ಬೀದಿಯಲ್ಲಿ ಓಡಾಡೋ ಪುಂಡರ ಮೇಲೆ ಕಿಡಿಕಾರಿದ ವಿರಾಟ್ ಕೊಹ್ಲಿ..!

By Suvarna NewsFirst Published Mar 27, 2020, 8:18 PM IST
Highlights

ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ 21 ದಿನಗಳ ಲಾಕ್‌ಡೌನ್‌ ಅನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸ್ವಾಗತಿಸಿದ್ದಾರೆ. ಇನ್ನು ದೇಶದ ಜನರು ಹೊಣೆಯರಿತು ವರ್ತಿಸಬೇಕು ಎಂದಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ. 

ನವದೆಹಲಿ(ಮಾ.27): ಕೊರೋನಾ ವೈರಸ್‌ನಿಂದ ಪಾರಾಗುವ ನಿಟ್ಟಿನಲ್ಲಿ ದೇಶದ ಎಲ್ಲಾ ಜನರು 21 ದಿನಗಳ ಕಾಲ ಮನೆಯಲ್ಲಿಯೇ ಇರಿ. ಸರ್ಕಾರ ನೀಡಿರುವ ಲಾಕ್‌ಡೌನ್ ಕರೆಯನ್ನು ಎಲ್ಲರೂ ಗಂಭೀರವಾಗಿ ತೆಗೆದುಕೊಂಡು ತಮ್ಮ ಜವಾಬ್ದಾರಿಯಿಂದ ವರ್ತಿಸಿ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಕೊರೋನಾ ವೈರಸ್ ವಿರುದ್ಧ ಹೋರಾಟ; ಸರ್ಕಾರಕ್ಕೆ 50 ಲಕ್ಷ ರೂ ನೀಡಿದ ಸಚಿನ್ ತೆಂಡುಲ್ಕರ್!

ಗಂಭೀರ ಸಮಸ್ಯೆಯಾಗಿ ಪರಿಣಮಿಸಿರುವ ಕೊರೋನಾ ವೈರಸ್ ತಡೆಗಟ್ಟುವ ಮೊದಲ ಹೆಜ್ಜೆಯಾಗಿ 21 ದಿನಗಳ ಕಾಲ ಜನರು ಮನೆಯಲ್ಲೇ ಇರಲು ದೇಶದ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ. ಇಲ್ಲದಿದ್ದರೆ ಇಡೀ ದೇಶ 21 ವರ್ಷ ಹಿಂದೆ ಹೋಗಲಿದೆ. ಹೀಗಾಗಿ ಎಲ್ಲರೂ ತಮಗೆ ತಾವೇ ಮನೆಯ ಮುಂದೆ ಲಕ್ಷ್ಮಣ ರೇಖೆ ಎಳೆದುಕೊಳ್ಳಬೇಕು ಎಂದಿದ್ದರು.

ಕೊರೋನಾ ಹತೋಟಿಗೆ CM ಮಹತ್ವದ ನಿರ್ಧಾರ, EMIಗೆ ವಿನಾಯಿತಿ ನೀಡಿದ ಸರ್ಕಾರ; ಮಾ.27ರ ಟಾಪ್ 10 ಸುದ್ದಿ!

ಇದೀಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ 110 ಸೆಂಕೆಡ್‌ಗಳ ವಿಡಿಯೋ ಶೇರ್ ಮಾಡಿಕೊಂಡಿದ್ದು, ಸುಖಾಸುಮ್ಮನೆ ರಸ್ತೆಯಲ್ಲಿ ತಿರುಗಾಡುವ ಜನರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನಾದರು ಪರಿಸ್ಥಿತಿಯ ಗಂಭೀರತೆ ಅರ್ಥ ಮಾಡಿಕೊಳ್ಳಿ. ದೇಶಕ್ಕೆ ನಮ್ಮೆಲ್ಲರ ಬೆಂಬಲ ಹಾಗೂ ಪ್ರಾಮಾಣಿಕತೆಯ ಅವಶ್ಯಕತೆಯಿದೆ ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿ ನಿರ್ಧಾರ ಸ್ವಾಗತಿಸಿದ ನಾಯಕ ವಿರಾಟ್ ಕೊಹ್ಲಿ!

ನಾನು ಕೆಲವು ದಿನಗಳಿಂದ ನೋಡುತ್ತಲೇ ಇದ್ದೇನೆ. ಕೆಲವೊಂದಷ್ಟು ಜನರು ಗುಂಪು ಸೇರುತ್ತಿದ್ದಾರೆ. ಸುಮ್ಮನೆ ರಸ್ತೆಯಲ್ಲಿ ಅಡ್ಡಾಡುತ್ತಿದ್ದಾರೆ. ಇವರೆಲ್ಲಾ ಈ ಕೊರೋನಾ ವೈರಸ್‌ಅನ್ನು ಲಘುವಾಗಿ ಪರಿಗಣಿಸಿದ್ದಾರೆ ಎನಿಸುತ್ತಿದೆ. ಇದು ನಾವಂದುಕೊಂಡಷ್ಟು ಸುಲಭದ ವೈರಸ್ ಅಲ್ಲ ಎನ್ನುವುದನ್ನು ನೆನಪಿಡಿ. ನಾನು ನಿಮ್ಮಲ್ಲಿ ಮನವಿ ಮಾಡಿಕೊಳ್ಳುವುದಿಷ್ಟೇ, ದಯವಿಟ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಸರ್ಕಾರ ನೀಡುವ ಸಲಹೆ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ. ನೀವು ಕಾಳಜಿಯಿಂದ ಇರದಿದ್ದರೆ ನಿಮ್ಮ ಕುಟುಂಬವೇ ಸಂಕಷ್ಟಕ್ಕೆ ತುತ್ತಾಗಬಹುದು. ಆಗ ನಿಮಗೇನು ಅನಿಸುತ್ತದೆ ಎಂದು ಪ್ರಶ್ನಿಸಿದ್ದಾರೆ.

Please wake up to the reality and seriousness of the situation and take responsibility. The nation needs our support and honesty. pic.twitter.com/ZvOb0qgwIV

— Virat Kohli (@imVkohli)

ನಮ್ಮ ಸರ್ಕಾರ, ವೈದ್ಯಕೀಯ ತಜ್ಞರು ಮಾರಣಾಂತಿಕ ವೈರಸ್ ತೊಡೆದುಹಾಕಲು ಸಾಕಷ್ಟು ಶ್ರಮಿಸುತ್ತಿದ್ದಾರೆ. ದೇಶದ ನಾಗರೀಕರಾದ ನಾವೆಲ್ಲ ನಮ್ಮ ಜವಾಬ್ದಾರಿಯನ್ನರಿತು ನಡೆದುಕೊಂಡರೆ ಮಾತ್ರ ಕೊರೋನಾ ವೈರಸ್‌ನಿಂದ ಪಾರಾಗಬಹುದು. ಸರ್ಕಾರ ಏನೇ ಹೇಳಿದರು ಅದನ್ನು ತಪ್ಪದೇ ಪಾಲಿಸಿ ಎಂದು ವಿರಾಟ್ ಕೊಹ್ಲಿ ಮನವಿ ಮಾಡಿಕೊಂಡಿದ್ದಾರೆ.

click me!