ಆಸೀಸ್‌ ನಾಡಲ್ಲಿ ಟೆಸ್ಟ್‌ ದಿಗ್ವಿಜಯ; ಟೀಂ ಇಂಡಿಯಾಗೆ ಭರ್ಜರಿ ಬೋನಸ್ ಘೋಷಿಸಿದ ದಾದಾ..!

Published : Jan 19, 2021, 02:20 PM ISTUpdated : Jan 19, 2021, 03:46 PM IST
ಆಸೀಸ್‌ ನಾಡಲ್ಲಿ ಟೆಸ್ಟ್‌ ದಿಗ್ವಿಜಯ; ಟೀಂ ಇಂಡಿಯಾಗೆ ಭರ್ಜರಿ ಬೋನಸ್ ಘೋಷಿಸಿದ ದಾದಾ..!

ಸಾರಾಂಶ

ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿ ಗೆದ್ದ ಟೀಂ ಇಂಡಿಯಾಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬಂಪರ್ ಬಹುಮಾನ ಘೋಷಿಸಿದ್ದಾರೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

ನವದೆಹಲಿ(ಜ.19): ಅಜಿಂಕ್ಯ ರಹಾನೆ ನೇತೃತ್ವದ ಟೀಂ ಇಂಡಿಯಾ ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯನ್ನು 2-1 ಅಂತರದಲ್ಲಿ ಜಯಿಸುತ್ತಿದ್ದಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಟೀಂ ಇಂಡಿಯಾಗೆ 5 ಕೋಟಿ ರುಪಾಯಿ ಬಹುಮಾನ ಘೋಷಿಸಿದೆ. 

"

ಬ್ರಿಸ್ಬೇನ್‌ನ ಗಾಬಾ ಮೈದಾನದಲ್ಲಿ ಆಸ್ಟ್ರೇಲಿಯಾ ತಂಡವು ಭಾರತಕ್ಕೆ ಗೆಲ್ಲಲು 328 ರನ್‌ಗಳ ಸವಾಲಿನ ಗುರಿ ನೀಡಿತ್ತು. ಅಲ್ಲದೇ ಗಾಬಾ ಮೈದಾನದಲ್ಲಿ ಆಸ್ಟ್ರೇಲಿಯಾ ತಂಡವು ಕಳೆದ 32 ವರ್ಷಗಳಿಂದಲೂ ಸೋಲಿನ ಕಹಿ ಉಂಡಿರಲಿಲ್ಲ. ಹೀಗಾಗಿ ಟೀಂ ಇಂಡಿಯಾ ಈ ಟೆಸ್ಟ್‌ ಪಂದ್ಯವನ್ನು ಗೆಲ್ಲುವುದು ಸುಲಭವಲ್ಲ ಎಂದೇ ಕ್ರಿಕೆಟ್ ಪಂಡಿತರು ಲೆಕ್ಕಾಚಾರ ಹಾಕಿದ್ದರು. ಆದರೆ ರಿಷಭ್‌ ಪಂತ್‌, ಶುಭ್‌ಮನ್‌ ಗಿಲ್‌ ಸ್ಫೋಟಕ ಆಟ ಹಾಗೂ ಚೇತೇಶ್ವರ್ ಪೂಜಾರ ತಾಳ್ಮೆಯ ಬ್ಯಾಟಿಂಗ್‌ ನೆರವಿನಿಂದ 3 ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿದೆ. 

ರಹಾನೆ ಪಡೆ ಈ ಸಾಧನೆ ಮಾಡುತ್ತಿದ್ದಂತೆ ಟ್ವೀಟ್‌ ಮಾಡಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಇದೊಂದು ಅತ್ಯದ್ಭುತ ಗೆಲುವು. ಆಸ್ಟ್ರೇಲಿಯಾಗೆ ಹೋಗಿ ಟೆಸ್ಟ್ ಸರಣಿ ಗೆಲ್ಲುವುದು ಅಂದರೆ ಅದು ಭಾರತದ ಕ್ರಿಕೆಟ್‌ ಇತಿಹಾಸದಲ್ಲಿ ಸದಾಕಾಲ ನೆನಪಿನಲ್ಲಿ ಉಳಿಯುವ ಕ್ಷಣ. ಹೀಗಾಗಿ ಭಾರತ ತಂಡಕ್ಕೆ ಬಿಸಿಸಿಐ 5 ಕೋಟಿ ರುಪಾಯಿ ಬೋನಸ್‌ ಘೋಷಿಸುತ್ತಿದೆ. ಆಸ್ಟ್ರೇಲಿಯಾ ಟೆಸ್ಟ್ ಸರಣಿ ಗೆಲುವಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆಸೀಸ್‌ ಪ್ರವಾಸದಲ್ಲಿರುವ ಎಲ್ಲರಿಗೂ ಅಭಿನಂದನೆಗಳು ಎಂದು ದಾದಾ ಟ್ವೀಟ್ ಮಾಡಿದ್ದಾರೆ.

ಬ್ರಿಸ್ಬೇನ್‌ನಲ್ಲಿ ಟೀಂ ಇಂಡಿಯಾ ದಿಗ್ವಿಜಯ; ಬಾರ್ಡರ್‌-ಗವಾಸ್ಕರ್‌ ಸರಣಿ ಕೈವಶ

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳ ಪೈಕಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಜಯಿಸಿದ್ದವು. ಇನ್ನು ಸಿಡ್ನಿ ಟೆಸ್ಟ್ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯವಾಗಿತ್ತು. ಬ್ರಿಸ್ಬೇನ್ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಟೆಸ್ಟ್ ಸರಣಿ ಕೈವಶ ಮಾಡಿಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಚ್‌ನಲ್ಲಿ ಕೂತು ಬೇರೆಯವರ ಆಟ ನೋಡೋದು ಸುಲಭ ಅಲ್ಲ -ಒಂದೂವರೆ ವರ್ಷದ ತಪ್ಪಸ್ಸಿಗೆ ಪಡಿಕ್ಕಲ್ ಭಾವುಕ
ಮಹಾತ್ಮನಿಗೆ ಐಸಿಸಿ ವಿಶೇಷ ಗೌರವ.. 2027ರ ಏಕದಿನ ವಿಶ್ವಕಪ್‌ಗೆ ದಿನಾಂಕ ನಿಗದಿ..!