ಬೆಂಗಳೂರು ಕ್ರಿಕೆಟ್ ಫ್ಯಾನ್ಸ್‌ಗೆ ನಿರಾಸೆ; ಮಹಿಳಾ ವಿಶ್ವಕಪ್‌ ಪಂದ್ಯಗಳು ಚಿನ್ನಸ್ವಾಮಿ ಸ್ಟೇಡಿಯಂನಿಂದ ಬಹುತೇಕ ಔಟ್!

Published : Aug 13, 2025, 04:04 PM IST
M Chinnaswamy Stadium

ಸಾರಾಂಶ

ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಕೇರಳದ ತಿರುವನಂತಪುರಕ್ಕೆ ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ. ಕಾಲ್ತುಳಿತ ಘಟನೆಯ ನಂತರ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಕೆಎಸ್‌ಸಿಎಗೆ ಭಾರೀ ಮುಜುಗರ ಉಂಟಾಗಿದೆ.

ಬೆಂಗಳೂರು: ಮುಂದಿನ ತಿಂಗಳು ನಡೆಯಲಿರುವ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಪಂದ್ಯಗಳು ಬೆಂಗಳೂರಿನಿಂದ ಎತ್ತಂಗಡಿಯಾಗಿರುವುದು ಖಚಿತವಾಗಿದೆ. ಪಂದ್ಯಗಳನ್ನು ಕೇರಳದ ತಿರುವನಂತಪುರಂಗೆ ಸ್ಥಳಾಂತರಿಸುವ ಸಾಧ್ಯತೆ ಇದ್ದು ಒಂದೆರಡು ದಿನಗಳಲ್ಲಿಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಅಧಿಕೃತವಾಗಿ ಘೋಷಿಸಲಿದೆ ಎಂದು ತಿಳಿದುಬಂದಿದೆ.

ಒಂದು ದುರಂತ ಘಟನೆ 50 ವರ್ಷ ಹಳೆಯ, ವಿಶ್ವದ ಐಕಾನಿಕ್ ಕ್ರೀಡಾಂಗಣಗಳಲ್ಲಿ ಒಂದೆನಿಸಿರುವ ಚಿನ್ನಸ್ವಾಮಿ ಕ್ರೀಡಾಂಗಣವನ್ನು ದುಃಸ್ಥಿತಿಗೆ ತಳ್ಳಿದೆ. ಸೆ.30ರಂದು ಉದ್ಘಾಟನಾ ಪಂದ್ಯ, ಸೆಮಿಫೈನಲ್, ಫೈನಲ್‌ ಸೇರಿ ಒಟ್ಟು ಪಂದ್ಯಗಳನ್ನು ಬೆಂಗಳೂರಲ್ಲಿ ನಡೆಸಲು ಐಸಿಸಿ ಯೋಜಿಸಿತ್ತು. ಆದರೆ, ಆದರೆ ಆರ್ ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತದಿಂದ 11 ಮಂದಿ ಮೃತಪಟ್ಟು, ಪ್ರಕರಣ ಕೋರ್ಟ್‌ನಲ್ಲಿರುವ ಕಾರಣ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸಲು ಪೊಲೀಸ್ ಇಲಾಖೆ ಅನುಮತಿ ನೀಡಿಲ್ಲ ಎಂದು ತಿಳಿದುಬಂದಿದೆ.

ಆಗಸ್ಟ್‌ 9ರೊಳಗೆ ಅನುಮತಿ ಪಡೆಯಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ)ಗೆ ಬಿಸಿಸಿಐ ಸೂಚಿಸಿತ್ತು. ಅದು ಸಾಧ್ಯವಾಗದಿದ್ದಾಗ ಎರಡು ದಿನ ಹೆಚ್ಚುವರಿ ಸಮಯಾವಕಾಶ ನೀಡಲಾಯಿತು. ಆದರೆ, ಅನುಮತಿ ಸಿಗದ ಕಾರಣ ಪಂದ್ಯಗಳನ್ನು ಬೆಂಗಳೂರಿನಿಂದ ಸ್ಥಳಾಂತರಿಸಲು ನಿರ್ಧರಿಸಿರುವುದಾಗಿ ಬಿಸಿಸಿಐ ಸೋಮವಾರ ರಾತ್ರಿ ಕೆಎಸ್‌ಸಿಎಗೆ ತಿಳಿಸಿತು ಎಂದು ತಿಳಿದುಬಂದಿದೆ.

ಕಾಲ್ತುಳಿತ ಘಟನೆ ಬಳಿಕ ಕೆಎಸ್ ಸಿಎ ಮಹಾರಾಣಿ ಟ್ರೋಫಿ, ಮಹಾರಾಜ ಟ್ರೋಫಿ ಕೂಡ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಸ್ಥಳಾಂತರ ಗೊಂಡಿತ್ತು. ಇದೀಗ ಜಾಗತಿಕ ಮಟ್ಟದ ಟೂರ್ನಿಯ ಪಂದ್ಯಗಳೂ ಸ್ಥಳಾಂತರಗೊಳ್ಳುವುದರೊಂದಿಗೆ ಕೆಎಸ್‌ಎಗೆ ಭಾರೀ ಮುಜುಗರ ಉಂಟಾಗಿದೆ. ಮಹಿಳಾ ಏಕದಿನ ವಿಶ್ವಕಪ್ ಸೆ.30ಕ್ಕೆ ಆರಂಭಗೊಂಡು, ನ.2ರ ವರೆಗೂ ನಡೆಯಲಿದೆ.

ಖಾಲಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಸಲು ಕೆಎಸ್‌ಸಿಎ ಮನವಿ?

ಐಸಿಸಿ ಆಯೋಜಿಸುವ ಯಾವುದೇ ಟೂರ್ನಿಯಾದರೂ, ಟೂರ್ನಿ ಆರಂಭಕ್ಕೆ ಒಂದು ತಿಂಗಳು ಬಾಕಿ ಇದ್ದಾಗ ಕ್ರೀಡಾಂಗಣವನ್ನು ಆಯೋ ಜಕರಿಗೆ ಬಿಟ್ಟುಕೊಡಬೇಕು. ಹೀಗಾಗಿ, ಅಗತ್ಯ ಅನುಮತಿ ಪಡೆಯಲು ಕೆಎಸ್‌ಸಿಎಗೆ ಆ.11ರ ಗಡುವು ನೀಡಲಾಗಿತ್ತು. ಕೆಎಸ್‌ಎ ಅಧಿಕಾರಿಗಳು ಪೊಲೀಸರಿಂದ ಅನುಮತಿ ಪಡೆಯಲು ಸತತ ಪ್ರಯತ್ನ ನಡೆಸಿದ್ದಾಗಿ ಗೊತ್ತಾಗಿದೆ. ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸುತ್ತೇವೆ, ಅನುಮತಿ ಕೊಡಿ ಎಂದು ಮನವಿ ಸಲ್ಲಿಸಲಾಗಿತ್ತು ಎನ್ನಲಾಗಿದೆ. ಆದರೆ ಪೊಲೀಸರು ಅನುಮತಿ ನೀಡಿಲ್ಲ.

ರಾಷ್ಟ್ರೀಯ ಮಾಧ್ಯಮವೊಂದು ಕೆಎಸ್‌ಸಿಎ ಅಧಿಕಾರಿಯೊಬ್ಬರು ತನ್ನ ಪ್ರತಿನಿಧಿಯೊಂದಿಗೆ ಮಾತನಾಡಿ ಬೇಸರ ವ್ಯಕ್ತಪಡಿಸಿದ್ದಾಗಿ ವರದಿ ಮಾಡಿದೆ. 'ಚಿನ್ನಸ್ವಾಮಿ ಕ್ರೀಡಾಂಗಣ ಈವರೆಗೂ 750ಕ್ಕೂ ಹೆಚ್ಚು ಪಂದ್ಯಗಳನ್ನು ಯಶಸ್ವಿಯಾಗಿ ಆಯೋಜಿಸಿದೆ. 15 ಆವೃತ್ತಿಗಳ ಐಪಿಎಲ್ ಪಂದ್ಯಗಳಿಗೆ ವೇದಿಕೆಯಾಗಿದೆ. ವಿಶ್ವದ ಜನಪ್ರಿಯ ಕ್ರೀಡಾಂಗಣಗಳಲ್ಲಿ ಒಂದೆನಿಸಿದೆ. ಕಾಲ್ತುಳಿತ ಘಟನೆ ನಡೆದಿದ್ದು ಖಾಸಗಿ ಕಾರ್ಯಕ್ರಮವೊಂದರಲ್ಲಿ ಹೊರತು ಪಂದ್ಯದ ವೇಳೆ ಅಲ್ಲ ಎಂದು ಪೊಲೀಸರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ' ಎಂದು ಕೆಎಸ್‌ಸಿಎ ಅಧಿಕಾರಿ ಹೇಳಿರುವುದಾಗಿ ರಾಷ್ಟ್ರೀಯ ಮಾಧ್ಯಮವು ತನ್ನ ವರದಿಯಲ್ಲಿ ತಿಳಿಸಿದೆ. ಕೆಎಸ್‌ಸಿಎ ಅಧಿಕಾರಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಸೋದರ ಸಂಸ್ಥೆ 'ಕನ್ನಡಪ್ರಭ' ಸಂಪರ್ಕಿಸಲು ಪ್ರಯತ್ನಿಸಿತಾದರೂ, ಯಾರೊಬ್ಬರೂ ಕರೆ ಸ್ವೀಕರಿಸಲಿಲ್ಲ.

ಸೆಪ್ಟಂಬರ್‌ ಬಳಿಕವೂ ಬಿಸಿಸಿಐ ಅಧ್ಯಕ್ಷ ಆಗಿ ಇರ್ತಾರಾ ಬಿನ್ನಿ?

ಬೆಂಗಳೂರು: ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ ಸಂಸತ್ತಲ್ಲಿ ಪಾಸಾದ ಬೆನ್ನಲ್ಲೇ ಬಿಸಿಸಿಐ ಅಧ್ಯಕ್ಷ ರೋಜರ್‌ ಬಿನ್ನಿ, ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ವಾರ್ಷಿಕ ಸಾಮಾನ್ಯ ಸಭೆ ಬಳಿಕವೂ ಹುದ್ದೆಯಲ್ಲಿ ಮುಂದುವರಿಯುತ್ತಾರಾ ಎನ್ನುವ ಕುತೂಹಲ ಮೂಡಿದೆ. ಮಸೂದೆಯಲ್ಲಿ ಕ್ರೀಡಾ ಸಂಸ್ಥೆಗಳ ಪದಾಧಿಕಾರಿಗಳು 75 ವರ್ಷ ವಯಸ್ಸಿನವರೆಗೂ ಹುದ್ದೆಯಲ್ಲಿ ಇರಬಹುದಾಗಿದೆ. 70 ವರ್ಷದ ಬಿನ್ನಿ, ಮತ್ತೊಂದು ಅವಧಿಗೆ ಅಧಿಕಾರದಲ್ಲಿ ಇರಲಿದ್ದಾರೆಯೇ ಎನ್ನುವುದನ್ನು ರಾಜ್ಯ ಕ್ರಿಕೆಟ್ ಸಂಸ್ಥೆಗಳು ನಿರ್ಧರಿಸಲಿವೆ ಎಂದು ತಿಳಿದುಬಂದಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ
ಕಾಂಗರೂ ನಾಡಲ್ಲಿ ಶತಕದ ಬರ ನೀಗಿಸಿಕೊಂಡ ಜೋ ರೂಟ್! ಕೊನೆಗೂ ತಪ್ಪಿದ ಹೇಡನ್ 'ಬೆತ್ತಲೆ ಸೇವೆ'!