ಯ ಆರಂಭ: ಸಂಜೆ 7ಕ್ಕೆ,
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಪಿಚ್ ರಿಪೋರ್ಟ್
ಏಕನಾ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಸ್ನೇಹಿ ಎನಿಸಿದ್ದು, ಇಬ್ಬನಿ ಬೀಳುವ ನಿರೀಕ್ಷೆ ಇರುವ ಕಾರಣ ಟಾಸ್ ಗೆಲ್ಲುವ ತಂಡ ಮೊದಲು ಫೀಲ್ಡ್ ಮಾಡುವ ಸಾಧ್ಯತೆ ಹೆಚ್ಚು. ಇಲ್ಲಿ ಮೊದಲು ಬ್ಯಾಟ್ ಮಾಡುವ ತಂಡದ ಸರಾಸರಿ ಮೊತ್ತ 150-160 ರನ್ಗಳಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.