Ind vs SA: ಭಾರತ ಎದುರು ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಆಯ್ಕೆ

Suvarna News   | Asianet News
Published : Jan 19, 2022, 01:40 PM ISTUpdated : Jan 19, 2022, 01:53 PM IST
Ind vs SA: ಭಾರತ ಎದುರು ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಆಯ್ಕೆ

ಸಾರಾಂಶ

* ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಆಯ್ಕೆ * ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿರುವ ಕೆ ಎಲ್ ರಾಹುಲ್ * ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಆಲ್ರೌಂಡರ್ ವೆಂಕಟೇಶ್ ಅಯ್ಯರ್

ಪಾರ್ಲ್‌(ಜ.19): ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬ ಬವುಮಾ (Temba Bavuma) ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಉಭಯ ತಂಡಗಳಲ್ಲೂ ಸಾಕಷ್ಟು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡದಲ್ಲಿ ಕ್ರಮವಾಗಿ ವೆಂಕಟೇಶ್ ಅಯ್ಯರ್ ಹಾಗೂ ಮಾರ್ಕೊ ಯಾನ್ಸೆನ್‌ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ.

ಇಲ್ಲಿನ ಬೋಲ್ಯಾಂಡ್‌ ಮೈದಾನದಲ್ಲಿ ಆರಂಭವಾದ ಟೆಸ್ಟ್ ಪಂದ್ಯದಲ್ಲಿ ನಿರೀಕ್ಷೆಯಂತೆಯೇ ಕಗಿಸೋ ರಬಾಡಗೆ (Kagiso Rabada) ವಿಶ್ರಾಂತಿ ನೀಡಿರುವುದರಿಂದ ರಬಾಡ ಬದಲಿಗೆ ಮಾರ್ಕೊ ಯಾನ್ಸೆನ್‌ಗೆ (Marco Jansen) ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ. ಭಾರತ ಎದುರಿನ ಟೆಸ್ಟ್ ಸರಣಿಯಲ್ಲಿ ಮಾರಕ ದಾಳಿ ನಡೆಸುವ ಮೂಲಕ ಗಮನ ಸೆಳೆದಿದ್ದ ಯುವ ಎಡಗೈ ವೇಗಿ ಇದೀಗ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಇನ್ನು ಭಾರತ ತಂಡದ ಪರ ಆಲ್ರೌಂಡರ್‌ ವೆಂಕಟೇಶ್ ಅಯ್ಯರ್ (Venkatesh Iyer) ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಇದರ ಜತೆಗೆ ಲೆಗ್‌ ಸ್ಪಿನ್ನರ್ ಯುಜುವೇಂದ್ರ ಚಹಲ್‌, ಶ್ರೇಯಸ್‌ ಅಯ್ಯರ್ ನಿರೀಕ್ಷೆಯಂತೆಯೇ ತಂಡ ಕೂಡಿಕೊಂಡಿದ್ದಾರೆ. ಕಳೆದೆರಡು ವರ್ಷಗಳಿಂದ ಶತಕ ಬಾರಿಸಲು ವಿಫಲವಾಗಿರುವ ವಿರಾಟ್ ಕೊಹ್ಲಿಯ (Virat Kohli) ಮೇಲೆ ಎಲ್ಲರ ಚಿತ್ತ ನೆಟ್ಟಿದೆ. 

ಇನ್ನುಳಿದಂತೆ ಅನುಭವಿ ಆಫ್‌ಸ್ಪಿನ್ನರ್‌ ರವಿಚಂದ್ರನ್ ಅಶ್ವಿನ್ (Ravichandran Ashwin) ಕಳೆದ ನಾಲ್ಕು ವರ್ಷಗಳ ಬಳಿಕ ಏಕದಿನ ಕ್ರಿಕೆಟ್‌ಗೆ ಕಮ್‌ಬ್ಯಾಕ್‌ ಮಾಡಿದ್ದಾರೆ. ಇನ್ನು ಮತ್ತೋರ್ವ ಸ್ಪಿನ್ನರ್ ಯುಜುವೇಂದ್ರ ಚಹಲ್ ಹರಿಣಗಳ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ. ಯುಎಇ ಚರಣದಲ್ಲಿ ಸಿಕ್ಕ ಅವಕಾಶವನ್ನು ಭರ್ಜರಿಯಾಗಿಯೇ ಬಳಸಿಕೊಂಡು ಭಾರತ ಟಿ20 ತಂಡಕ್ಕೆ ಎಂಟ್ರಿಕೊಟ್ಟಿರುವ ಆಲ್ರೌಂಡರ್ ವೆಂಕಟೇಶ್ ಅಯ್ಯರ್, ಇದೀಗ ಏಕದಿನ ಕ್ರಿಕೆಟ್ ತಂಡಕ್ಕೂ ಪಾದಾರ್ಪಣೆ ಮಾಡಿದ್ದಾರೆ. ಹಾರ್ದಿಕ್‌ ಪಾಂಡ್ಯ ಅನುಪಸ್ಥಿತಿಯಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ವೆಂಕಟೇಶ್ ಅಯ್ಯರ್ ತುದಿಗಾಲಿನಲ್ಲಿ ನಿಂತಿದ್ದಾರೆ.

Ind vs SA: ದಕ್ಷಿಣ ಆಫ್ರಿಕಾ ಎದುರಿನ ಮೊದಲ ಏಕದಿನ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಪ್ರಕಟ

ರೋಹಿತ್‌ ಶರ್ಮಾ (Rohit Sharma) ಗಾಯಗೊಂಡಿರುವ ಕಾರಣ, ಟೀಂ ಇಂಡಿಯಾದ(Team India) ಏಕದಿನ ಮತ್ತು ಟಿ-20 ತಂಡದ ಉಪನಾಯಕ ಕೆ.ಎಲ್‌.ರಾಹುಲ್‌ಗೆ ತಂಡವನ್ನು ಮುನ್ನಡೆಸುವ ಅವಕಾಶ ದೊರೆತಿದೆ. ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಏಕದಿನ ಸರಣಿಯನ್ನು ಮುನ್ನಡೆಸುವ ಅವಕಾಶ ರಾಹುಲ್‌ಗೆ ದೊರೆತಿದ್ದು, ಹೆಚ್ಚಿನ ನಿರೀಕ್ಷೆಯಿದೆ. ಇನ್ನು ಡೆತ್ ಓವರ್‌ ಸ್ಪೆಷಲಿಸ್ಟ್ ಖ್ಯಾತಿಯ ಜಸ್ಪ್ರೀತ್ ಬುಮ್ರಾ ಉಪನಾಯಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. 

ಪಿಚ್ ಮಾಹಿತಿ: ಅಂಗಳದಲ್ಲಿ ಇದುವರೆಗೂ 13 ಪಂದ್ಯಗಳಾಗಿದ್ದು, ಮೊದಲು ಬ್ಯಾಟ್‌ ಮಾಡಿದ ತಂಡಗಳು 7 ಬಾರಿ ಜಯ ಸಾಧಿಸಿವೆ. ಸ್ಪಿನ್ನರ್‌ಗಳಿಗೂ ಅಂಗಳ ಹೆಚ್ಚು ನೆರವಾಗಲಿದೆ. 3 ಪಂದ್ಯಗಳಿಂದ 7 ವಿಕೆಟ್‌ ಉರುಳಿಸಿರುವ ಅನಿಲ್‌ ಕುಂಬ್ಳೆ ಈ ಅಂಗಳದಲ್ಲಿ ಹೆಚ್ಚು ವಿಕೆಟ್‌ ಪಡೆದ ಗೌರವಕ್ಕೆ ಪಾತ್ರರಾಗಿದ್ದಾರೆ.

ತಂಡಗಳು ಹೀಗಿವೆ ನೋಡಿ

ಭಾರತ ಕ್ರಿಕೆಟ್ ತಂಡ: 
ಶಿಖರ್ ಧವನ್‌, ಕೆ ಎಲ್‌ ರಾಹುಲ್‌(ನಾಯಕ), ಶ್ರೇಯಸ್ ಅಯ್ಯರ್‌, ರಿಷಭ್ ಪಂತ್ ವೆಂಕಟೇಶ್‌/ಸೂರ್ಯಕುಮಾರ್‌, ರವಿಚಂದ್ರನ್ ಅಶ್ವಿನ್‌, ಭುವನೇಶ್ವರ್ ಕುಮಾರ್‌, ದೀಪಕ್‌ ಚಹರ್‌/ಶಾರ್ದೂಲ್‌, ಜಸ್ಪ್ರೀತ್ ಬುಮ್ರಾ, ಯುಜುವೇಂದ್ರ ಚಹಲ್‌

ದಕ್ಷಿಣ ಆಫ್ರಿಕಾ ತಂಡ: 
ಮಾರ್ಕ್ರಮ್‌, ಕ್ವಿಂಟನ್‌ ಡಿ ಕಾಕ್‌, ಜೆ. ಮಲಾನ್, ತೆಂಬಾ ಬವುಮಾ(ನಾಯಕ), ರಾಸ್ಸಿ ವ್ಯಾನ್ ಡರ್ ಡುಸ್ಸೆನ್‌, ಕೈಲ್‌ ವರೈನ್‌, ಡೇವಿಡ್‌ ಮಿಲ್ಲರ್‌, ಫೆಹ್ಲಕ್ವೇವೊ, ಕೇಶವ್ ಮಹಾರಾಜ್‌, ಮಾರ್ಕೊ ಯಾನ್ಸೆನ್‌ , ಲುಂಗಿ ಎನ್‌ಗಿಡಿ, ತಬ್ರೀಜ್ ಶಮ್ಸಿ
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IPL Mini Auction 2026: 1355 ಆಟಗಾರರಲ್ಲಿ 350 ಪ್ಲೇಯರ್ಸ್ ಶಾರ್ಟ್‌ಲಿಸ್ಟ್! ಇಲ್ಲಿದೆ ಹರಾಜಿನ ಕಂಪ್ಲೀಟ್ ಡೀಟೈಲ್ಸ್
ಸಡನ್ನಾಗಿ ಸೋಶಿಯಲ್‌ ಮೀಡಿಯಾದಲ್ಲಿ ಸನ್ನಿ ಲಿಯೋನ್‌ ಫೋಟೋ ಹಂಚಿಕೊಂಡ ಅಶ್ವಿನ್‌, ಇದಕ್ಕಿದೆ ಐಪಿಎಲ್ ಲಿಂಕ್‌!