
ಕೊಲಂಬೊ: 2010ರಿಂದ 2023ರವರೆಗೆ ಭಾರತ ಟೆಸ್ಟ್ ತಂಡದ ಪ್ರಮುಖ ಆಟಗಾರನಾಗಿದ್ದ ಚೇತೇಶ್ವರ್ ಪೂಜಾರ, ವಿಶ್ವದ ಘಟಾನುಘಟಿ ವೇಗದ ಬೌಲರ್ಗಳನ್ನು ಎದುರಿಸಿದ ಅನುಭವಿ. ಸದ್ಯ ಕ್ರಿಕೆಟ್ನಿಂದ ನಿವೃತ್ತಿ ಪಡೆದು ಕಾಮೆಂಟೇಟರ್ ಆಗಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಭಾರತ-ಶ್ರೀಲಂಕಾ ಟೆಸ್ಟ್ ಸರಣಿಯಲ್ಲಿ ವೀಕ್ಷಕ ವಿವರಣೆ ನೀಡುತ್ತಿರುವ ಪೂಜಾರ, ಇದೀಗ ಭಾರತದ ಸಾರ್ವಕಾಲಿಕ ಶ್ರೇಷ್ಠ ಐವರು ವೇಗದ ಬೌಲರ್ಗಳ ಪಟ್ಟಿಯೊಂದನ್ನು ಆಯ್ಕೆ ಮಾಡಿದ್ದಾರೆ.
ಅಚ್ಚರಿ ಅಂದ್ರೆ, ಸದ್ಯದ ಟೀಂ ಇಂಡಿಯಾದ ಪ್ರಮುಖ ವೇಗಿಗಳಾದ ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿಗೆ ಪೂಜಾರ ಅವರ ಟಾಪ್ 5 ಲಿಸ್ಟ್ನಲ್ಲಿ ಸ್ಥಾನ ಸಿಕ್ಕಿಲ್ಲ. ಆದರೂ, ಇವರಿಬ್ಬರೂ ತಮ್ಮ ಟಾಪ್ 10 ಪಟ್ಟಿಯಲ್ಲಿ ಖಂಡಿತಾ ಇರುತ್ತಾರೆ ಎಂದು ಪೂಜಾರ ಹೇಳಿದ್ದಾರೆ.
ಕಪಿಲ್ ದೇವ್, ಜಹೀರ್ ಖಾನ್, ಜಾವಗಲ್ ಶ್ರೀನಾಥ್, ಜಸ್ಪ್ರೀತ್ ಬುಮ್ರಾ ಮತ್ತು ಇಶಾಂತ್ ಶರ್ಮಾ ಅವರನ್ನು ಪೂಜಾರ ತಮ್ಮ ಮೊದಲ ಐದು ಸ್ಥಾನಗಳಲ್ಲಿ ಹೆಸರಿಸಿದ್ದಾರೆ. ಮೊಹಮ್ಮದ್ ಸಿರಾಜ್ ನಿಮ್ಮ ಟಾಪ್ 20 ಭಾರತೀಯ ವೇಗಿಗಳ ಪಟ್ಟಿಯಲ್ಲಿದ್ದಾರಾ ಎಂದು ಕೇಳಿದಾಗ, 'ಖಂಡಿತವಾಗಿಯೂ ಇದ್ದಾರೆ' ಎಂದು ಪೂಜಾರ ಉತ್ತರಿಸಿದರು. ಹಾಗಾದರೆ ಟಾಪ್ 10ರಲ್ಲಿದ್ದಾರಾ? ಎಂಬ ಪ್ರಶ್ನೆಗೆ, 'ಹೌದು, ಹಾಗಂತ ಹೇಳಬಹುದು. ವಿದೇಶ ಹಾಗೂ ಭಾರತದಲ್ಲಿ ಅವರು ನೀಡಿರುವ ಪ್ರದರ್ಶನ ಮತ್ತು ತಂಡಕ್ಕಾಗಿ ಅವರ ಕಠಿಣ ಶ್ರಮವನ್ನು ಪರಿಗಣಿಸಿದರೆ, ಸಿರಾಜ್ ಖಂಡಿತವಾಗಿಯೂ ಟಾಪ್ 10ರಲ್ಲಿ ಸ್ಥಾನ ಪಡೆಯುತ್ತಾರೆ' ಎಂದು ಪೂಜಾರ ಸ್ಪಷ್ಟಪಡಿಸಿದರು. ಆದರೆ, ಸಿರಾಜ್ ಟಾಪ್ 5 ಬೌಲರ್ಗಳಲ್ಲಿ ಸ್ಥಾನ ಪಡೆಯುತ್ತಾರಾ ಎಂಬ ಪ್ರಶ್ನೆಗೆ, 'ಬಹುಶಃ ಇಲ್ಲ' ಎಂದು ಹೇಳಿ ತಮ್ಮ ಟಾಪ್ 5 ಪಟ್ಟಿಯನ್ನು ಹಂಚಿಕೊಂಡರು.
ಭಾರತ ಪರ ಅತಿಹೆಚ್ಚು ಟೆಸ್ಟ್ ವಿಕೆಟ್ ಕಬಳಿಸಿದ ವೇಗದ ಬೌಲರ್ ಪಟ್ಟಿಯಲ್ಲಿ ಮಾಜಿ ನಾಯಕ ಕಪಿಲ್ ದೇವ್ ಮೊದಲ ಸ್ಥಾನದಲ್ಲಿದ್ದಾರೆ. ಹರ್ಯಾಣದ ಹರಿಕೇನ್ ಖ್ಯಾತಿಯ ಕಪಿಲ್ ದೇವ್ 434 ವಿಕೆಟ್ ಕಬಳಿಸಿದ್ದಾರೆ. ಇನ್ನು ಇಶಾಂತ್ ಶರ್ಮಾ ಹಾಗೂ ಜಹೀರ್ ಖಾನ್ ತಲಾ 311 ವಿಕೆಟ್ ಕಬಳಿಸುವ ಮೂಲಕ ಎರಡು ಹಾಗೂ ಮೂರನೇ ಸ್ಥಾನದಲ್ಲಿದ್ದಾರೆ. ಇನ್ನು ಕನ್ನಡಿಗ ಜಾವಗಲ್ ಶ್ರೀನಾಥ್ 236 ವಿಕೆಟ್ ಕಬಳಿಸಿ ನಾಲ್ಕನೇ ಸ್ಥಾನದಲ್ಲಿದ್ದರೇ, ಜಸ್ಪ್ರೀತ್ ಬುಮ್ರಾ 234 ವಿಕೆಟ್ಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.
ಟೀಂ ಇಂಡಿಯಾ ಅನುಭವಿ ವೇಗಿ ಮೊಹಮ್ಮದ್ ಶಮಿ 229 ವಿಕೆಟ್ ಕಬಳಿಸಿದ್ದಾರೆ. ಆದರೆ ಕಳೆದ ಕೆಲ ವರ್ಷಗಳಿಂದ ಭಾರತ ಟೆಸ್ಟ್ ತಂಡದಲ್ಲಿ ಶಮಿ ಸ್ಥಾನ ಪಡೆಯಲು ವಿಫಲವಾಗುತ್ತಿದ್ದಾರೆ.
ಇನ್ನು, ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಶ್ರೀಲಂಕಾ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಫಾಲೋ-ಆನ್ಗೆ ಸಿಲುಕಿ ಎರಡನೇ ಇನ್ನಿಂಗ್ಸ್ ಆರಂಭಿಸಿದ ಶ್ರೀಲಂಕಾ, ಭಾರತೀಯ ಬೌಲರ್ಗಳಿಗೆ ಇನ್ನಿಲ್ಲದಂತೆ ಕಾಡಿತು. 264 ಎಸೆತಗಳಲ್ಲಿ ಅಜೇಯ 133 ರನ್ ಗಳಿಸಿದ ಸೋನಲ್ ದಿನುಷಾ, ಲಂಕಾ ತಂಡಕ್ಕೆ ಸೋಲಿನಿಂದ ಪಾರು ಮಾಡಿದರು. ಕೊನೆಯಲ್ಲಿ ಲಹಿರು ಕುಮಾರ (90 ಎಸೆತಗಳಲ್ಲಿ 2 ರನ್) ತೋರಿದ ಪ್ರತಿರೋಧವೂ ನಿರ್ಣಾಯಕವಾಯಿತು. ಭಾರತದ ಪರ ರವೀಂದ್ರ ಜಡೇಜಾ ಮತ್ತು ಮಾನವ್ ಸುತಾರ್ ತಲಾ ಮೂರು ವಿಕೆಟ್ ಪಡೆದರು.
ಇದಕ್ಕೂ ಮೊದಲು, ಭಾರತದ ಮೊದಲ ಇನ್ನಿಂಗ್ಸ್ 503 ರನ್ಗಳಿಗೆ ಉತ್ತರವಾಗಿ ಶ್ರೀಲಂಕಾ 290 ರನ್ಗಳಿಗೆ ಆಲೌಟ್ ಆಗಿತ್ತು. ಮೊದಲ ಇನ್ನಿಂಗ್ಸ್ನಲ್ಲೂ ದಿನುಷಾ (103) ಶತಕ ಸಿಡಿಸಿದ್ದರು. ಭಾರತದ ಪರ ಪ್ರಸಿದ್ಧ್ ಕೃಷ್ಣ ಮತ್ತು ಮಾನವ್ ಸುತಾರ್ ತಲಾ ಮೂರು ವಿಕೆಟ್ ಕಿತ್ತಿದ್ದರು. ಈ ಡ್ರಾದೊಂದಿಗೆ, ಎರಡು ಪಂದ್ಯಗಳ ಸರಣಿಯನ್ನು ಭಾರತ 1-0 ಅಂತರದಿಂದ ಗೆದ್ದುಕೊಂಡಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.