'ದೀಪ ಬೆಳಗಲು ಹೇಳಿದ ಪ್ರಧಾನಿ ಮೋದಿ ಕರೆ ಕ್ರೂರ ಹಾಸ್ಯದಂತಿದೆ'

By Kannadaprabha NewsFirst Published Apr 4, 2020, 12:12 PM IST
Highlights

ಕೊರೋನಾ ವೈರಸ್ ನಿಂದ ಸೋಂಕಿತರ ಮತ್ತು ಮೃತರಾದವರ ಸಂಖ್ಯೆ ದಿನನಿತ್ಯ ಅಪಾಯಕಾರಿಯಾಗಿ ಏರಿಕೆಯಾಗುತ್ತಲೇ ಇದೆ: ಎಸ್ಯುಸಿಐ ಜಿಲ್ಲಾ ಕಾರ್ಯದರ್ಶಿ ಕೆ. ಸೋಮಶೇಖರ್| ಪ್ರಧಾನಿ ಮಹತ್ವದ ಘೋಷಣೆ ಮಾಡುತ್ತಾರೆ ಎಂದು ದೇಶದ ಜನಸಾಮಾನ್ಯರು ನಿರೀಕ್ಷಿಸಿದ್ದರು|

ಯಾದಗಿರಿ(ಏ.04): ಏಪ್ರಿಲ್ 9 ರಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಟಾರ್ಚ್/ದೀಪ ಹಚ್ಚುವ ಪ್ರಧಾನಿ ಮೋದಿಯವರ ಕರೆ ನಿಜಕ್ಕೂ ಕ್ರೂರ ಹಾಸ್ಯ ಎಂದು ಎಸ್ಯುಸಿಐ ಕಮ್ಯುನಿಷ್ಟ್ ಪಕ್ಷ ಟೀಕಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಎಸ್ಯುಸಿಐ ಜಿಲ್ಲಾ ಕಾರ್ಯದರ್ಶಿ ಕೆ. ಸೋಮಶೇಖರ್, ಕೊರೋನಾ ವೈರಸ್ ನಿಂದ ಸೋಂಕಿತರ ಮತ್ತು ಮೃತರಾದವರ ಸಂಖ್ಯೆ ದಿನನಿತ್ಯ ಅಪಾಯಕಾರಿಯಾಗಿ ಏರಿಕೆಯಾಗುತ್ತಲೇ ಇದೆ. ಅವಶ್ಯಕ ಪರೀಕ್ಷಾ ಕಿಟ್‌ಗಳು, ಪರೀಕ್ಷಾ ಕೇಂದ್ರಗಳು, ಆಸ್ಪತ್ರೆಗಳಲ್ಲಿ ಅವಶ್ಯಕವಾದ ವೆಂಟಿಲೇಟರ್ ಮತ್ತಿತರ ವೈದ್ಯಕೀಯ ಉಪಕರಣಗಳು, ವೈದ್ಯರಿಗೆ, ನರ್ಸ್ ಗಳಿಗೆ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಬೇಕಾದ ಸುರಕ್ಷಾ ಸಾಧನಗಳ ಕೊರತೆಯು ಬಯಲಾಗುತ್ತಲೇ ಇದೆ.

ದೀಪ ಬೆಳಗಿಸಿದರೆ ಕೊರೋನಾ ವಾಸಿಯಾಗುತ್ತಾ: ಸಿದ್ದು ವ್ಯಂಗ್ಯ

ಇನ್ನೊಂದೆಡೆ, ಮೊದಲೇ ಹಸಿವೆಯಿಂದ ಪ್ರತಿನಿತ್ಯ ಬಡವರು ಜೀವ ಕಳೆದುಕೊಳ್ಳುವ ನಮ್ಮ ದೇಶದಲ್ಲಿ ಏಕಾಏಕಿ ಲಾಕ್‌ಡೌನ್‌ ಕಾರಣದಿಂದಾಗಿ ಅದು ಇನ್ನಷ್ಟೂ ಉಲ್ಬಣಗೊಂಡು ಕೋಟಿಗಟ್ಟಲೆ ಕೆಲಸ ಕಳೆದುಕೊಂಡ ಕಾರ್ಮಿಕರು, ದಿನಗೂಲಿ ಕಾರ್ಮಿಕರು, ವಲಸೆ ಕಾರ್ಮಿಕರು, ರಿಕ್ಷಾ ಚಾಲಕರು, ಬೀದಿ ಬದಿ ವ್ಯಾಪಾರಿಗಳು, ಮನೆಗೆಲಸದವರು ಮುಂತಾದವರು ಹಸಿವೆಯಿಂದ ನರಳುವಂತಾಗಿದೆ.

ಇಂತಹ ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ ಏಪ್ರಿಲ್ 3 ರಂದು ಪ್ರಧಾನಿಗಳು ಮಹತ್ವವಾದ ಘೋಷಣೆ ಮಾಡುತ್ತಾರೆ ಎಂದು ದೇಶದ ಜನಸಾಮಾನ್ಯರು ನಿರೀಕ್ಷಿಸಿದ್ದರು. ಆದರೆ, ದೀಪ/ಟಾರ್ಚ್ ಹಚ್ಚುವ ಬಗ್ಗೆ ಪ್ರಧಾನಿಯವರ ಹೇಳಿಕೆ ಕ್ರೂರ ಹಾಸ್ಯದಂತಿದೆ. ಯಾವ ವೈದ್ಯಕೀಯ ವಿಜ್ಞಾನ ಈ ಸಲಹೆಯನ್ನು ನೀಡಿದೆ ಎಂದು ಪ್ರಶ್ನಿಸಿದ ಅವರು, ಇತ್ತೀಚೆಗೆ ಜನರಿಗೆ ಗಂಟೆ ಬಾರಿಸಲು ಹೇಳಿದಂತೆ, ಸರ್ಕಾರದ ಜವಾಬ್ದಾರಿಯಿಂದ ಧಾರ್ಮಿಕ ನಿಗೂಢತೆಯೆಡೆಗೆ, ಸರ್ಕಾರ ಮತ್ತು ಆಳುವ ಪಕ್ಷಕ್ಕೆ ಕುರುಡು ವಿಧೇಯತೆಯೆಡೆಗೆ ಜನರ ಗಮನವನ್ನು ಸೆಳೆಯಲು ಮಾಡಿರುವ ಚತುರ ತಂತ್ರ ಇದಾಗಿದೆ. ಜನತೆ ಎಚ್ಚರಿಕೆಯಿಂದ ಇದ್ದು ಗಂಭೀರ ಪರಿಸ್ಥಿತಿಯನ್ನು ಎದುರಿಸಲು ಅವಶ್ಯಕ ಕ್ರಮಗಳನ್ನು ಕೈಗೊಳ್ಳುವುದಕ್ಕಾಗಿ ಸರ್ಕಾರಗಳ ಮೇಲೆ ಒತ್ತಡ ಹೇರಲು ತಮ್ಮ ದನಿ ಎತ್ತಬೇಕೆಂದು ಅವರು ಮನವಿ ಮಾಡಿದ್ದಾರೆ.
 

click me!