Ind vs SA: ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ

Suvarna News   | Asianet News
Published : Jan 21, 2022, 01:38 PM ISTUpdated : Jan 21, 2022, 01:52 PM IST
Ind vs SA: ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ

ಸಾರಾಂಶ

* ಭಾರತ - ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಎರಡನೇ ಏಕದಿನ ಪಂದ್ಯ ಆರಂಭ * ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ * ಈಗಾಗಲೇ ಏಕದಿನ ಸರಣಿಯಲ್ಲಿ 1-0 ಅಂತರದಲ್ಲಿ ಮುಂದಿರುವ ದಕ್ಷಿಣ ಆಫ್ರಿಕಾ ತಂಡ

ಪಾರ್ಲ್‌(ಜ.21): ಭಾರತ ಹಾಗೂ ದಕ್ಷಿಣ ಆಫ್ರಿಕಾ(India vs South Africa) ತಂಡಗಳ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ (Team India) ನಾಯಕ ಕೆ.ಎಲ್. ರಾಹುಲ್ (KL Rahul) ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಈಗಾಗಲೇ ಮೊದಲ ಪಂದ್ಯದಲ್ಲಿ ಆಘಾತಕಾರಿ ಸೋಲು ಕಂಡಿರುವ ಕೆ.ಎಲ್‌. ರಾಹುಲ್ ನೇತೃತ್ವದ ಟೀಂ ಇಂಡಿಯಾ ಪಾಲಿಗೆ ಎರಡನೇ ಪಂದ್ಯವು ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿದೆ. 

ಹೌದು, ಇಲ್ಲಿನ ಬೋಲ್ಯಾಂಡ್ ಪಾರ್ಕ್‌ನಲ್ಲಿ ಆರಂಭವಾದ ಎರಡನೇ ಏಕದಿನ ಪಂದ್ಯದಲ್ಲಿ ನಿರೀಕ್ಷೆಯಂತೆಯೇ ಭಾರತ ತಂಡದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದ ತಂಡವೇ ಎರಡನೇ ಪಂದ್ಯದಲ್ಲೂ ಕಣಕ್ಕಿಳಿದಿದೆ. ಆದರೆ ದಕ್ಷಿಣ ಆಫ್ರಿಕಾ ತಂಡದಲ್ಲಿ ಒಂದು ಬದಲಾವಣೆಯನ್ನು ಮಾಡಲಾಗಿದ್ದು, ಎಡಗೈ ವೇಗಿ ಮಾರ್ಕೊ ಯಾನ್ಸನ್‌ಗೆ (Marco Jansen) ವಿಶ್ರಾಂತಿ ನೀಡಲಾಗಿದ್ದು, ಯಾನ್ಸೆನ್ ಬದಲಿಗೆ ಸಿಸಾಂದ ಮಂಗಲಗೆ ತಂಡದಲ್ಲಿ ಮಣೆಹಾಕಲಾಗಿದೆ.

ಮೊದಲ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಆರಂಭದಲ್ಲೇ ಮಲಾನ್‌, ಕ್ವಿಂಟನ್ ಡಿ ಕಾಕ್‌(Quinton de Kock), ಮಾರ್ಕ್‌ರಮ್ ಅವರ ವಿಕೆಟ್ ಕಳೆದುಕೊಂಡಿತಾದರೂ ಆ ಬಳಿಕ ನಾಯಕ ತೆಂಬ ಬವುಮಾ (Temba Bavuma) ಹಾಗೂ ರಾಸ್ಸಿ ವ್ಯಾನ್ ಡರ್ ಡುಸೇನ್ (Rassie van der Dussen) ಆಕರ್ಷಕ ದ್ವಿಶತಕದ ಜತೆಯಾಟವಾಡುವ ಮೂಲಕ ಹರಿಣಗಳ ಪಡೆ ಬೃಹತ್ ಮೊತ್ತ ಕಲೆಹಾಕಲು ನೆರವಾಗಿದ್ದರು. ತೆಂಬ ಬವುಮಾ ಹಾಗೂ ವ್ಯಾನ್‌ ಡರ್ ಡುಸೇನ್ ಇಬ್ಬರು ಭರ್ಜರಿ ಶತಕ ಚಚ್ಚಿ ಮಿಂಚುವ ಮೂಲಕ ಭಾರತೀಯ ಬೌಲರ್‌ಗಳನ್ನು ಕಾಡಿದ್ದರು.

Ind vs SA: ದಕ್ಷಿಣ ಆಫ್ರಿಕಾ ಎದುರು ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ಟೀಂ ಇಂಡಿಯಾ.!

ಇನ್ನು ಸವಾಲಿನ ಗುರಿ ಬೆನ್ನತ್ತಿದ್ದ ಭಾರತ ತಂಡವು ಎಚ್ಚರಿಕೆಯ ಆರಂಭ ಪಡೆಯಿತಾದರೂ, ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್(Shreyas Iyer), ರಿಷಭ್ ಪಂತ್ (Rishabh Pant) ಹಾಗೂ ವೆಂಕಟೇಶ್ ಅಯ್ಯರ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಲು ವಿಫಲವಾಗಿದ್ದರು. ಒಂದು ಹಂತದಲ್ಲಿ 30 ಓವರ್ ಅಂತ್ಯದ ವೇಳೆಗೆ ದಕ್ಷಿಣ ಆಫ್ರಿಕಾ ತಂಡವು 3 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿತ್ತು. ಇನ್ನು ಟೀಂ ಇಂಡಿಯಾ ಕೂಡಾ 30 ಓವರ್ ಅಂತ್ಯದ ವೇಳೆಗೆ 3 ವಿಕೆಟ್‌ ಕಳೆದುಕೊಂಡು 156 ರನ್ ಬಾರಿಸಿತ್ತು. ಶಿಖರ್ ಧವನ್, ವಿರಾಟ್ ಕೊಹ್ಲಿ (Virat Kohli) ಅರ್ಧಶತಕ ಬಾರಿಸಿದರಾದರೂ, ಉತ್ತಮ ಆರಂಭವನ್ನು ಮೂರಂಕಿ ಮೊತ್ತವಾಗಿ ಪರಿವರ್ತಿಸಲು ವಿಫಲವಾಗಿದ್ದರು. ಇನ್ನು ಕೊನೆಯಲ್ಲಿ ಶಾರ್ದೂಲ್ ಠಾಕೂರ್ (Shardul Thakur) ಅಜೇಯ ಅರ್ಧಶತಕ ಬಾರಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

ಎರಡನೇ ಏಕದಿನ ಪಂದ್ಯಕ್ಕೆ ತಂಡಗಳು ಹೀಗಿವೆ ನೋಡಿ

ಭಾರತ: ಕೆ.ಎಲ್. ರಾಹುಲ್‌(ನಾಯಕ), ಶಿಖರ್ ಧವನ್‌, ವಿರಾಟ್ ಕೊಹ್ಲಿ, ರಿಷಭ್ ಪಂತ್(ವಿಕೆಟ್ ಕೀಪರ್)‌, ಶ್ರೇಯಸ್ ಅಯ್ಯರ್‌, ವೆಂಕಟೇಶ್ ಅಯ್ಯರ್, ರವಿಚಂದ್ರನ್ ಅಶ್ವಿನ್‌, ಶಾರ್ದೂಲ್‌, ಭುವಿ/ದೀಪಕ್‌, ಬೂಮ್ರಾ, ಚಹಲ್‌.

ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್‌, ಜೆ ಮಲಾನ್‌, ತೆಂಬ ಬವುಮಾ(ನಾಯಕ), ಏಯ್ಡನ್ ಮಾರ್ಕ್ರಮ್‌, ರಾಸ್ಸಿ ವ್ಯಾನ್ ಡರ್ ಡುಸ್ಸೆನ್‌, ಡೇವಿಡ್ ಮಿಲ್ಲರ್‌, ಆಂಡಿಲೆ ಫೆಲುಕ್ವಾಯೋ, ಸಿಸಾಂದ ಮಂಗಲ, ಕೇಶವ್‌ ಮಹರಾಜ್, ಲುಂಗಿ ಎನ್‌ಗಿಡಿ, ತಬ್ರೀಜ್ ಶಮ್ಸಿ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ, ಚುನಾವಣಾ ಫಲಿತಾಂಶ ಪ್ರಕಟ