
ಬೆಂಗಳೂರು: ನಾಯಕ ತಿಲಕ್ ವರ್ಮಾ 2ನೇ ಇನ್ನಿಂಗ್ಸ್ನಲ್ಲೂ ಆಕರ್ಷಕ ಬ್ಯಾಟಿಂಗ್ ನಡೆಸಿ, ದುಲೀಪ್ ಟ್ರೋಫಿ ಫೈನಲ್ಗೆ ದಕ್ಷಿಣ ವಲಯ ತಂಡವನ್ನು ಕೊಂಡೊಯ್ದರು. ಉತ್ತರ ವಲಯ ವಿರುದ್ಧದ ಸೆಮಿಫೈನಲ್ನಲ್ಲಿ ಬುಧವಾರ ದಕ್ಷಿಣ ವಲಯ 7 ವಿಕೆಟ್ಗಳ ಸುಲಭ ಜಯ ದಾಖಲಿಸಿತು.
ಗೆಲುವಿಗೆ 181 ರನ್ ಗುರಿ ಬೆನ್ನತ್ತಿದ ದಕ್ಷಿಣ ವಲಯ, ಪಂದ್ಯದ ಕೊನೆಯ ದಿನ ಮೊದಲೆರಡು ಅವಧಿಗಳಲ್ಲೇ ಗುರಿ ತಲುಪಿತು. ತಿಲಕ್ ಔಟಾಗದೆ 51 ರನ್ ಗಳಿಸಿದರೆ, ಕರ್ನಾಟಕದ ಆರ್.ಸ್ಮರಣ್ ಔಟಾಗದೆ 32 ರನ್ ಕೊಡುಗೆ ನೀಡಿದರು. ಇವರಿಬ್ಬರ ನಡುವೆ ಮುರಿಯದ 4ನೇ ವಿಕೆಟ್ಗೆ 80 ರನ್ ಜೊತೆಯಾಟ ಮೂಡಿಬಂತು. ಈ ಜೊತೆಯಾಟ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. 2ನೇ ಅವಧಿಯ ಕೊನೆ ವೇಳೆಗೆ ದಕ್ಷಿಣ ವಲಯ 3 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿ, ಫೈನಲ್ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿತು.
ಮೊದಲ ಇನ್ನಿಂಗ್ಸ್ನಲ್ಲಿ ಅಮೋಘ 116 ರನ್ ಗಳಿಸಿ, ದಕ್ಷಿಣ ವಲಯ 117 ರನ್ಗಳ ದೊಡ್ಡ ಮುನ್ನಡೆ ಸಾಧಿಸಲು ಕಾರಣರಾಗಿದ್ದ ತಿಲಕ್, 2ನೇ ಇನ್ನಿಂಗ್ಸ್ನಲ್ಲೂ ತಾಳ್ಮೆಯುತ ಆಟ ಪ್ರದರ್ಶಿಸಿದರು. ತಂಡ 102ಕ್ಕೆ 3 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್ಗಿಳಿದ ತಿಲಕ್, ನಿರಾಯಾಸವಾಗಿ ತಂಡವನ್ನು ಜಯದ ಗೆರೆ ದಾಟಿಸಿದರು.
ಕುಸಿತ: 3ನೇ ದಿನದಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 256 ರನ್ ಗಳಿಸಿದ್ದ ಉತ್ತರ ವಲಯ, ಆ ಮೊತ್ತಕ್ಕೆ ಇನ್ನು 41 ರನ್ ಸೇರಿಸಲಷ್ಟೇ ಶಕ್ತವಾಯಿತು. 297 ರನ್ಗೆ ಆಲೌಟ್ ಆಯಿತು. ಅನ್ಶುಲ್ ಕಾಂಬೋಜ್ರ 36 ರನ್ (29 ಎಸೆತ), ತಂಡ 180 ರನ್ ಮುನ್ನಡೆ ಸಾಧಿಸಲು ನೆರವಾಯಿತು.
2ನೇ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ವಲಯ ಮೊದಲ ವಿಕೆಟ್ಗೆ 64 ರನ್ ಜೊತೆಯಾಟ ಪಡೆದರೂ, 65 ರನ್ಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ ತಿಲಕ್ ಹಾಗೂ ಸ್ಮರಣ್ರ ತಾಳ್ಮೆಯುತ ಆಟ ತಂಡಕ್ಕೆ ಗೆಲುವು ತಂದುಕೊಟ್ಟಿತು.
ಸ್ಕೋರ್: ಉತ್ತರ ವಲಯ 197 ಹಾಗೂ 297 (ಅನ್ಶುಲ್ 36, ನಿದೀಶ್ 5-56, ಶ್ರೇಯಸ್ 2-86), ದಕ್ಷಿಣ ವಲಯ 312 ಹಾಗೂ 182/3 (ತಿಲಕ್ 51*, ಜಗದೀಶನ್ 43, ಮುಷ್ತಾಕ್ 2-55)
ಕೇಂದ್ರ ವಲಯವನ್ನು ಮೂರೇ ದಿನದಲ್ಲಿ ಸೋಲಿಸಿ ಫೈನಲ್ಗೇರಿದ್ದ ಪೂರ್ವ ವಲಯ ವಿರುದ್ಧ ದಕ್ಷಿಣ ವಲಯ ಪ್ರಶಸ್ತಿಗಾಗಿ ಸೆಣಸಲಿದೆ. ಸೆ.6ರಿಂದ ಚೆನ್ನೈನಲ್ಲಿ ಪಂದ್ಯ ನಡೆಯಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.